“ಕಾಂತಾರ ಅಧ್ಯಾಯ 1” ಚಿತ್ರದ ಕೆಲಸಗಳು ತುಂಬಾ ಬಿರುಸಿನಿಂದ ಸಾಗುತ್ತಿದ್ದು, ಶೂಟಿಂಗ್ಗಾಗಿ ಈಗಾಗಲೇ ಕುಂದಾಪುರದಲ್ಲಿ ದೊಡ್ಡ ಸೆಟ್ ಕೂಡ ಹಾಕಲಾಗಿದೆ. ಅಲ್ಲಿಯೇ ಶೂಟಿಂಗ್ಗಳು ನಡೆಯುತ್ತಿದೆ. ವಿಶೇಷ ಎಂದರೆ ಈಗಾಗಲೇ ಒಂದು ಹಂತದ ಶೂಟಿಂಗ್ ಪೂರ್ತಿ ಆಗಿದೆ ಎಂಬ ಮಾಹಿತಿಯಿದೆ. ಸಿನಿಮಾದ ಇಂಡೋರ್, ಔಟ್ಡೋರ್ ಶೂಟ್ಗಳನ್ನು ಅಲ್ಲಿಯೇ ಮಾಡಲಾಗುತ್ತಿದೆ ಎಂದು ಪ್ಯಾನ್ ಇಂಡಿಯಾ ಸ್ಟಾರ್ ರಿಷಬ್ ಶೆಟ್ಟಿಯವರು ಮಾಹಿತಿ ನೀಡಿದ್ದಾರೆ.
ಸದ್ಯ ರಿಷಬ್ ಶೆಟ್ಟಿ ಕುಟುಂಬ ಸಮೇತರಾಗಿ ಕುಂದಾಪುರಕ್ಕೆ ಶಿಫ್ಟ್ ಆಗಿದ್ದಾರೆ. ಮಗನನ್ನು ಕುಂದಾಪುರದ ಶಾಲೆಗೆ ಸೇರಿಸಿದ್ದಾರೆ. ‘‘ಕಾಂತಾರ ಚಾಪ್ಟರ್ 1″ ಚಿತ್ರದ ಶೂಟಿಂಗ್ ಸದ್ಯ ಕುಂದಾಪುರದಲ್ಲಿ ನಡೆಯುತ್ತಿರುವುದರಿಂದ ಪತ್ನಿ ಪ್ರಗತಿ ಹಾಗೂ ಮಕ್ಕಳ ಜೊತೆ ಅವರು ಅಲ್ಲಿಗೆ ತೆರಳಿದ್ದಾರೆ.
ಈ ಸಿನಿಮಾ ಶೂಟ್ಗಾಗಿ ಈ ಮೊದಲು ರಿಷಬ್ 10 ಕೆಜಿ ತೂಕ ಹೆಚ್ಚಿಸಿಕೊಂಡಿದ್ದರು. ಈಗ 8 ಕೆಜಿ ಇಳಿಸಿಕೊಂಡಿದ್ದಾರೆ. “ಈಗಾಗಲೇ ಒಂದು ಹಂತದ ಶೂಟಿಂಗ್ ಮುಗಿದಿದ್ದು, 100ಕ್ಕೂ ಅಧಿಕ ದಿನ ಚಿತ್ರದ ಶೂಟಿಂಗ್ ನಡೆಯಲಿದೆ. ಬಳಿಕ ಬೇರೆ ಭಾಷೆಗಳಿಗೆ ಡಬ್ಬಿಂಗ್ ನಡೆಯಲಿದೆ. ಸಿನಿಮಾ ಕೆಲಸ ಈ ವರ್ಷ ಪೂರ್ಣಗೊಳ್ಳಲಿದೆ. ಬಿಡುಗಡೆ ಮುಂದಿನ ವರ್ಷ ಆಗುತ್ತದೆ. ರಿಲೀಸ್ ಬಗ್ಗೆ ಹೊಂಬಾಳೆ ಫಿಲ್ಮ್ಸ್ ನಿರ್ಧಾರ ತೆಗೆದುಕೊಳ್ಳುತ್ತದೆ” ಎಂದು ರಿಷಬ್ ಹೇಳಿದ್ದಾರೆ.
ಈ ನಡುವೆ ರಿಷಬ್ ತಾವು ದತ್ತು ಪಡೆದಿರುವ ತಮ್ಮೂರಿನ ಕನ್ನಡ ಶಾಲೆಯನ್ನು ಸುಂದರಗೊಳಿಸಿದ್ದಾರೆ. ಅಲ್ಲದೇ, ಕಟ್ಟಡದ ವಿನ್ಯಾಸವನ್ನು ಬದಲಾಯಿಸಿದ್ದಾರೆ. ಅವರೇ ಶಾಲೆಗೆ ಶಿಕ್ಷಕರನ್ನೂ ಒದಗಿಸಿದ್ದಾರೆ. ಈಗಾಗಲೇ 40ಕ್ಕೂ ಹೆಚ್ಚು ಮಕ್ಕಳು ಶಾಲೆಗೆ ಪ್ರವೇಶಾತಿ ಪಡೆದಿದ್ದಾರಂತೆ. ಕಾಂತಾರದ ಜೊತೆ ಜೊತೆಗೆ ಆ ಕೆಲಸವನ್ನೂ ಮಾಡಿದ ತೃಪ್ತಿ ನನಗಿದೆ ಎಂದು ರಿಷಬ್ ಹೆಳಿದ್ದಾರೆ.
‘ಕಾಂತಾರ’ ಯಶಸ್ಸಿನ ಬಳಿಕ ರಿಷಬ್ ಶೆಟ್ಟಿ ಕೆಲಸದ ಮೇಲೆ ಸಾಕಷ್ಟು ನಿರೀಕ್ಷೆ ದುಪ್ಪಟ್ಟಾಗಿದೆ. ಅವರು ಸಾಕಷ್ಟು ಶ್ರದ್ಧೆಯಿಂದ ಪ್ರೀಕ್ವೆಲ್ ಕೆಲಸಗಳನ್ನು ಮಾಡುತ್ತಿದ್ದಾರೆ. ‘ಕಾಂತಾರ’ ಸಿನಿಮಾಗಿಂತ ಹಿಂದೇನಾಗಿತ್ತು ಎಂಬುದನ್ನು ಈ ಚಿತ್ರದಲ್ಲಿ ಹೇಳಲಾಗುತ್ತಿದೆ. ಈ ಚಿತ್ರಕ್ಕಾಗಿ ಅವರು ಕಲರಿಪಯಟ್ಟು ಕೂಡ ಕಲಿಯುತ್ತಿದ್ದಾರೆ ಅನ್ನೋದು ವಿಶೇಷ.
ಇದನ್ನೂ ಓದಿ : ಡೈಲಾಗ್ ಕಿಂಗ್, ಶಾಸಕ ಪ್ರದೀಪ್ ಈಶ್ವರ್ ಮನೆ ಮೇಲೆ ಕಲ್ಲು ತೂರಾಟ : ಕಿಟಕಿ ಗಾಜುಗಳು ಪುಡಿ ಪುಡಿ..!