“ಅನ್ ಲಾಕ್ ರಾಘವ” ಚಿತ್ರದ ಶೂಟಿಂಗ್ ಆರಂಭವಾದಗಿನಿಂದಲೂ ಸಾಕಷ್ಟು ನಿರೀಕ್ಷೆಗಳನ್ನು ಮೂಡಿಸಿದ್ದು, ಇದೀಗ ಸಿನಿಮಾದ ಬಿಡುಗಡೆ ದಿನಾಂಕ ಘೋಷಣೆಯಾಗಿದೆ. ಫೆಬ್ರವರಿ 7ರಂದು ಈ ಚಿತ್ರ ಬಿಡುಗಡೆಯಾಗಲಿದೆ. ಯುವ ಪ್ರತಿಭೆಗಳಾದ ಮಿಲಿಂದ್ ಹಾಗೂ ರೆಚೆಲ್ ಡೇವಿಡ್(ಲವ್ ಮಾಕ್ಟೇಲ್) ಸಿನಿಮಾದಲ್ಲಿ ನಾಯಕ-ನಾಯಕಿಯಾಗಿ ನಟಿಸಿದ್ದಾರೆ. ಈ ಚಿತ್ರವನ್ನು ಮಂಜುನಾಥ್ ದಾಸೇಗೌಡ ಹಾಗೂ ಗಿರೀಶ್ ಕುಮಾರ್ ನಿರ್ಮಿಸಿದ್ದು, ದೀಪಕ್ ಮಧುವನಹಳ್ಳಿ ನಿರ್ದೇಶಿಸಿದ್ದಾರೆ. ಪತ್ರಿಕಾಗೋಷ್ಠಿಯಲ್ಲಿ ಚಿತ್ರತಂಡದ ಸದಸ್ಯರು ಸಿನಿಮಾದ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ.
ನಿರ್ದೇಶಕ ದೀಪಕ್ ಮಧುವನಹಳ್ಳಿ ಅವರು, ನನ್ನ ಹಿಂದಿನ ಚಿತ್ರಗಳನ್ನು ನೋಡಿದ್ದ ನನ್ನ ಗೆಳೆಯರು, ನಿನ್ನ ಚಿತ್ರಗಳಲ್ಲಿ ಗ್ಲಾಮರ್ ನಾಯಕಿಯರು ಇರುವುದಿಲ್ಲ ಎಂದು ಹೇಳುತ್ತಿದ್ದರು. ಆದರೆ “ಅನ್ ಲಾಕ್ ರಾಘವ” ಚಿತ್ರದ ಫಸ್ಟ್ ಲುಕ್ನಲ್ಲಿ ರೆಚೆಲ್ ಅವರನ್ನು ನೋಡಿದ ಗೆಳೆಯರು ಈಗ ನೀನೊಬ್ಬ ಕಮರ್ಷಿಯಲ್ ಚಿತ್ರದ ನಿರ್ದೇಶಕ ಎಂದು ಹೇಳಿದರು. ಇನ್ನು, ನಾಯಕ ಮಿಲಿಂದ್ ಸುರದ್ರೂಪಿ ನಟ ಅಷ್ಟೇ ಅಲ್ಲ, ಭರವಸೆಯ ನಟ ಕೂಡ ಹೌದು. ಇದೊಂದು ಪಕ್ಕಾ ಮನೋರಂಜನೆಯ ರಸದೌತಣ ನೀಡುವ, ಪ್ರೇಕ್ಷಕ ಕೊಟ್ಟ ದುಡ್ಡಿಗೆ ಮೋಸ ಮಾಡದ ಸಿನಿಮಾ. “ರಾಮ ರಾಮ ರೆ” ಖ್ಯಾತಿಯ ಸತ್ಯಪ್ರಕಾಶ್ ಈ ಚಿತ್ರಕ್ಕೆ ಕಥೆ, ಚಿತ್ರಕಥೆ ಬರೆದಿದ್ದಾರೆ. ಹೆಚ್ಚಿನ ಭಾಗದ ಚಿತ್ರೀಕರಣ ಚಿತ್ರದುರ್ಗದಲ್ಲಾಗಿದೆ. ಲವಿತ್ ಅವರ ಛಾಯಾಗ್ರಹಣದಲ್ಲಿ ಚಿತ್ರದುರ್ಗದ ಸೊಬಗನ್ನು ನೋಡುವುದೆ ಚೆಂದ. ಅನೂಪ್ ಸೀಳಿನ್ ಅವರು ಸಂಗೀತ ನೀಡಿರುವ ಈ ಚಿತ್ರದ ಹಾಡುಗಳು ಈಗಾಗಲೇ ಪ್ರೇಕ್ಷಕರ ಮನ ಗೆದ್ದಿದೆ. ಚಿತ್ರ ಕೂಡ ಎಲ್ಲರ ಮನಸ್ಸಿಗೆ ಹತ್ತಿರವಾಗಲಿದೆ ಎಂದರು.
ಸತ್ಯಪ್ರಕಾಶ್ ಅವರು ಹೇಳಿದ ಕಥೆ ಬಹಳ ಇಷ್ಟವಾಯಿತು. ಹೊಸ ನಾಯಕನ ಎಂಟ್ರಿಗೆ ಬೇಕಾದ ಎಲ್ಲಾ ಅಂಶಗಳನ್ನು ಸೇರಿಸಿ ಒಂದು ಚೆಂದವಾದ ಕಥೆಯನ್ನು ಸತ್ಯಪ್ರಕಾಶ್ ಅವರು ಕಟ್ಟಿ ಕೊಟ್ಟಿದ್ದಾರೆ. ಅಷ್ಟೇ ಸುಂದರವಾಗಿ ದೀಪಕ್ ನಿರ್ದೇಶನ ಮಾಡಿದ್ದಾರೆ. ರೆಚೆಲ್ ಅವರ ಅಭಿನಯ ಅದ್ಭುತವಾಗಿದೆ. ನೀವು ಈ ಹಿಂದೆ ಯಾವ ಚಿತ್ರಗಳಲ್ಲೂ ನೋಡಿರದ ಸಾಧುಕೋಕಿಲ ಹಾಗೂ ಶೋಭ್ ರಾಜ್ ಅವರನ್ನು ನಮ್ಮ ಚಿತ್ರದಲ್ಲಿ ನೋಡಬಹುದು. ಅವಿನಾಶ್, ಭೂಮಿ ಶೆಟ್ಟಿ ಮುಂತಾದವರು ಈ ಚಿತ್ರದಲ್ಲಿದ್ದಾರೆ. ತಂತ್ರಜ್ಞರ ಕಾರ್ಯವೈಖರಿ ಕೂಡ ಚೆನ್ನಾಗಿದೆ. ಇತ್ತೀಚಿಗೆ ಟೆಕ್ನಿಕಲ್ ಶೋ ನಲ್ಲಿ ಚಿತ್ರ ನೋಡಿದಾಗ ಎಲ್ಲರ ಮುಖದಲ್ಲಿ ಭರವಸೆಯ ನಗು ಮೂಡಿತ್ತು. ಆ ನಗು ಪ್ರೇಕ್ಷಕನ ಮುಖದಲ್ಲೂ ಮೂಡಲಿದೆ ಎಂಬ ಭರವಸೆ ಇದೆ ಎಂದು ನಾಯಕ ಮಿಲಿಂದ್ ಹೇಳಿದರು.
ನಾಯಕಿ ರೆಚೆಲ್ ಡೇವಿಡ್ ಅವರು, ದೀಪಕ್ ಈ ಚಿತ್ರದ ಕಥೆ ಹೇಳಿದಾಗಲೇ ಈ ಚಿತ್ರದಲ್ಲಿ ನಿರ್ಧರಿಸಿದ್ದೆ. ಅಷ್ಟು ಸುಂದರ ಕಥಾನಕವಿದು. ನಡೆಸಬೇಕೆಂದು ಚಿತ್ರದಲ್ಲಿ ನಾನು ಪ್ರಾಚ ಶಾಸ್ತ್ರಗ್ನೆ. ಜಾನಕಿ ನನ್ನ ಪಾತ್ರದ ಹೆಸರು ಎಂದರು.
ಇದು ನನ್ನ ನಿರ್ಮಾಣದ ನಾಲ್ಕನೇ ಚಿತ್ರ ಎಂದ ನಿರ್ಮಾಪಕ ಮಂಜುನಾಥ್, ಸಾಕಷ್ಟು ಸವಾಲುಗಳನ್ನು ಎದುರಿಸಿ ನಮ್ಮ ಚಿತ್ರ ಈಗ ತೆರೆಗೆ ಬರಲು ಸಿದ್ದವಾಗಿದೆ. ಇತ್ತೀಚಿಗೆ ತಂತ್ರಜ್ಞರಿಗಾಗಿ ಆಯೋಜಿಸಲಾಗಿದ್ದ ಪ್ರದರ್ಶನದಲ್ಲಿ ಚಿತ್ರವನ್ನು ನೋಡಿದಾಗ ಮನಸ್ಸಿಗೆ ಬಹಳ ಖುಷಿಯಾಯಿತು. ಇದೊಂದು ನಮ್ಮ ಸೊಗಡಿನ ಚಿತ್ರ. “ಅನ್ ಲಾಕ್ ರಾಘವ” ಚೆನ್ನಾಗಿ ಮೂಡಿಬರಲು ಚಿತ್ರತಂಡದ ಸಹಕಾರವೇ ಕಾರಣ. ನಮ್ಮ ಚಿತ್ರಕ್ಕೆ ನಿಮ್ಮೆಲ್ಲರ ಪ್ರೋತ್ಸಾಹವಿರಲಿ ಎಂದು ಹೇಳಿದರು.
ಇದನ್ನೂ ಓದಿ : ಇವತ್ತು ಕೈ ಮುಗೀತಾರೆ.. ನಾಳೆ ಬೆನ್ನಿಗೆ ಚೂರಿ ಹಾಕ್ತಾರೆ – ವಿಜಯೇಂದ್ರ ಕೈಮುಗಿಯೋ ಫೋಟೋಗೆ ಯತ್ನಾಳ್ ರಿಯಾಕ್ಟ್..!