ಚಂದನ್ ಶೆಟ್ಟಿ ನಟನೆಯ “ಎಲ್ರ ಕಾಲೆಳಿಯತ್ತೆ ಕಾಲ” ಚಿತ್ರ ಏ.17ಕ್ಕೆ ರಿಲೀಸ್!

ಹಾಸ್ಯ ನಟನಾಗಿ ಎಲ್ಲರ ಗಮನ ಸೆಳೆದಿರುವ ಸುಜಯ್ ಶಾಸ್ತ್ರಿ ನಿರ್ದೇಶನದ “ಎಲ್ರ ಕಾಲೆಳಿಯತ್ತೆ ಕಾಲ” ಚಿತ್ರ ಏಪ್ರಿಲ್ 17 ರಂದು ಬಿಡುಗಡೆಯಾಗುತ್ತಿದೆ. ಗೋಕುಲ ಎಂಟರ್ಟೈನರ್ಸ್ ಲಾಂಛನದಲ್ಲಿ ಗೋವಿಂದರಾಜು ಅವರು ನಿರ್ಮಿಸಿರುವ ಈ ಸಿನಿಮಾದಲ್ಲಿ ಖ್ಯಾತ ಗಾಯಕ – ಸಂಗೀತ ನಿರ್ದೇಶಕ ಚಂದನ್ ಶೆಟ್ಟಿ ನಾಯಕನಾಗಿ ನಟಿಸಿದ್ದಾರೆ. ಚಿತ್ರತಂಡ “ಮಾತು ಮಧುರ” ಎಂಬ ಹಾಡನ್ನು ಆನಂದ್ ಆಡಿಯೋ ಮೂಲಕ ಅನಾವರಣ ಮಾಡಿದೆ.

ನಿರ್ದೇಶಕ ಸುಜಯ್ ಶಾಸ್ತ್ರಿ ಅವರು, ಕಾರಣಾಂತರದಿಂದ ನಮ್ಮ ಚಿತ್ರ ಬಿಡುಗಡೆ ತಡವಾಗಿದೆ. ಈಗ ಬಿಡುಗಡೆಗೆ ಮುಹೂರ್ತ ಕೂಡಿ ಬಂದಿದೆ. ಇದೊಂದು 90 ರ ಕಾಲಘಟ್ಟದಲ್ಲಿ ನಡೆಯುವ ಕಥೆ. ಕನಕಪುರದಲ್ಲೇ ಹೆಚ್ಚಿನ ಭಾಗದ ಚಿತ್ರೀಕರಣವಾಗಿದೆ. ಸಮಯದ ಮಹತ್ವ ಸಾರುವ ಈ ಚಿತ್ರಕ್ಕೆ ನನ್ನ ಸ್ನೇಹಿತ ರಾಜಗುರು ಹೊಸಕೋಟೆ ಕಥೆ ಬರೆದಿದ್ದಾರೆ. ಕಥೆಗೆ ಈ ಶೀರ್ಷಿಕೆ ಪೂರಕವಾಗಿದೆ. ಇದು ಚಂದನ್ ಶೆಟ್ಟಿ ನಾಯಕನಾಗಿ ನಟಿಸಿರುವ ಮೊದಲ ಚಿತ್ರ. ಅರ್ಚನಾ ಕೊಟ್ಟಿಗೆ ಈ ಚಿತ್ರದ ನಾಯಕಿ. ದತ್ತಣ್ಣ, ತಾರಾ ಅನುರಾಧ, ಮಂಜು ಪಾವಗಡ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ. ಇಂದು “ಮಾತು ಮಧುರ” ಹಾಡು ಬಿಡುಗಡೆ ಮಾಡಿದ್ದೇವೆ. ಪ್ರವೀಣ್ – ಪ್ರದೀಪ್ ಸಂಗೀತ ನೀಡಿದ್ದಾರೆ. ಗೋವಿಂದರಾಜು ಅವರು ಯಾವುದೇ ಕೊರತೆ ಬಾರದ ಹಾಗೆ ನಿರ್ಮಾಣ ಮಾಡಿದ್ದಾರೆ. ಕೌಟುಂಬಿಕ ಕಾಮಿಡಿ ಜಾನರ್ ನ ಈ ಚಿತ್ರ ಏಪ್ರಿಲ್ 17 ರಂದು ಬಿಡುಗಡೆಯಾಗುತ್ತಿದೆ. ನಿಮ್ಮೆಲ್ಲರ ಪ್ರೋತ್ಸಾಹವಿರಲಿ ಎಂದರು.

ಇದು ನಾನು ನಾಯಕನಾಗಿ ನಟಿಸಿರುವ ಮೊದಲ ಚಿತ್ರ. ಸಾಕಷ್ಟು ತಯಾರಿ ಮಾಡಿಕೊಂಡು ಈ ಚಿತ್ರದಲ್ಲಿ ನಟಿಸಿದ್ದೇನೆ. ಪಾತ್ರಕ್ಕಾಗಿ ದೇಹದ ತೂಕ ಸಹ ಹೆಚ್ಚಿಸಿಕೊಂಡಿದ್ದೆ. ಸಮಯಕ್ಕೆ ಬೆಲೆ ಕೊಡಬೇಕು. ಇಲ್ಲದಿದ್ದರೆ ಏನೆಲ್ಲಾ ಆಗುತ್ತದೆ ಎಂಬುದನ್ನು ಈ ಚಿತ್ರದಲ್ಲಿ ಮನಮುಟ್ಟುವ ಹಾಗೆ ತೋರಿಸಿದ್ದಾರೆ. ಇಂದು ಬಿಡುಗಡೆಯಾಗಿರುವ ಹಾಡು ಚೆನ್ನಾಗಿದೆ ಎಂದು ನಾಯಕ ಚಂದನ್ ಶೆಟ್ಟಿ ಹೇಳಿದರು.

ಇದು ನಮ್ಮ ಸಂಸ್ಥೆಯಿಂದ ನಿರ್ಮಾಣವಾಗಿರುವ ಮೂರನೇ ಚಿತ್ರ. ಒಂದೊಳ್ಳೆ ಸಂದೇಶವಿರುವ ಚಿತ್ರವೂ ಹೌದು. ನಮ್ಮ ಚಿತ್ರವನ್ನು ಎಲ್ಲರು ಚಿತ್ರಮಂದಿರಗಳಲ್ಲೇ ನೋಡಿ ಎಂದು ನಿರ್ಮಾಪಕ ಗೋವಿಂದರಾಜು ತಿಳಿಸಿದರು.

ಸಂಗೀತ ನಿರ್ದೇಶಕರಾದ ಪ್ರವೀಣ್ – ಪ್ರದೀಪ್ ಅವರು, ಈ ಚಿತ್ರದಲ್ಲಿ ಐದು ಹಾಡುಗಳಿದೆ. ಇಂದು ಬಿಡುಗಡೆಯಾಗಿರುವ “ಮಾತು ಮಧುರ” ಹಾಡನ್ನು ದರ್ಶನ್ ನಾರಾಯಣ್ ಹಾಗೂ ಅನುರಾಧಾ ಭಟ್ ಹಾಡಿದ್ದಾರೆ. ನಾಲ್ಕು ಹಾಡುಗಳು 90ರ ಕಾಲಘಟದ ಹಾಡುಗಳ ಹಾಗೆ ಇರುತ್ತದೆ. ಒಂದು ಪ್ರಮೋಷನ್ ಸಾಂಗ್ ಇದ್ದು, ಅದನ್ನು ಚಂದನ್ ಶೆಟ್ಟಿ ಅವರೆ ಹಾಡಿ ಸಂಗೀತ ಸಂಯೋಜನೆ ಮಾಡಿದ್ದಾರೆ ಎಂದರು.

ವಸಂತ ನನ್ನ ಪಾತ್ರದ ಹೆಸರು. ನಾನು ಈ ಚಿತ್ರದಲ್ಲಿ ಮೆಸ್ ಓನರ್ ಎಂದು ನಾಯಕಿ ಅರ್ಚನಾ ಕೊಟ್ಟಿಗೆ ಹೇಳಿದರು. ಚಿತ್ರ ಆರಂಭವಾದ ಕುರಿತು ಹಾಗೂ ಕಥೆ ಬಗ್ಗೆ ಕಥೆ ಬರೆದಿರುವ ರಾಜಗುರು ಹೊಸಕೋಟೆ ಮಾಹಿತಿ ನೀಡಿದರು.

ಇದನ್ನೂ ಓದಿ : ಹರಿವರಾಸನಂ ನಿರ್ದೇಶನದ “ಮಗ್ಗಿಪುಸ್ತಕ” ಸಿನಿಮಾಗೆ 50ರ ಸಂಭ್ರಮ!

Btv Kannada
Author: Btv Kannada

Leave a Comment

Read More

Read More