ಬೆಂಗಳೂರು : ವಾಲ್ಮೀಕಿ ನಿಗಮದಲ್ಲಿ ನಡೆದಿರುವ ಬಹುಕೋಟಿ ರೂಪಾಯಿ ಹಗರಣದ ತನಿಖೆಯನ್ನು ಚುರುಕುಗೊಳಿಸಿರುವ ಎಸ್ಐಟಿ, ಇದೀಗ ಮತ್ತಷ್ಟು ಹಣ ಜಪ್ತಿ ಮಾಡಿಕೊಂಡಿದೆ. ಬಂಧಿತ ಆರೋಪಿ ನಾಗೇಶ್ವರ್ ಮನೆಯಿಂದ 1.49 ಕೋಟಿ ರೂ. ಜಪ್ತಿ ಮಾಡಿದ್ದಾರೆ. ಈ ಹಣವನ್ನು ಜಕ್ಕೂರಿನ ಮನೆಯಲ್ಲಿ ಇಡಲಾಗಿತ್ತು. ಮನೆ ಮೇಲೆ ದಾಳಿ ನಡೆಸಿದ SIT ಅಧಿಕಾರಿಗಳ ತಂಡವು ಹಣ ಜಪ್ತಿ ಮಾಡಿಕೊಂಡಿದೆ.
ಈ ಹಿಂದೆ ಆರೋಪಿ ಸತ್ಯನಾರಾಯಣ್ ವರ್ಮಾ ಎಂಬುವವರನ್ನು ಹೈದರಾಬಾದ್ನಲ್ಲಿ ಬಂಧಿಸಲಾಗಿತ್ತು. ಅವರಿಂದ 12 ಕೋಟಿ ನಗದು ಜಪ್ತಿ ಮಾಡಿಕೊಳ್ಳಲಾಗಿತ್ತು. ನಿಗಮದ ಮಾಜಿ ವ್ಯವಸ್ಥಾಪಕನ ಆಪ್ತನ ಬಳಿಯಿಂದ 30 ಲಕ್ಷ ಜಪ್ತಿ ಮಾಡಿಕೊಳ್ಳಲಾಗಿತ್ತು. ಇದುವರೆಗೂ ಈ ಪ್ರಕರಣದಲ್ಲಿ13.62 ಕೋಟಿಯಷ್ಟು ನಗದು ಜಪ್ತಿ ಮಾಡಿಕೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಎಂ.ಜಿ.ರಸ್ತೆಯ ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾದಲ್ಲಿರುವ ಮಹರ್ಷಿ ವಾಲ್ಮೀಕಿ ಅಭಿವೃದ್ಧಿ ನಿಗಮದ ಖಾತೆಯಿಂದ 18 ಖಾತೆಗಳಿಗೆ 94 ಕೋಟಿ ರೂ. ಅಕ್ರಮವಾಗಿ ವರ್ಗಾವಣೆಯಾಗಿತ್ತು. ಈ ಸಂಬಂಧ ತನಿಖೆ ನಡೆಸಲು ರಾಜ್ಯ ಸರ್ಕಾರ ಎಸ್ಐಟಿ ರಚಿಸಿದೆ. ಈಗಾಗಲೇ ಈ ಪ್ರಕರಣದಲ್ಲಿ ಆರು ಮಂದಿಯನ್ನು ಬಂಧಿಸಲಾಗಿದೆ.
ಇದನ್ನೂ ಓದಿ : ಪೋಕ್ಸೋ ಪ್ರಕರಣ : ಇಂದು ಸಿಐಡಿಯಿಂದ ಮಾಜಿ ಸಿಎಂ ಬಿಎಸ್ವೈ ವಿಚಾರಣೆ..!