ಬೆಂಗಳೂರು : ರಾಜ್ಯದ ಇತಿಹಾಸದಲ್ಲಿಯೇ ಮೊದಲ ಬಾರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸಮ್ಮುಖದಲ್ಲಿ 6 ಮಂದಿ ನಕ್ಸಲರು ಶರಣಾಗಿದ್ದಾರೆ. ಬೆಂಗಳೂರಿನ ಸಿಎಂ ಗೃಹ ಕಚೇರಿ ಕೃಷ್ಣಾದಲ್ಲಿ ಸಿದ್ಧರಾಮಯ್ಯನವರ ಮುಂದೆಯೇ ನಕ್ಸಲರು ಶಸ್ತ್ರಾಸ್ತ್ರ ತ್ಯಜಿಸಿದ್ದಾರೆ. ಈ ಮೂಲಕ ದಶಕಗಳ ಕಾಲದ ಶಸ್ತ್ರಾಸ್ತ್ರ ಹೋರಾಟಕ್ಕೆ ಗುಡ್ಬೈ ಹೇಳಿ ಪ್ರಜಾಸತ್ತಾತ್ಮಕ ಹೋರಾಟಕ್ಕೆ ಕೈ ಜೋಡಿಸಿದ್ದಾರೆ. ಈ ಮೂಲಕ ಕರ್ನಾಟಕ ನಕ್ಸಲ್ ಮುಕ್ತ ರಾಜ್ಯ ಆಗಿದೆ.
ಹಲವು ವರ್ಷಗಳಿಂದ ಕಾಡಿನೊಳಗೆ ಅಡಗಿ ಸದಾ ಸಂಘರ್ಷ, ರಕ್ತಚರಿತ್ರೆ ಬರೆಯುತ್ತಿದ್ದ ನಕ್ಸಲರು ಇದೀಗ ಮುಖ್ಯವಾಹಿನಿಗೆ ಬಂದಿದ್ದಾರೆ. 6 ಮಂದಿ ನಕ್ಸಲರು ಇಂದು ಸಂಜೆ 6 ಗಂಟೆ ಸುಮಾರಿಗೆ ಗೃಹ ಕಚೇರಿ ಕೃಷ್ಣಾದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಡಿಸಿಎಂ ಡಿಕೆ ಶಿವಕುಮಾರ್ ಹಾಗೂ ಗೃಹ ಸಚಿವ ಡಾ ಜಿ ಪರಮೇಶ್ವರ್ ಸಮ್ಮುಖದಲ್ಲಿ ಶರಣಾಗಿದ್ದಾರೆ. ಇನ್ನು ಶರಣಾದ ನಕ್ಸಲರಿಗೆ ಸಿಎಂ ಸಿದ್ದು ಸಂವಿಧಾನದ ಪುಸ್ತಕ ನೀಡಿದರು. ಈ ವೇಳೆ ಡಿಜಿ ಐಜಿಪಿ ಅಲೋಕ್ ಮೋಹನ್, ಹಿರಿಯ ಪೊಲೀಸ್ ಅಧಿಕಾರಿಗಳು ಹಾಗೂ ಶರಣಾಗತಿಯಾದ 6 ನಕ್ಸಲರ ಕುಟುಂಬದವರು ಉಪಸ್ಥಿತರಿದ್ದರು. ಈ ಮೂಲಕ ಕರ್ನಾಟಕ ನಕ್ಸಲ್ ಮುಕ್ತ ರಾಜ್ಯ ಎನ್ನಬಹುದಾಗಿದೆ.
6 ನಕ್ಸಲರಾದ ಶೃಂಗೇರಿ ತಾಲೂಕಿನ ಮುಂಡುಗಾರು ಗ್ರಾಮದ ಲತಾ, ಕಳಸ ತಾಲೂಕಿನ ಬಾಳೆಹೊಳೆ ಗ್ರಾಮದ ವನಜಾಕ್ಷಿ, ದಕ್ಷಿಣ ಕನ್ನಡ ಜಿಲ್ಲೆ ಕುಂತಲೂರು ಮೂಲಕದ ಸುಂದರಿ, ರಾಯಚೂರು ಮೂಲದ ಮಾರಪ್ಪ ಅರೋಳಿ, ವಸಂತ, ಎನ್.ಜೀಶಾ ಹಲವು ವರ್ಷಗಳ ಸಶಸ್ತ್ರ ಹೋರಾಟಕ್ಕೆ ಗುಡ್ಬೈ ಹೇಳಿ ಮುಖ್ಯವಾಹಿನಿಗೆ ಬಂದಿದ್ದಾರೆ. ಅನ್ಯಾಯವಾದಾಗ ನ್ಯಾಯ ಸಿಗದಿದ್ದಕ್ಕೆ , ಪ್ರಜಾಸತ್ತಾತ್ಮಕ ಹೋರಾಟಗಳಿಗೆ ಬೆಲೆ ನೀಡದ ಸರ್ಕಾರದ ಧೋರಣೆಗೆ ಬೇಸತ್ತು ಕಳೆದ ಹಲವು ವರ್ಷಗಳಿಂದ ಕಾಡಿನಲ್ಲಿ ನೆಲೆಸಿ ಸಶಸ್ತ್ರ ಹೋರಾಟ ನಡೆಸಿದ್ದರು. ಆರು ಜನರ ಹಿಂದೆ ಒಂದೊಂದು ಅನ್ಯಾಯದ ಹಿನ್ನೆಲೆ ಇದೆ. ಇದೀಗ ಅಂತಿಮವಾಗಿ ಕಾಡಿಗೆ ವಿದಾಯ ಹೇಳಿ ಪ್ರಜಾಸತ್ತಾತ್ಮಕವಾಗಿ ಹೋರಾಟ ನಡೆಸಲು ಮುಖ್ಯವಾಹಿನಿಗೆ ಆಗಮಿಸಿದ್ದಾರೆ.
ನಕ್ಸಲರ ಜೊತೆ ಸಿಎಂ ಸಿದ್ದು ಸಭೆ : ಇನ್ನು ತಮ್ಮ ಸಮ್ಮುಖದಲ್ಲೇ ಮುಖ್ಯವಾಹಿನಿ ಬಂದಿರುವ ನಕ್ಸಲರ ಜೊತೆ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಮಹತ್ವದ ಸಭೆ ನಡೆಸಿದ್ದಾರೆ. ನಕ್ಸಲರ ಸಮಸ್ಯೆಗಳು, ಬೇಡಿಕೆಗಳನ್ನು ಆಲಿಸಿದ್ದಾರೆ. ಅಲ್ಲದೇ ಅವರ ಪ್ರೋತ್ಸಾಹ ಧನದ ಬಗ್ಗೆ ಕೂಡ ಚರ್ಚಿಸಿದ್ದಾರೆ. ನಕ್ಸಲರ ಮುಂದಿನ ಜೀವನ, ಕಾನೂನು ಹೋರಾಟದ ಬಗ್ಗೆಯೂ ಅಗತ್ಯ ಸಹಕಾರ ನೀಡುವುದಾಗಿಯೂ ಭರವಸೆ ನೀಡಿದ್ದಾರೆ.
ಇನ್ನು ಶಾಂತಿಗಾಗಿ ನಾಗರಿಕ ವೇದಿಕೆ ಸದಸ್ಯರ ಜೊತೆ ನಕ್ಸಲರು ಚರ್ಚಿಸಿ ಮುಖ್ಯವಾಹಿನಿಗೆ ಬರಲು ಇಂಗಿತ ವ್ಯಕ್ತಡಿಸಿದ್ದರು. ಇಂದು ಚಿಕ್ಕಮಗಳೂರು ಜಿಲ್ಲಾಧಿಕಾರಿ ಮುಂದೆ ಶರಣಾಗತಿಗೆ ಎಲ್ಲಾ ಮಾತುಕತೆ ಆಗಿತ್ತು. ಆದ್ರೆ, ಕೊನೆ ಕ್ಷಣದಲ್ಲಿ ಸಿಎಂ ಸಿದ್ದರಾಮಯ್ಯ ಮುಂದೆ ಶರಣಾಗಲು ತೀರ್ಮಾನಿಸಿ ಇಂದು ನಕ್ಸಲರು ಶಸ್ತ್ರಾಸ್ತ್ರ ತ್ಯಜಿಸಿದ್ದಾರೆ. ಇಂದು ಬೆಳಗ್ಗೆ ಎಲ್ಲಾ ಮಾತುಕತೆ ಮುಗಿಸಿ ಪೊಲೀಸ್ ಬಂದೋಬಸ್ತ್ನಲ್ಲಿ ಚಿಕ್ಕಮಗಳೂರಿನ ಶೃಂಗೇರಿಯಿಂದ ಹೊರಟ ನಕ್ಸಲರ ತಂಡ ಬೆಂಗಳೂರಿನತ್ತ ಪ್ರಯಾಣ ಬೆಳೆಸಿತು. ಸಂಜೆ 6 ಗಂಟೆ ಹೊತ್ತಿಗೆ ಸಿಎಂ ಗೃಹ ಕಚೇರಿ ಕೃಷ್ಣಗೆ ತಲುಪಿತು. ನಕ್ಸಲರ ತಂಡವನ್ನು ಚೆಕ್ ಇನ್ ಮಾಡಿದ ಪೊಲೀಸರು ಒಳಗೆ ಬಿಟ್ಟರು. ಸಿಎಂ ಕಚೇರಿ ಮುಂದೆ ಪೊಲೀಸ್ ಬಿಗಿ ಭದ್ರತೆ ಕಲ್ಪಿಸಲಾಗಿತ್ತು. ಈ ಮೂಲಕ ಕರ್ನಾಟಕದಲ್ಲಿ ದಶಕಗಳ ಕಾಲದ ನಕ್ಸಲರ ಶಸ್ತ್ರಾಸ್ತ್ರ ಹೋರಾಟ ಕೊನೆಗೂ ಅಂತ್ಯವಾಗಿದೆ. ಸಿಎಂ ಸಿದ್ದರಾಮಯ್ಯ ಅವರು ರಾಜ್ಯವನ್ನು ಶಾಂತಿಯ ತೋಟವನ್ನಾಗಿ ಮಾಡುವ ಸಂಕಲ್ಪಕ್ಕೆ ಯಶಸ್ಸು ಸಿಕ್ಕಂತಾಗಿದೆ.
ಇದನ್ನೂ ಓದಿ : ಹೆಂಡ್ತಿ ಮೇಲೆ ಗಂಡನಿಗೆ ಬೆಂಬಿಡದ ಅನುಮಾನದ ಭೂತ – ಪತ್ನಿಯ ಶೀಲ ಶಂಕಿಸಿ ಮೂವರ ಬರ್ಬರ ಹತ್ಯೆ!