ಮೈಸೂರು : ಜೆಡಿಎಸ್ ಶಾಸಕ ಜಿಟಿ ದೇವೇಗೌಡ ತಮ್ಮ ಪ್ರಭಾವ ಬಳಸಿ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದಿಂದ ಅಕ್ರಮವಾಗಿ ತಮ್ಮ ಪುತ್ರಿ ಮತ್ತು ಅಳಿಯನಿಗೆ ನಿವೇಶನ ಕೊಡಿಸಿದ್ದಾರೆ ಎಂದು ಆರೋಪಿಸಿ ಆರ್ಟಿಐ ಕಾರ್ಯಕರ್ತರ ಸ್ನೇಹಮಯಿ ಕೃಷ್ಣ ಲೋಕಾಯುಕ್ತಕ್ಕೆ ದೂರು ನೀಡಿದ್ದಾರೆ.
ಶಾಸಕ ಜಿ.ಟಿ.ದೇವೇಗೌಡ ತಮ್ಮ ಪ್ರಭಾವವನ್ನು ಬಳಸಿಕೊಂಡು, ಸರ್ಕಾರಕ್ಕೆ ಸೇರಿದ ಮತ್ತು ಹೈಕೋರ್ಟ್ನಲ್ಲಿ ವಿಚಾರಣೆ ಪೆಂಡಿಂಗ್ ಇರೋ ಜಮೀನಿಗೆ ನಕಲಿ ದಾಖಲೆ ಸೃಷ್ಟಿ ಮಾಡಿಸಿದ್ದಾರೆ. ಬಳಿಕ, ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದಿಂದ ಚೌಡಯ್ಯ ಎಂಬುವವರ ಹೆಸರಿಗೆ 50:50 ಅನುಪಾತದಲ್ಲಿ ಒಟ್ಟು ಆರು ಸೈಟ್ಗಳನ್ನು ಅಕ್ರಮವಾಗಿ ಕೊಡಿಸಿದ್ದಾರೆ. ಇದರಲ್ಲಿ, 50X80 ಅಡಿ ಅಳತೆಯ ಎರಡು ಸೈಟ್ಗಳನ್ನು ಅವರ ಮಗಳು ಡಿ.ಅನ್ನಪೂರ್ಣ ಮತ್ತು ಅಳಿಯ ಜಿ.ಎಂ.ವಿಶ್ವೇಶ್ವರಯ್ಯನವರ ಹೆಸರಿಗೆ ಮಾಡಿಸಿದ್ದಾರೆ ಎಂದು ಸ್ನೇಹಮಯಿ ಕೃಷ್ಣ ದೂರು ನೀಡಿದ್ದಾರೆ.
ಮೈಸೂರು ತಾಲ್ಲೂಕು ಕಸಬಾ ಹೋಬಳಿ ದೇವನೂರು ಗ್ರಾಮದ ಸರ್ವೆ ನಂ.154ರ ಆರ್.ಟಿ.ಸಿ ಪ್ರತಿಯಲ್ಲಿನ 9ನೇ ಕಾಲಂನಲ್ಲಿ ಜವರಯ್ಯ, ಕೆ.ಬೋರಯ್ಯ, ಚೌಡಯ್ಯ, ಪುಟ್ಟಣ್ಣಯ್ಯ, ಗಂಗಾಧರ ಎಂಬುವವರ ಹೆಸರಿಗೆ 3.38 ಎಕರೆ ಜಮೀನಿನ ಜಂಟಿ ಖಾತೆ ಇದೆ. ಇದೇ, ಆರ್ಟಿಸಿಯಲ್ಲಿ 11ನೇ ಕಾಲಂನಲ್ಲಿ ನಗರದ ಭೂಮಿತಿ ಕಾಯಿದೆ ವ್ಯಾಪ್ತಿಗೆ ಒಳ ಪಟ್ಟಿರುವುದಾಗಿ ನಮೂದಿಸಿದೆ. ಅಂದರೆ ಸರ್ಕಾರದ ಆಸ್ತಿಯಾಗಿದೆ.
ಈ ಜಮೀನು ನಗರದ ಭೂಮಿತಿ ಕಾಯಿದೆ ವ್ಯಾಪ್ತಿಗೆ ಒಳಪಟ್ಟಿರುವುದರಿಂದ ಸರ್ಕಾರ ವಶಕ್ಕೆ ಪಡೆದಿದೆಯೇ? ಅಥವಾ ಕಾಯಿದೆಯಿಂದ ಕೈಬಿಡಲಾಗಿದೆಯೆ? ಕೈಬಿಟ್ಟಿದ್ದರೆ ಆರ್ಟಿಸಿಯಲ್ಲಿ ಈಗಲೂ ಉಲ್ಲೇಖ ಇರಲು ಕಾರಣವೇನು? ಪ್ರಾಧಿಕಾರದಿಂದ ಜಮೀನನ್ನು ಸ್ವಾಧೀನಕ್ಕೆ ಪಡೆಯಲಾಗಿದೆಯೇ? ಯಾವಾಗ ಸ್ವಾಧೀನಕ್ಕೆ ಪಡೆಯಲಾಗಿದೆ? ಆ ಸಂದರ್ಭದಲ್ಲಿ ಯಾರಿಗೆ ಪರಿಹಾರದ ಹಣವನ್ನು ನೀಡಲಾಗಿದೆ? ಅಥವಾ ಪರಿಹಾರ ನೀಡಿಲ್ಲವೇ? ಜಮೀನಿನಲ್ಲಿ ಪ್ರಾಧಿಕಾರದಿಂದ ಬಡಾವಣೆ ರಚನೆ ಮಾಡಲಾಗಿದೆಯೇ? ಯಾವಾಗ ಬಡಾವಣೆ ರಚನೆ ಮಾಡಲಾಗಿದೆ? ಎಂಬ ಅಂಶಗಳ ಬಗ್ಗೆ ಸೂಕ್ತ ತನಿಖೆ ಮಾಡಿ ಕ್ರಮ ಜರುಗಿಸುವಂತೆ ಸ್ನೇಹಮಯಿ ಕೃಷ್ಣ ಒತ್ತಾಯಿಸಿದ್ದಾರೆ.
ಇದನ್ನೂ ಓದಿ : ಬಿಗ್ಬಾಸ್ ಫಿನಾಲೆಗೆ ಹಳ್ಳಿ ಹೈದ ಹನುಮಂತ ಗ್ರ್ಯಾಂಡ್ ಎಂಟ್ರಿ – ಘಟಾನುಘಟಿ ಸ್ಪರ್ಧಿಗಳೆಲ್ಲ ಸೈಲೆಂಟ್!