ಬೆಂಗಳೂರು : ಉತ್ತರಾಖಂಡದ ಸಹಸ್ರತಾಲ್ಗೆ ಚಾರಣಕ್ಕೆ ಹೋಗಿದ್ದಾಗ ಹವಾಮಾನ ವೈಪರೀತ್ಯದಿಂದಾಗಿ ಕರ್ನಾಟಕದ 9 ಚಾರಣಿಗರು ಸಾವಿಗೀಡಾಗಿದ್ದಾರೆ. ಇನ್ನುಳಿದ 13 ಮಂದಿಯನ್ನು ರಕ್ಷಿಸಲಾಗಿದೆ. ಎಲ್ಲರೂ ಸುರಕ್ಷಿತವಾಗಿ ಬೆಂಗಳೂರಿಗೆ ವಾಪಸ್ ಆಗಿದ್ದಾರೆ.
ರಕ್ಷಿಸಲ್ಪಟ್ಟ ಚಾರಣಿಗರು ಬೆಂಗಳೂರು ವಿಮಾನ ನಿಲ್ದಾಣದ ಟರ್ಮಿನಲ್ 1ಗೆ ನಿನ್ನೆ ರಾತ್ರಿ ವೇಳೆ ಬಂದಿಳಿದಿದ್ದಾರೆ. ಚಾರಣಿಗರು ಇಂಡಿಗೋ ಏರ್ಲೈನ್ಸ್ ವಿಮಾನದಲ್ಲಿ ಸಚಿವ ಕೃಷ್ಣಬೈರೇಗೌಡ ಜೊತೆಗೆ ಬೆಂಗಳೂರಿಗೆ ಬಂದಿಳಿದಿದ್ದಾರೆ. ಸಾವಿನ ಕೂಪದಂತಿದ್ದ ಸಹಸ್ರತಾಲ್ನ ಹಿಮದ ಹೊದಿಕೆಯಿಂದ ಬಚಾವಾಗಿ ಸಿಲಿಕಾನ್ ಸಿಟಿಗೆ ಬಂದಿಳಿದ ಚಾರಣಿಗರು ನಿಟ್ಟುಸಿರು ಬಿಟ್ಟಿದ್ದಾರೆ.
ದುರಂತದ ಬಗ್ಗೆ ಸಚಿವ ಕೃಷ್ಣಬೈರೇಗೌಡ ಪ್ರತಿಕ್ರಿಯೆ : ಒಟ್ಟು 22 ಜನ ಬೆಂಗಳೂರಿಗರು ಚಾರಣಕ್ಕೆ ಹೋಗಿದ್ದರು. 9 ಜನರು ಮೃತಪಟ್ಟಿದ್ದಾರೆ. ಉಳಿದವರನ್ನ ಬೆಂಗಳೂರಿಗೆ ಕರೆದುಕೊಂಡು ಬಂದಿದ್ದೇವೆ. ಉತ್ತರಕಾಶಿಯಿಂದ ಡೆಹ್ರಾಡೂನ್ ಮೂಲಕ ಮೃತದೇಹಗಳನ್ನ ತರಲಾಗ್ತಿದೆ. 9 ಮೃತದೇಹಗಳನ್ನ ತರುವ ಚಾರ್ಟರ್ ಫ್ಲೈಟ್ ಸಿಗಲಿಲ್ಲ. ಹೀಗಾಗಿ ತಡ ಆಗುತ್ತಿದೆ. ಬೆಳಗಿನ ಜಾವದಿಂದ ಎರಡೆರೆಡು ಮೃತದೇಹಗಳಂತೆ ಐದು ಚಾರ್ಟರ್ ಫ್ಲೈಟ್ ಮೂಲಕ ಬರುತ್ತೆ ಎಂದು ಮಾಹಿತಿ ನೀಡಿದರು.
ಏನಾಗಿತ್ತು? ರಾಜ್ಯದ 21 ಚಾರಣಿಗರು ಹಾಗೂ ಓರ್ವ ಗೈಡರ್ ಒಳಗೊಂಡ ತಂಡವು ಮೇ 28 ರಂದು ಟ್ರೆಕ್ಕಿಂಗ್ಗೆ ಉತ್ತಾರಖಂಡಕ್ಕೆ ಹೋಗಿತ್ತು. ಉತ್ತರಾಕಾಶಿಯಿಂದ 35 ಕಿಮೀ ದೂರದ ಅತ್ಯಂತ ಕಠಿಣ ಹಾದಿಯ ಸಹಸ್ರತಾಲ್ ಮಯಳಿ ಎಂಬ ಎತ್ತರದ ಪ್ರದೇಶದಲ್ಲಿ ಜೂ.4 ರಂದು ಬೆಳಗ್ಗೆ ಚಾರಣ ಆರಂಭಿಸಿದ್ದರು. ಚಾರಣದ ಗಮ್ಯಸ್ಥಾನ ತಲುಪಿ ನಂತರ ಶಿಬಿರಕ್ಕೆ ವಾಪಸ್ ಆಗುತ್ತಿದ್ದಾಗ ಮಧ್ಯಾಹ್ನದ ಹೊತ್ತಿಗೆ ಹಿಮಗಾಳಿಯಿಂದಾಗಿ ಚಾರಣಿಗರು ಅಪಾಯಕ್ಕೆ ಸಿಲುಕಿದ್ದರು.
ಇದನ್ನೂ ಓದಿ : ಮಾನನಷ್ಟ ಮೊಕದ್ದಮೆ : ಇಂದು ಬೆಂಗಳೂರು ಕೋರ್ಟ್ಗೆ ರಾಹುಲ್ ಗಾಂಧಿ ಹಾಜರು..!