ಬೆಂಗಳೂರು : ನವಗ್ರಹ ಸಿನಿಮಾ ‘ಶೆಟ್ಟಿ’ ಖ್ಯಾತಿಯ ನಟ ಗಿರಿ ದಿನೇಶ್ ಹೃದಯಾಘಾತದಿಂದ ನಿಧನರಾಗಿದ್ದಾರೆ. ಇವರು ಹಿರಿಯ ನಟ, ದಿವಂಗತ ದಿನೇಶ್ ಅವರ ಪುತ್ರರಾಗಿದ್ದು, ‘ನವಗ್ರಹ’ ಸಿನಿಮಾದಿಂದ ಕನ್ನಡ ಚಿತ್ರರಂಗದಲ್ಲಿ ಸಾಕಷ್ಟು ಜನಪ್ರಿಯತೆ ಗಳಿಸಿದ್ದರು.

ಗಿರಿ ದಿನೇಶ್ ಅವರಿಗೆ 45 ವರ್ಷ ಆಗಿತ್ತು. ನಿನ್ನೆ ಸಂಜೆ ವೇಳೆ ದಿಢೀರ್ ಹೃದಯಘಾತವಾಗಿದ್ದು, ಮನೆಯಲ್ಲೇ ಗಿರಿ ಅವರು ಕುಸಿದು ಬಿದ್ದಿದ್ದರು. ಆ ಕೂಡಲೇ ಅವರನ್ನು ಕುಟುಂಬಸ್ಥರು ಸ್ಥಳೀಯ ಆಸ್ಪತ್ರೆಗೆ ದಾಖಲು ಮಾಡಲು ಮುಂದಾಗಿದ್ದರು. ಆದರೆ, ದಾರಿ ಮಧ್ಯೆಯೇ ಗಿರಿ ದಿನೇಶ್ ಕೊನೆಯುಸಿರಿಳೆದ್ದಿದ್ದಾರೆ.

ಇನ್ನು, ಗಿರಿ ಅವರಿಗೆ ವಿವಾಹ ಆಗಿರಲಿಲ್ಲ. ‘ಚಮಕಾಯ್ಸಿ ಚಿಂದಿ ಉಡಾಯ್ಸಿ’, ವಜ್ರ ಸಿನಿಮಾದಲ್ಲೂ ನಟಿಸಿ ಗಿರಿ ದಿನೇಶ್ ಸೈ ಎನಿಸಿಕೊಂಡಿದ್ದರು. ‘ನವಗ್ರಹ’ ಸಿನಿಮಾದಲ್ಲಿ ಶೆಟ್ಟಿ ಪಾತ್ರವನ್ನು ಅದ್ಭುತವಾಗಿ ನಿಭಾಯಿಸಿದ್ದರು. ನಟ ದರ್ಶನ್ ಅವರಿಗೂ ಬಹಳ ಆಪ್ತರಾಗಿದ್ದರು. ಇದೀಗ ಗಿರಿ ನಿಧನಕ್ಕೆ ಸ್ಯಾಂಡಲ್ವುಡ್ ಹಾಗೂ ಆಪ್ತ ಬಳಗ ಕಂಬನಿ ಮಿಡಿದಿದೆ.
ಇನ್ನು ಗಿರಿ ದಿನೇಶ್ ಪಾರ್ಥೀವ ಶರೀರವನ್ನು ಮನೆಯಲ್ಲೇ ಅಂತಿಮ ದರ್ಶನಕ್ಕೆ ಇಟ್ಟು ಇಂದು ಮಧ್ಯಾಹ್ನದ ಬಳಿಕ ಅಂತ್ಯಕ್ರಿಯೆ ನಡೆಸಲು ಕುಟುಂಬ ಸದಸ್ಯರು ತೀರ್ಮಾನಿಸಿದ್ದಾರೆ ಎಂದು ತಿಳಿದುಬಂದಿದೆ.
ಇದನ್ನೂ ಓದಿ : http://ನಾಗ ಚೈತನ್ಯ-ಸಾಯಿ ಪಲ್ಲವಿ ಚಿತ್ರಕ್ಕೆ ಪೈರಸಿ ಕಾಟ.. ರಿಲೀಸ್ ಆದ ಕೆಲವೇ ಗಂಟೆಗಳಲ್ಲಿ “ತಾಂಡೇಲ್” ಲೀಕ್!









