ಬೆಂಗಳೂರು : ಖ್ಯಾತ ಹಿರಿಯ ಸಾಹಿತಿ ಡಾ. ಕಮಲಾ ಹಂಪನಾ (89) ಅವರು ಇಂದು ಬೆಳಗ್ಗೆ ಹೃದಯಾಘಾತದಿಂದ ನಿಧನರಾಗಿದ್ದಾರೆ. ವಯೋಸಹಜ ಅನಾರೋಗ್ಯ ಸಮಸ್ಯೆ ಎದುರಿಸುತ್ತಿದ್ದ ಇವರು, ಬೆಂಗಳೂರಿನ ರಾಜರಾಜೇಶ್ವರಿ ನಗರದಲ್ಲಿರುವ ಮಗಳ ಮನೆಯಲ್ಲಿದ್ದರು. ನಾಡಿನ ಅಗ್ರಗಣ್ಯ ಮಹಿಳಾ ಸಾಹಿತಿಯಾಗಿದ್ದ ನಾಡೋಜ ಕಮಲ ಹಂಪನಾ ಅವರಿಗೆ 89 ವಯಸ್ಸಾಗಿತ್ತು. ರಾಜಾಜಿನಗರದ ಮಗಳ ಮನೆಯಲ್ಲಿ ಮಲಗಿದ್ದ ಅವರು ಹೃದಯಾಘಾತದಿಂದ ನಿಧನ ಹೊಂದಿದ್ದಾರೆ.
ಇಂದು ಸಂಜೆಯವರೆಗೆ ಅವರ ಮನೆಯಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ. ಬಳಿಕ ಅವರ ಇಚ್ಛೆಯಂತೆ ಬೆಂಗಳೂರಿನ ರಾಮಯ್ಯ ಮೆಡಿಕಲ್ ಕಾಲೇಜಿಗೆ ಡಾ. ಕಮಲಾ ಹಂಪನಾ ಅವರ ದೇಹವನ್ನು ದಾನ ಮಾಡಲಾಗುವುದು ಎಂದು ಅವರ ಕುಟುಂಬ ಮೂಲಗಳು ತಿಳಿಸಿವೆ.
ಡಾ. ಕಮಲಾ ಹಂಪನಾ ಅವರು ಸಾಹಿತಿ, ಸಂಶೋಧಕರಾಗಿರುವ ಪತಿ ಹಂಪಾ ನಾಗರಾಜಯ್ಯ, ಇಬ್ಬರು ಪುತ್ರಿಯರನ್ನ ಹಾಗೂ ಒಬ್ಬ ಪುತ್ರನನ್ನ ಅಗಲಿದ್ದಾರೆ. ಕಮಲಾ ಹಂಪನಾ ಅವರು 60 ವರ್ಷಗಳ ಕಾಲ ಸಾಹಿತ್ಯ ಕ್ಷೇತ್ರದಲ್ಲಿ ಅವಿರತವಾಗಿ ಕೃಷಿ ಮಾಡಿದ್ದಾರೆ. ಮೂಡಬಿದರೆಯಲ್ಲಿ ನಡೆದ 71ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಇವರು ಅಧ್ಯಕ್ಷರಾಗಿದ್ದರು. ದಾನಚಿಂತಾಮಣಿ ಅತ್ತಿಮಬ್ಬೆ ಪ್ರಶಸ್ತಿ ಹಾಗೂ ಹಂಪಿ ಕನ್ನಡ ವಿಶ್ವವಿದ್ಯಾಲಯವು ಕೊಡುವ ನಾಡೋಜ ಪ್ರಶಸ್ತಿ ಇವರಿಗೆ ಸಂದಿವೆ.
ಇವರು ಅನೇಕ ಕಥಾಸಂಕಲನ, ಸಂಶೋಧನೆ, ವಿಮರ್ಶೆ-ವೈಚಾರಿಕ, ವಚನ ಸಂಕಲನ, ಶಿಶು ಸಾಹಿತ್ಯ, ಕಾದಂಬರಿಗಳನ್ನು ಬರೆದಿದ್ದಾರೆ. ನಕ್ಕಿತು ಹಾಲಿನ ಬಟ್ಟಲು, ರೆಕ್ಕೆ ಮುರಿದಿತ್ತು, ಚಂದನಾ, ಬಣವೆ ಇವರ ಕಥಾಸಂಕಲನಗಳು ಆಗಿವೆ. ತುರಂಗ ಭಾರತ – ಒಂದು ಅಧ್ಯಯನ, ಶಾಂತಿನಾಥ, ಆದರ್ಶ ಜೈನ ಮಹಿಳೆಯರು, ಅನೇಕಾಂತವಾದ, ಜೈನ ಸಾಹಿತ್ಯ ಪರಿಸರ, ನಾಡು ನುಡಿ ನಾವು, ಬದ್ದವಣ ಹಾಗೂ ರೋಣದ ಬಸದಿ ಇವರ ಸಂಶೋಧನೆಗಳು ಆಗಿವೆ.
ಇದನ್ನೂ ಓದಿ : ಮಂಗಳೂರು : ಪತ್ನಿಯನ್ನು ಕಟ್ಟಿ ಹಾಕಿ, ಪತಿಗೆ ಚೂರಿ ಇರಿದು ಮನೆ ದರೋಡೆ – ನಗದು, ಚಿನ್ನಾಭರಣ ದೋಚಿ ದುಷ್ಕರ್ಮಿಗಳು ಎಸ್ಕೇಪ್..!