ಲೂಸಿಯಾ ಖ್ಯಾತಿಯ ಗಾಯಕ ನವೀನ್ ಸಜ್ಜು ತಮ್ಮ ವಿಶಿಷ್ಟ ಕಂಠ ಹಾಗೂ ಗಾಯನದ ಮೂಲಕ ಕನ್ನಡ ಸಿನಿ ರಸಿಕರು ಹಾಗೂ ಸಂಗೀತ ಪ್ರೇಮಿಗಳ ಮನ ಗೆದ್ದಿದ್ದಾರೆ. ಈಗ ನವೀನ್ ಸಜ್ಜು ಅವರು ನಾಯಕ ನಟನಾಗಿ ಸ್ಯಾಂಡಲ್ವುಡ್ಗೆ ಎಂಟ್ರಿ ಕೊಡುತ್ತಿದ್ದಾರೆ. ನವೀನ್ ಹೊಸ ಪಯಣಕ್ಕೆ ಕನ್ನಡ ಚಿತ್ರರಂಗದ ತಾರೆಯರು ಕೂಡ ಸಾಥ್ ಕೊಟ್ಟಿದ್ದಾರೆ. ‘ಲೋ ನವೀನ’ ಸಿನಿಮಾದ ಟೈಟಲ್ನ್ನು ಸ್ಯಾಂಡಲ್ವುಡ್ ಹಾಗೂ ಕಿರುತೆರೆಯ 100 ಜನ ನಟ-ನಟಿಯರು ತಮ್ಮ, ತಮ್ಮ ಸೋಷಿಯಲ್ ಮೀಡಿಯಾಗಳ ಮೂಲಕ ನವೀನ್ ಸಜ್ಜು ಚೊಚ್ಚಲ ಸಿನಿಮಾಗೆ ಶುಭ ಕೋರಿದ್ದಾರೆ.
ಲೋ ನವೀನ ಹಳ್ಳಿ ಸೊಗಡಿನ ಚಿತ್ರವಾಗಿದ್ದು, ಸ್ವತಃ ನವೀನ್ ಸಜ್ಜು ಅವರೇ ಈ ಸಿನಿಮಾಗೆ ಸಂಗೀತ ನಿರ್ದೇಶನ ಮಾಡುತ್ತಿದ್ದಾರೆ. ಧನುರ್ದಾರಿ ಪವನ್ ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳುತ್ತಿದ್ದು, ಚಿತ್ರಕ್ಕೆ ಮೂರು ಜನ ಸಿನಿಮಾಟೋಗ್ರಾಫರ್ ಗಳಿರುವುದು ವಿಶೇಷ. ಬಿಗ್ ಬಾಸ್ ಖ್ಯಾತಿಯ ಅಕ್ಷತಾ ಪಾಂಡವಪುರ ಹಾಗೂ ಪ್ರಸನ್ನ ಸಾಗರ ಅವರ ವಸ್ತ್ರ ವಿನ್ಯಾಸ ಲೋ ನವೀನ ಚಿತ್ರಕ್ಕಿದೆ. ಎನ್ ಎಸ್-ನವೀನ್ ಸಜ್ಜು ಸ್ಟುಡಿಯೋ ಬ್ಯಾನರ್ ಅಡಿ ತಯಾರಾರಗುತ್ತಿರುವ ಸಿನಿಮಾಗೆ ಅನಿವಾಸಿ ಭಾರತೀಯರಾದ ವರ್ಜೀನಿಯಾ ನಿವಾಸಿ ಕೀರ್ತಿ ಸ್ವಾಮಿ ಬಂಡವಾಳ ಹೂಡಿದ್ದಾರೆ.
ಮೈಸೂರು, ಮಂಡ್ಯ, ಬೆಂಗಳೂರು ಸುತ್ತಮುತ್ತ ಚಿತ್ರೀಕರಣಕ್ಕೆ ಯೋಜನೆ ಹಾಕಿಕೊಂಡಿದ್ದು, ಸಹ ನಟರು ಹಾಗೂ ತಂತ್ರಜ್ಞರ ಪಟ್ಟಿ ಅಂತಿಮಗೊಂಡಿದೆ. ಚಿತ್ರದ ನಾಯಕಿಯಾಗಿ ಹೊಸಬರನ್ನು ಈ ಚಿತ್ರದ ಮೂಲಕ ಚಂದನವನಕ್ಕೆ ಚಿತ್ರತಂಡ ಪರಿಚಯ ಮಾಡಲಿದೆ. ನವೀನ್ ಸಜ್ಜು ಮುಖ್ಯಪಾತ್ರದಲ್ಲಿ ನಟಿಸಿರುವ ಮ್ಯಾನ್ ಷನ್ ಹೌಸ್ ಮುತ್ತು ಚಿತ್ರವು ಬಿಡುಗಡೆಗೆ ಸಿದ್ದಗೊಂಡಿರುವ ಹೊತ್ತಿನಲ್ಲೇ ಲೋ ನವೀನ ಚಿತ್ರ ಸೆಟ್ಟೇರಿದೆ. ಕಲರ್ಸ್ ಕನ್ನಡದ ಚುಕ್ಕಿ ತಾರೆ ಧಾರಾವಾಹಿಯಲ್ಲಿ ಮಾಗಡಿ ರೋಡ್ ಮಲ್ಲಿಕಾರ್ಜುನನಾಗಿ ತಮ್ಮ ನಟನಾ ಕೌಶಲ್ಯದಿಂದ ಜನರ ಮೆಚ್ಚುಗೆಗೆ ಪಾತ್ರರಾಗಿದ್ದ ಸಿಂಗರ್ ನವೀನ್ ಸಜ್ಜು ಬೆಳ್ಳಿ ತೆರೆಯ ಮೂಲಕ ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ.
ಇದನ್ನೂ ಓದಿ : ರಮೇಶ್ ರೆಡ್ಡಿ ನಿರ್ಮಾಣದ “ಘುಸ್ಪೈಥಿಯಾ” ಚಿತ್ರ ಆ.9ರಂದು ತೆರೆಗೆ..!