ಬೆಂಗಳೂರು : ಶತಮಾನಗಳಷ್ಟು ಹಳೆಯದಾದ, ಮಾಜಿ ಸಿಎಂ ಎಸ್. ನಿಜಲಿಂಗಪ್ಪನವರ ರಾಜೀನಾಮೆಗೆ ಕಾರಣವಾದ ಶೇಷಾದ್ರಿಪುರಂ ಪೊಲೀಸ್ ಸ್ಟೇಷನ್ ಇದೀಗ ಇತಿಹಾಸದ ಪುಟ ಸೇರುವ ಕಾಲ ಸನ್ನಿಹಿತವಾಗಿದೆ.
ಹೌದು.. ರಾಜ್ಯದಲ್ಲೇ ಭಾರೀ ಕೀರ್ತಿ ಸಂಪಾದಿಸಿದ್ದ ಶೇಷಾದ್ರಿಪುರಂ ಸ್ಟೇಷನ್ ಇನ್ನು ಮರೆಯಾಗಲಿದೆ. ಒಂದು ಲಾಕಪ್ ಡೆತ್ ಕೇಸ್ನಿಂದಾಗಿ ಮಾಜಿ ಸಿಎಂ ರಾಜೀನಾಮೆಗೆ ಕಾರಣವಾಗಿದ್ದ ಈ ಐತಿಹಾಸಿಕ ಪೊಲೀಸ್ ಸ್ಟೇಷನ್ ಕಟ್ಟಡವನ್ನು ನೆಲಸಮಗೊಳಿಸಲು ಸಿದ್ಧತೆ ನಡೆಸಲಾಗಿದೆ.

ಸುಮಾರು 133 ವರ್ಷ ಹಿಂದೆ ನಿರ್ಮಾಣಗೊಂಡಿದ್ದ ಶೇಷಾದ್ರಿಪುರಂ ಪೊಲೀಸ್ ಸ್ಟೇಷನ್ನಲ್ಲಿ ಚಿನ್ನಾಭರಣ ಕದ್ದ ಆರೋಪದಡಿ ಮುನಿಯಮ್ಮ ಎಂಬ ಮನೆ ಕೆಲಸದಾಕೆಯನ್ನ ಪೊಲೀಸರು ಬಂಧಿಸಿದ್ದರು. ಆಕೆ ಪೊಲೀಸ್ ಠಾಣೆಯಲ್ಲಿಯೇ ಸಾವನ್ನಪ್ಪಿದ್ದಳು. ಈ ವಿಚಾರ ಅಂದು ರಾಜ್ಯದೆಲ್ಲೆಡೆ ಭಾರೀ ಕೋಲಾಹಲ ಎಬ್ಬಿಸಿತ್ತು. ಅಖಂಡ ಮೈಸೂರು ರಾಜ್ಯದ ಅಧಿವೇಶನ ನಡೆಯುತ್ತಿದ್ದಾಗ ಈ ವಿಚಾರ ಸದನದಲ್ಲಿ ಜೋರಾಗಿಯೇ ಪ್ರಸ್ತಾಪವಾಗಿತ್ತು.

ಅಂದಿನ ಪ್ರಜಾ ಸೋಷಿಯಲಿಸ್ಟ್ ಪಾರ್ಟಿಯ ವಿಪಕ್ಷ ನಾಯಕ ಶಾಂತವೇರಿ ಗೋಪಾಲಗೌಡರು ಸರ್ಕಾರದ ವಿರುದ್ಧ ಕಿಡಿಕಾರಿದ್ದರು. ಪೊಲೀಸರನ್ನು ಸಮರ್ಥಿಸಿಕೊಳ್ಳಬೇಕಿದ್ದ ಗೃಹ ಸಚಿವ ಪೂಣಚ್ಚ, ವಿಪಕ್ಷದೆದರು ಸಪ್ಪೆಯಾದಾಗ ಸಿಎಂ ಎಸ್.ನಿಜಲಿಂಗಪ್ಪ ಪೊಲೀಸರಿಗೆ ಮುನಿಯಮ್ಮಳನ್ನ ಸಾಯಿಸುವ ಉದ್ದೇಶವಿರಲಿಲ್ಲ ಎಂದಿದ್ದರು. ಬಳಿಕ ಪರೋಕ್ಷವಾಗಿ ಪೊಲೀಸ್ರು ಹಲ್ಲೆ ಮಾಡಿದ್ದಾರೆ ಎಂದು ಸಿಎಂ ಒಪ್ಪಿಕೊಂಡಿದ್ದಾರೆ ಅಂತಾ ವಿಪಕ್ಷಗಳು ದೊಡ್ಡ ಹುಯಿಲೆಬ್ಬಿಸಿದ್ದರು.
ಕೇಂದ್ರದಿಂದ ಬಂದ ಸದಸ್ಯರು ಶಾಸಕರ ಅಭಿಪ್ರಾಯ ಸಂಗ್ರಹಿಸಿ ಮೇ16 1958ರಂದು ನಿಜಲಿಂಗಪ್ಪರನ್ನ ಮುಖ್ಯಮಂತ್ರಿ ಪದವಿಯಿಂದ ಕೆಳಗಿಳಿಸಿ, ಬಿ.ಡಿ ಜತ್ತಿಯವರನ್ನ ಮುಖ್ಯಮಂತ್ರಿಯನ್ನಾಗಿ ಮಾಡಿದ್ದರು.
ಸದ್ಯ ಇಷ್ಟಕ್ಕೆಲ್ಲ ಕಾರಣವಾದ ಶೇಷಾದ್ರಿಪುರಂ ಐತಿಹಾಸಿಕ ಪೊಲೀಸ್ ಸ್ಟೇಷನ್ ಕಟ್ಟಡವನ್ನು ಕೆಡವಿ ಇದೀಗ ಹೊಸ ಕಟ್ಟಡ ಕಟ್ಟಲು ಯೋಜನೆ ಮಾಡಲಾಗಿದೆ. ಈಗಾಗಲೇ ಪೊಲೀಸ್ ಠಾಣೆಯನ್ನ ಬೇರೆ ಕಡೆ ಸ್ಥಳಾಂತರಿಸಲಾಗಿದ್ದು, ಹೊಸ ವಿನ್ಯಾಸ, ಆಧುನಿಕ ಸೌಲಭ್ಯಗಳೊಂದಿಗೆ ಹೊಸ ಸ್ಟೇಷನ್ ನಿರ್ಮಾಣ ಮಾಡಲಾಗುತ್ತಿದೆ.









