ಚಿತ್ರದುರ್ಗ : ನಗರದ ಚಳ್ಳಕೆರೆ ಗೇಟ್ ಸಮೀಪದ ರಸ್ತೆಯಲ್ಲಿರುವ ಪಾಳುಬಿದ್ದ ಜಗನ್ನಾಥರೆಡ್ಡಿ ಎಂಬುವವರ ಮನೆಯಲ್ಲಿ 2023ರ ಡಿಸೆಂಬರ್ 28ರಂದು ನಿವೃತ್ತ ಇಂಜಿನಿಯರ್ ಜಗನ್ನಾಥರೆಡ್ಡಿ, ಪತ್ನಿ ಪ್ರೇಮಕ್ಕ, ಪುತ್ರಿ ತ್ರಿವೇಣಿ, ಪುತ್ರ ಕೃಷ್ಣಾರೆಡ್ಡಿ ಹಾಗೂ ನರೇಂದ್ರರೆಡ್ಡಿ ಸೇರಿದಂತೆ ಐವರ ಅಸ್ಥಿಪಂಜರ ಪತ್ತೆಯಾಗಿದ್ದವು. ಇದೀಗ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಎಫ್ಎಸ್ಎಲ್ ರಿಪೋರ್ಟ್ ಬಂದಿದ್ದು, ಚಿತ್ರದುರ್ಗ ಪೊಲೀಸರ ಕೈ ಸೇರಿದೆ. ಈ ವರದಿಯಲ್ಲಿ ಸಾವಿನ ಕುರಿತು ಸತ್ಯಾಂಶ ಬಯಲಾಗಿದೆ.
ಚಿತ್ರದುರ್ಗ ಎಸ್ಪಿ ಹೇಳಿದ್ದೇನು? ಇನ್ನು ಈ ಕುರಿತು ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಚಿತ್ರದುರ್ಗ ಎಸ್ಪಿ ಧರ್ಮೇಂದರ್ ಕುಮಾರ್ ಮೀನಾ, ‘5 ಅಸ್ಥಿಪಂಜರ ಸಿಕ್ಕ ತಕ್ಷಣ, ಪೂರ್ತಿ ಮನೆ ಅಸ್ತವ್ಯಸ್ತತೆಯಲ್ಲಿತ್ತು. ಕೂಡಲೇ ಎಫ್ಎಸ್ಎಲ್ ಟೀಂ ಕರೆಸಿ ಸೂಕ್ತ ತನಿಖೆಗೆ ಆದೇಶ ನೀಡಲಾಯಿತು. ತನಿಖಾ ತಂಡ ಹಾಗೂ FSL ತಂಡ ಸೇರಿ ಆ ಮನೆಯಿಂದ 71 ಸಾಕ್ಷ್ಯಗಳನ್ನು ಕಲೆ ಹಾಕಲಾಗಿತ್ತು. ಎಲ್ಲಾ ಸ್ಯಾಂಪಲ್ಸ್ಗಳನ್ನು ದಾವಣಗೆರೆ, ಬೆಂಗಳೂರು ಲ್ಯಾಬೋರೇಟರಿಗೆ ಕಳುಹಿಸಲಾಗಿತ್ತು. ಮರಣೋತ್ತರ ಪರೀಕ್ಷೆ ಕೂಡಾ ಡಾ.ವೇಣು ಹಾಗೂ ಕೃಷ್ಣ ನೇತೃತ್ವದಲ್ಲಿ ನಡೆಸಲಾಗಿತ್ತು.
ಈ ಬಗ್ಗೆ ಮೃತರ ಸಂಬಂಧಿಕ ಪವನ್ ಕುಮಾರ್ ನಗರದ ಬಡಾವಣೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಇದು ಜಗನ್ನಾಥ ರೆಡ್ಡಿ ಕುಟುಂಬವೇ ಎಂದು ಪವನ್ ದೂರು ನೀಡಿದ್ದರು. FSL ವರದಿಯಲ್ಲಿ ದೇಹಗಳ ಯಾವುದೇ ಭಾಗದಲ್ಲಿ ಗುರುತುಗಳು ಕಂಡು ಬಂದಿಲ್ಲ. ಅಸ್ಥಿಪಂಜರದ ಸ್ಯಾಂಪಲ್ ಗಳಲ್ಲಿ ನಿದ್ದೆ ಮಾತ್ರೆಗಳು ಸೇವನೆ ಮಾಡಿರುವ ಮಾಹಿತಿ ಸಿಕ್ಕಿದೆ. ಐದು ಮಂದಿ ನಿದ್ದೆ ಮಾತ್ರೆ ಸೇವನೆಯಿಂದ ಸಾವನ್ನಪ್ಪಿರುವುದು ಬೆಳಕಿಗೆ ಬಂದಿದೆ. ಮಾನಸಿಕ ಖಿನ್ನತೆ, ಆರೋಗ್ಯ ಸಮಸ್ಯೆಯಿಂದ ಸಾವನ್ನಪ್ಪಿರುವ ಶಂಕೆ ವ್ಯಕ್ತವಾಗಿದೆ.
FSL ರಿಪೋರ್ಟ್ ಪ್ರಕಾರ ನಿದ್ದೆ ಮಾತ್ರೆ ಸೇವನೆಯಿಂದಲೇ ಸಾವಾಗಿದೆ. ಆ ಮನೆಯಲ್ಲಿ ಔಷಧಿಗಳು, ಮಾತ್ರೆಗಳು ಸಿಕ್ಕಿವೆ. ನಮ್ಮ ತನಿಖೆ ಪ್ರಕಾರ ಫೆಬ್ರವರಿ, ಮಾರ್ಚ್ 2019 ರಲ್ಲಿ ಸಾವನ್ನಪ್ಪಿದ್ದಾರೆ ಎನ್ನಲಾಗಿದೆ. ಪೋಸ್ಟ್ ಮಾರ್ಟ್ಂ ರಿಪೋರ್ಟ್ ನಲ್ಲಿ ಖಚಿತವಾಗಿ ಹೇಳಲಾಗಿಲ್ಲ. ಆದ್ರೆ, ನಮ್ಮ ಎಲ್ಲಾ ರೀತಿಯ ಆಯಾಮಗಳ ತನಿಖೆಯಲ್ಲಿ ಈ ಸತ್ಯಾಂಶ ಬೆಳಕಿಗೆ ಬಂದಿದೆ. ಮುಂದುವರೆದ ತನಿಖೆಯನ್ನು CPI ಗೆ ಒಪ್ಪಿಸಲಾಗಿದೆ. ಇದು ಸಾವಿಗೆ ಸೂಕ್ತ ಕಾರಣ ಏನು ಎಂಬುದು ಬೆಳಕಿಗೆ ಬರಲಿದೆ. CPI ನೇತೃತ್ವದಲ್ಲಿ ತನಿಖೆ ಮುಂದುವರೆದಿದೆ ಎಂದರು.
ಇದನ್ನೂ ಓದಿ : ಕೊನೆಗೂ ಹುಬ್ಬಳ್ಳಿ ಅಂಜಲಿ ಹ*ತ್ಯೆ ಆರೋಪಿ ಅರೆಸ್ಟ್..!