ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರು ಶಿವಕುಮಾರ ಸ್ವಾಮೀಜಿಗಳ 119ನೇ ಜನ್ಮದಿನೋತ್ಸವ ಕಾರ್ಯಕ್ರಮ ಹಿನ್ನೆಲೆ ಸಿದ್ಧಗಂಗಾ ಮಠಕ್ಕೆ ಭೇಟಿ ನೀಡಿದ್ದಾರೆ. ಈ ವೇಳೆ ಮಾತನಾಡಿದ ಅವರು, ಶ್ರೀ ಶಿವಕುಮಾರ್ ಸ್ವಾಮೀಜಿಗಳು ನಡೆದಾಡುವ ದೇವರು. ಅವರನ್ನು ಅನೇಕ ಬಾರಿ ಪ್ರತ್ಯಕ್ಷವಾಗಿ ಕಂಡಿದ್ದೇನೆ. ಹಾಗಾಗಿ ತುಮಕೂರಿಗೆ ಬಂದಾಗ ದೇವಲೋಕಕ್ಕೆ ಬಂದಾಗೆ ಅನಿಸುತ್ತದೆ ಎಂದರು.
ಶ್ರೀ ಶಿವಕುಮಾರ್ ಸ್ವಾಮೀಜಿಗಳು ದೈಹಿಕವಾಗಿ ನಮ್ಮ ಜೊತೆ ಇಲ್ಲದಿದ್ದರೂ ಅವರ ಭಕ್ತಿಯ ತಪಸ್ಸು ಇನ್ನೂ ಇದೆ. ಶ್ರೀ ಸಿದ್ದಗಂಗಾ ಮಠ ಆಧುನಿಕ ಸಂಸ್ಕಾರ ಕೇಂದ್ರ. ಸಿದ್ದಗಂಗಾ ಮಠ ಅನ್ನದಾಸೋಹ, ಅಕ್ಷರದಾಸೋಹ ಹಾಗೂ ಯಾವುದೇ ವಿಶ್ವವಿದ್ಯಾನಿಲಯದಲ್ಲಿ ಇರದಂತಹ ಸಂಸ್ಕಾರವನ್ನು ಕೊಡುವಂತಹ ಏಕೈಕ ಕೇಂದ್ರ ಎಂದು ಪ್ರಹ್ಲಾದ್ ಜೋಶಿ ಹೇಳಿದರು.
ಶ್ರೀ ಶಿವಕುಮಾರ್ ಸ್ವಾಮೀಜಿಗಳು ಒಬ್ಬ ಮಹಾನ್ ಸಂತರು, ಅಷ್ಟೇ ಅಲ್ಲದೆ ಅವರು ಹಸಿವಿನ ನೋವನ್ನು ಅರ್ಥಮಾಡಿಕೊಂಡವರು. ಅನಾಥರಿಗೆ ಶ್ರೀ ಶಿವಕುಮಾರ್ ಸ್ವಾಮೀಜಿಗಳು ಅಪ್ಪನಾಗಿದ್ದರು. ಜಾತಿ-ಧರ್ಮ ಭೇದಿಸಿ ಯಾರೂ ಹಸಿವಿನಿಂದ ಇರಬಾರದು, ಬಡವರು ಜ್ಞಾನದಿಂದ ವಂಚಿತರಾಗಬಾರದೆಂಬ ಕಾಯಕ ಸಿದ್ದಾಂತವನ್ನು ಕೊಟ್ಟವರು ಸಿದ್ದಗಂಗಾ ಮಠದ ಶ್ರೀಗಳು.
ರಾಜಕಾರಣಿಗಳು ದೇಶವನ್ನು ಆಳಬಹುದು ಆದರೆ ಶಿವಕುಮಾರ್ ಸ್ವಾಮೀಜಿ ಸಮಾಜದ ಜನರೇಶನ್ನ್ನು ಮುಂದುಕ್ಕೆ ನಡೆಸಿದ್ದಾರೆ. ಶ್ರೀ ಶಿವಕುಮಾರ್ ಸ್ವಾಮೀಜಿಗಳು ಮನುಷ್ಯನಿಂದ ಮಹದೇವನಾಗಿದ್ದಾರೆ ಎಂದು ಶಿವಕುಮಾರ ಸ್ವಾಮೀಜಿಗಳ ಸೇವೆಗಳನ್ನು ಕೊಂಡಾಡಿದ್ದಾರೆ.
ಇದನ್ನೂ ಓದಿ : ‘ಪ್ರಜಾಕೀಯ’ ಆಪ್ ರಿಲೀಸ್ ಮಾಡಿದ ರಿಯಲ್ ಸ್ಟಾರ್ – ಆಪ್ ವಿಶೇಷತೆಯೇನು?










