ಬೆಂಗಳೂರು : ನೀಟ್ ಪರೀಕ್ಷೆಯ ನಂತರ ಇದೀಗ ಫಲಿತಾಂಶವೂ ಭಾರೀ ವಿವಾದಕ್ಕೀಡಾಗಿದ್ದು, ಈ ಬಗ್ಗೆ ಉನ್ನತ ತನಿಖೆಯಾಗಬೇಕು, ಮರು ಪರೀಕ್ಷೆ ನಡೆಸಬೇಕು ಎಂದು ರಾಜ್ಯದ ವೈದ್ಯಕೀಯ ಸೀಟು ಆಕಾಂಕ್ಷಿಗಳು ಆಗ್ರಹಿಸಿದ್ದಾರೆ. ತಪ್ಪು ಪ್ರಶ್ನೆಗಳನ್ನು ಕೇಳಿರುವುದು, ಪ್ರಶ್ನೆ ಪತ್ರಿಕೆ ಸೋರಿಕೆ ಮತ್ತು ವಿವಾದಾತ್ಮಕ ಫಲಿತಾಂಶದಿಂದ ಲಕ್ಷಾಂತರ ವೈದ್ಯಕೀಯ ಆಕಾಂಕ್ಷಿಗಳಿಗೆ ಅನ್ಯಾಯವಾಗಿದೆ. ಇದನ್ನು ಸರಿಪಡಿಸಲು ಕೇಂದ್ರ ಸರ್ಕಾರ ಮಧ್ಯ ಪ್ರವೇಶಿಸಿ ನೀಟ್ ಅಕ್ರಮದ ಸಮಗ್ರ ತನಿಖೆಗೆ ವಹಿಸಿ ಮರು ಪರೀಕ್ಷೆಗೆ ಆದೇಶಿಸಬೇಕು ಎಂದು ದೇಶಾದ್ಯಂತ ವಿದ್ಯಾರ್ಥಿಗಳು ಪ್ರೊಟೆಸ್ಟ್ ಆರಂಭಿಸಿದ್ದಾರೆ.
ಅದಕ್ಕೆ ರಾಜ್ಯದಿಂದಲೂ ವಿದ್ಯಾರ್ಥಿಗಳು ದನಿಗೂಡಿಸಿದ್ದಾರೆ. ಮೊದಲು ನೀಟ್ ಪರೀಕ್ಷೆಯ ಪ್ರಶ್ನೆ ಪತ್ರಿಕೆ ಸೋರಿಕೆ ಬಗ್ಗೆ ಗಂಭೀರ ಆರೋಪ ಕೇಳಿಬಂದಿತ್ತು. ಬಳಿಕ ಇತ್ತೀಚೆಗೆ ಪ್ರಕಟವಾದ ನೀಟ್ ಫಲಿತಾಂಶದಲ್ಲಿ ಬರೋಬ್ಬರಿ 67 ಮಂದಿ ಮೊದಲ ರ್ಯಾಂಕ್ ಹಂಚಿಕೊಂಡಿರುವುದಲ್ಲದೆ, ಈ ಪೈಕಿ 8 ಮಂದಿ ಹರಿಯಾಣದ ಒಂದೇ ಪರೀಕ್ಷಾ ಕೇಂದ್ರದಲ್ಲಿ ಪರೀಕ್ಷೆ ಬರೆದವರಾಗಿದ್ದಾರೆ. ಅಷ್ಟೇ ಅಲ್ಲ, ಆ ಆರೂ ಜನ ಒಂದೇ ನೀಟ್ ತರಬೇತಿ ಕೇಂದ್ರದವರಾಗಿರುವ ಜೊತೆಗೆ ಅವರ ರೋಲ್ ನಂಬರ್ಗಳು ಕೂಡ ಒಂದೇ ಅನುಕ್ರಮದಲ್ಲಿರುವುದು ಅನುಮಾನಗಳ ಸೃಷ್ಟಿಗೆ ಕಾರಣವಾಗಿದೆ.
ಅನುಮಾನಗಳೇನು?
1) ಒಟ್ಟು 67 ಅಭ್ಯರ್ಥಿಗಳು 99.997129 ಶೇಕಡಾವಾರು ಅಂಕ ಪಡೆದಿದ್ದೇಗೆ? ಈ ವರ್ಷ ಎಲ್ಲಾ ವಿಭಾಗಗಳಿಗೆ NEET ಕಟ್-ಆಫ್ಗಳು ಸಹ ಹೆಚ್ಚಿವೆ. ಹೆಚ್ಚೆಂದರೆ 6 ರಿಂದ ಏಳು ವಿದ್ಯಾರ್ಥಿಗಳು ಪೂರ್ಣ ಮಾರ್ಕ್ ಪಡೀತಿದ್ರು. ಆದರೆ ಈ ಸಲ ಬರೋಬ್ಬರಿ 67 ಮಂದಿ 720 ಮಾರ್ಕ್ ಪಡೆದಿದ್ದಾರೆ. ಇಷ್ಟು ಮಂದಿ ಆಲ್ ಇಂಡಿಯಾ ರಾಂಕ್ ಹಂಚಿಕೊಳ್ಳಲು ಹೇಗೆ ಸಾಧ್ಯ?
2) ಈ ಬಾರಿಯ ನೀಟ್ ಫಲಿತಾಂಶದಲ್ಲಿ ಕೇವಲ 720 ಪೂರ್ಣ ಅಂಕದೊಂದಿಗೆ ಪ್ರಥಮ ರ್ಯಾಂಕ್ ಪಡೆದವರ ಸಂಖ್ಯೆ ಮಾತ್ರವಲ್ಲ ಇತರೆ ಉತ್ತಮ ಅಂಕಗಳನ್ನು ಪಡೆದವರ ಸಂಖ್ಯೆಯಲ್ಲೂ ಭಾರೀ ಪ್ರಮಾಣದಲ್ಲಿ ಹೆಚ್ಚಾಗಿದೆ. ಉತ್ತಮ ಫಲಿತಾಂಶ ಬಂದರೂ ಸಾಕಷ್ಟು ಮಂದಿ ವೈದ್ಯಸೀಟು ಪಡೆಯುವುದು ಕಷ್ಟವಾಗಲಿದೆ ಎನ್ನುತ್ತಾರೆ ತಜ್ಞರು. ಉದಾಹರಣೆಗೆ 700 ಅಂಕ ಪಡೆದವರ ಸಂಖ್ಯೆ ಕಳೆದ ವರ್ಷ 172 ಇದ್ದರೆ ಈ ಬಾರಿ 1770ಕ್ಕೇರಿದೆ. ಕಳೆದ ಬಾರಿ 7288 ಮಂದಿ 650 ಅಂಕ ಪಡೆದಿದ್ದರೆ ಈ ಬಾರಿ ಈ ಸಂಖ್ಯೆ 29012ಕ್ಕೇರಿದೆ. ಇದೇ ರೀತಿ 602, 550, 500 ಅಂಕಗಳನ್ನು ಪಡೆದವರ ಸಂಖ್ಯೆಗಳೂ ಸಾಕಷ್ಟು ಪ್ರಮಾಣದಲ್ಲಿ ಏರಿಕೆಯಾಗಿದೆ. ಇದರಿಂದ ಕಳೆದ ವರ್ಷ ಉತ್ತಮ ಫಲಿತಾಂಶ ಎಂದು ಭಾವಿಸಿದ್ದ ಕಟ್ಆಫ್ ಅಂಕಗಳ ಬೆಲೆ ಕಡಿಮೆಯಾದಂತಾಗಿದೆ ಎನ್ನುವುದು ತಜ್ಞರ ವಾದ.
3) ಪರೀಕ್ಷೆ ನಡೆಸುವ ಮೊದಲೇ ನೀಟ್ ಯುಜಿ ಪೇಪರ್ ಸೋರಿಕೆಯಾಗಿದೆ. ಬಿಹಾರ ಪೊಲೀಸರು 13 ಜನರನ್ನು ಬಂಧಿಸಿದ್ದರು. ಪರೀಕ್ಷಾ ಏಜೆನ್ಸಿ ರಾಜಸ್ಥಾನ ಪರೀಕ್ಷಾ ಕೇಂದ್ರದಲ್ಲಿ ಮರು ಪರೀಕ್ಷೆ ಮಾಡಿತ್ತು. ವಿಭಿನ್ನ ಪ್ರಶ್ನೆ ಪತ್ರಿಕೆಗಳನ್ನು ಹೊಂದಿರುವ ಅಭ್ಯರ್ಥಿಗಳಿಗೆ ಮರು ಪರೀಕ್ಷೆ ಮಾಡಲಾಗಿತ್ತು. ಆ ಮೂಲಕ ಪ್ರಶ್ನೆ ಪತ್ರಿಕೆ ಲೋಪ ಆಗಿದೆ ಎನ್ನುವುದು ಒಪ್ಪಿಕೊಂಡಂತಲ್ಲವೇ?
4) ಗುಜರಾತ್ ಮತ್ತು ಒಡಿಶಾದಲ್ಲೂ ನೀಟ್ ಅಕ್ರಮಗಳು ವರದಿಯಾಗಿವೆ. ಗುಜರಾತ್ನ ಗೋಧ್ರಾದಲ್ಲಿ ಶಾಲಾ ಶಿಕ್ಷಕಿ ಸೇರಿ ಮೂವರ ವಿರುದ್ಧ ಕ್ರಿಮಿನಲ್ ಕೇಸ್ ದಾಖಲಾಗಿದೆ. ಮೊಕದ್ದಮೆ ದಾಖಲಿಸಲಾಗಿದೆ, ಅವರು ಆರು ನೀಟ್ ಆಕಾಂಕ್ಷಿಗಳಿಗೆ ಪ್ರಶ್ನೆ ಪತ್ರಿಕೆಯನ್ನು ಪರಿಹರಿಸಲು ಪ್ರತಿ ಅಭ್ಯರ್ಥಿಯಿಂದ 10 ಲಕ್ಷ ರೂಪಾಯಿಗಳಿಗೆ ಸಹಾಯ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ. ಪರೀಕ್ಷಾರ್ಥಿಯೊಬ್ಬರು ಶಿಕ್ಷಕರಿಗೆ ಮುಂಗಡವಾಗಿ ಪಾವತಿಸಿದ್ದ 7 ಲಕ್ಷ ರೂ.ಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಇದನ್ನೂ ಓದಿ : ಉತ್ತರಾಖಂಡ್ ಚಾರಣ ದುರಂತ – ರಾಜ್ಯಕ್ಕೆ ಸುರಕ್ಷಿತವಾಗಿ ಮರಳಿದ 13 ಮಂದಿ ಚಾರಣಿಗರು..!