ಲಕ್ನೋ : ಉತ್ತರ ಪ್ರದೇಶದ ಕನೌಜ್ ರೈಲು ನಿಲ್ದಾಣದಲ್ಲಿ ನಿರ್ಮಾಣ ಹಂತದಲ್ಲಿದ್ದ ಕಟ್ಟಡದ ಛಾವಣಿ ಕುಸಿದು ಬಿದ್ದಿದ್ದು, ಹಲವು ಕಾರ್ಮಿಕರು ಅವಶೇಷಗಳಡಿ ಸಿಲುಕಿರುವ ಘಟನೆ ಶನಿವಾರ ನಡೆದಿದೆ. ಈಗಾಗಲೇ 23 ಕಾರ್ಮಿಕರನ್ನು ರಕ್ಷಿಸಲಾಗಿದೆ.
ಇಂದು ಮಧ್ಯಾಹ್ನ ಈ ಅವಘಡ ಸಂಭವಿಸಿದ್ದು, ನಿಲ್ದಾಣದ ನಿರ್ಮಾಣದ ಯೋಜನೆಯ ಭಾಗವಾಗಿ ಎರಡು ಅಂತಸ್ತಿನ ಕಟ್ಟಡದ ಕಾಮಗಾರಿ ನಡೆಯುತ್ತಿದ್ದಾಗ ಕಟ್ಟಡ ಮೇಲ್ಛಾವಣಿ ಕುಸಿದಿದೆ. ಸಮಯದಲ್ಲಿ 35 ಕಾರ್ಮಿಕರು ಸ್ಥಳದಲ್ಲಿದ್ದರು ಎಂದು ತಿಳಿದುಬಂದಿದೆ. ಸ್ಥಳಕ್ಕೆ ರೈಲ್ವೆ, ಪೊಲೀಸ್ ಮತ್ತು ಆಡಳಿತ ಅಧಿಕಾರಿಗಳು ಆಗಮಿಸಿದ್ದಾರೆ. ಅವರ ನೇತೃತ್ವದಲ್ಲಿ ರಕ್ಷಣಾ ಕಾರ್ಯಾಚರಣೆ ನಡೆದಿದೆ.
ರಾಜ್ಯ ಸರ್ಕಾರ, ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡವರಿಗೆ 50 ಸಾವಿರ ರೂ. ಹಾಗೂ ಸಣ್ಣಪುಟ್ಟ ಗಾಯಗಳಾದವರಿಗೆ 5000 ರೂ. ಪರಿಹಾರವನ್ನು ಘೋಷಿಸಿದೆ. ರಕ್ಷಣಾ ಕಾರ್ಯಚರಣೆಯ ಸಹಾಯಕ್ಕಾಗಿ ಲಕ್ನೋದಿಂದ ರಾಜ್ಯ ವಿಪತ್ತು ಪರಿಹಾರ ಪಡೆಯನ್ನು ಕರೆಯಿಸಲಾಗಿದ್ದು, ಕಾರ್ಯಾಚರಣೆ ಮುಂದುವರೆದಿದೆ ಎಂದು ಈಶಾನ್ಯ ರೈಲ್ವೆ ತಿಳಿಸಿದೆ.
ಇದನ್ನೂ ಓದಿ : “ಕೇಳೋ ಮಚ್ಚಾ”.. ಎರಡನೇ ಹಾಡನ್ನು ಘೋಷಿಸಿದ “ಜಸ್ಟ್ ಮ್ಯಾರೀಡ್” ಟೀಂ..!