ಬೆಂಗಳೂರು : ಬಿಜೆಪಿ MLC ಸಿಟಿ ರವಿ ಅವರು ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅವರಿಗೆ ಅವಾಚ್ಯ ಪದ ಬಳಕೆ ಮಾಡಿದ್ದಾರೆ ಎನ್ನಲಾದ ಪ್ರಕರಣಕ್ಕೆ ಸಂಬಂಧಿಸಿದಂತೆ, ರಾಜ್ಯ ಸರ್ಕಾರ ಪ್ರಕರಣವನ್ನು ಸಿಐಡಿಗೆ ವಹಿಸಿರುವ ಕ್ರಮಕ್ಕೆ ಸಭಾಪತಿ ಬಸವರಾಜ ಹೊರಟ್ಟಿ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಈ ಕುರಿತು ಗೃಹ ಸಚಿವ ಪರಮೇಶ್ವರ್ಗೆ ಬಸವರಾಜ ಹೊರಟ್ಟಿ ಅವರು ಖಡಕ್ ಪತ್ರ ಬರೆದಿದ್ದು, ಯಾವ ವಿಷಯಕ್ಕೆ ಸಿಐಡಿಗೆ ತನಿಖೆಗೆ ನೀಡಲಾಗಿದೆ ಎಂದು ನಮಗಿನ್ನು ಸ್ಪಷ್ಟ ಮಾಹಿತಿ ಇಲ್ಲ. ಸದನದಲ್ಲಿ ನಡೆದ ಘಟನೆಯನ್ನು ಚರ್ಚಿಸುವುದು ಮುಕ್ತಾಯ ಮಾಡುವುದು ತೀರ್ಮಾನಿಸುವುದರಲ್ಲಿ ಸದನಕ್ಕೆ ಸಾರ್ವಭೌಮತ್ವ ಅಧಿಕಾರ ಇರುತ್ತದೆ. ಡಿಸೆಂಬರ್ 19ರಂದು ನಡೆದ ಘಟನೆಗೆ ಸಂಬಂಧಿಸಿದಂತೆ ಪರಾಮರ್ಶಿಸಿಕೊಂಡು ಪೀಠದಿಂದ ತೀರ್ಪು ನೀಡಲಾಗಿದೆ.
ಸದನದ ಆವರಣದ ಒಳಗೆ ಶಿಸ್ತು ಸಂರಕ್ಷಿಸುವುದು ವ್ಯವಹಾರ ನಿಯಂತ್ರಿಸುವ ಅಧಿಕಾರ ಸಭಾಪತಿಗಿದೆ. ಸಭಾಪತಿಯವರ ತೀರ್ಪೆ ಇದರಲ್ಲಿ ಅಂತಿಮ. ಶಾಸಕಾಂಗಕ್ಕೆ ಮತ್ತು ಸಭಾಪತಿಯವರಿಗೆ ಪ್ರದತ್ತವಾದ ವಿಶೇಷ ಅಧಿಕಾರಕ್ಕೆ ಚ್ಯುತಿ ಬರುವಂತೆ ಕಾರ್ಯಾಂಗವು ಪ್ರಕರಣವನ್ನು ಸಿಐಡಿಗೆ ವಹಿಸುವ ಮೂಲಕ ಸಾಂವಿಧಾನಿಕ ಘರ್ಷಣೆಗೆ ಅವಕಾಶ ಮಾಡಿಕೊಡುತ್ತಿದೆ ಎಂದು ಭಾಸವಾಗುತ್ತಿದೆ ಅಂತಾ ಹೊರಟ್ಟಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ವಿನಾಕಾರಣ ಶಾಸಕಾಂಗ ಮತ್ತು ಕಾರ್ಯಾಂಗದ ನಡುವೆ ಸಂಘರ್ಷದ ಪ್ರಮೇಯ ನಿರ್ಮಾಣ ಆಗಬಾರದು. ಸದನದಲ್ಲಿ ನಡೆದ ಘಟನೆ ಸಭಾಪತಿಯವರ ಕಾರ್ಯವ್ಯಾಪ್ತಿಗೆ ಸನ್ನಿಹಿತವಾಗಿರುವುದು ತಮಗೆ ತಿಳಿದ ವಿಚಾರ. ಕಾರ್ಯಾಂಗ ಮತ್ತು ಶಾಸಕಾಂಗದ ನಾವಿಬ್ಬರೂ ಪರಸ್ಪರ ಗೌರವದೊಂದಿಗೆ ನಮ್ಮ ನಮ್ಮ ಕರ್ತವ್ಯ ನಿರ್ವಹಿಸಬೇಕಿದೆ ಎಂದು ಪತ್ರದಲ್ಲಿ ಹೊರಟ್ಟಿ ಉಲ್ಲೇಖಿಸಿದ್ದಾರೆ. ಇನ್ನು ತಾವೂ ಕೂಡ ಸಂವಿಧಾನದ ವಿವಿಧ ಸಂಸ್ಥೆಗಳಲ್ಲಿ ಕಾರ್ಯ ನಿರ್ವಹಿಸಿದ ಅನುಭವ ಉಳ್ಳವರು, ಸಂವಿಧಾನದ ಅಡಿಯಲ್ಲೇ ಕರ್ತವ್ಯವನ್ನು ನಿರ್ವಹಿಸುತ್ತೀರಿ ಎಂಬ ವಿಶ್ವಾಸ ಇದೆ. ಸಭಾಪತಿಯವರ ಹಕ್ಕುಗಳನ್ನು ಮತ್ತು ಸದನದ ಸಾರ್ವಭೌಮತ್ವವನ್ನು ಗಮನದಲ್ಲಿಟ್ಟುಕೊಂಡು ಈ ಪ್ರಕರಣವನ್ನು ನಿರ್ವಹಿಸುತ್ತೀರಿ ಅಂತಾ ನಂಬುತ್ತೇನೆ ಎಂದು ಸಭಾಪತಿ ಹೊರಟ್ಟಿ ಅವರು ಪತ್ರದ ಮೂಲಕ ಅಸಮಧಾನ ಹೊರಹಾಕಿದ್ದಾರೆ.
ಇದನ್ನೂ ಓದಿ : ಮೋಕ್ಷಿತಾ, ಚೈತ್ರಾ.. ಈ ಇಬ್ಬರಲ್ಲಿ ಇಂದು ಬಿಗ್ಬಾಸ್ನಿಂದ ಯಾರಿಗೆ ಗೇಟ್ ಪಾಸ್?