ಬೆಂಗಳೂರು : ಡೆತ್ ನೋಟ್ ಬರೆದಿಟ್ಟು ಸರ್ಕಾರಿ ಪ್ರೌಢಶಾಲೆ ಮುಖ್ಯ ಶಿಕ್ಷಕರೊಬ್ಬರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಂಗಳೂರಿನ ಬ್ಯಾಡರಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ನರಸಿಂಹ ಮೂರ್ತಿ (59) ಆತ್ಮಹತ್ಯೆ ಮಾಡಿಕೊಂಡ ಮುಖ್ಯ ಶಿಕ್ಷಕ.
ನರಸಿಂಹ ಮೂರ್ತಿ ಹೊಸಕೋಟೆ ಜಡಗನಹಳ್ಳಿ ಪ್ರೌಢಶಾಲೆಯಲ್ಲಿ ಮುಖ್ಯ ಶಿಕ್ಷಕನಾಗಿ ಸೇವೆ ಸಲ್ಲಿಸುತ್ತಿದ್ದರು. ಜನವರಿ 15ಕ್ಕೆ ಇವರು ಸೇವೆಯಿಂದ ನಿವೃತ್ತಿ ಹೊಂದಬೇಕಿತ್ತು. ಅದ್ರೆ ಅದಕ್ಕೂ ಮುಂಚೆಯೇ ಆತ್ಮಹತ್ಯೆಗೆ ಶರಣಾಗಿದ್ದಾರೆ.
ಸದ್ಯದ ಮಾಹಿತಿ ಪ್ರಕಾರ, 10 ಕೋಟಿ ಜಾಗದ ವಿಚಾರಕ್ಕೆ ಮನನೊಂದು ನರಸಿಂಹ ಮೂರ್ತಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ. ಈ ಬಗ್ಗೆ ಡೆತ್ ನೋಟ್ನಲ್ಲಿ ಅವರೇ ಉಲ್ಲೇಖಿಸಿದ್ದಾರೆ. ತುಂಗನಗರದಲ್ಲಿ 25 ಗುಂಟೆ ಜಮೀನು ಹೊಂದಿದ್ದ ನರಸಿಂಹ ಮೂರ್ತಿ, ಕಾಂಗ್ರೆಸ್ ಮುಖಂಡ ಸತೀಶ್ ಎಂಬುವವರು ಬಳಿ ಜಮೀನು ಖರೀದಿಸುವ ಅಗ್ರಿಮೆಂಟ್ ಹಾಕಿಸಿಕೊಂಡಿದ್ದರು. 10 ಕೋಟಿ ಜಮೀನಿಗೆ 10 ಲಕ್ಷ ಕೊಟ್ಟು ಸತೀಶ್ ಅಗ್ರಿಮೆಂಟ್ ಮಾಡಿಕೊಂಡಿದ್ದರು.
ಆ ಬಳಿಕ ಕಾಂಗ್ರೆಸ್ ಮುಖಂಡ ಸತೀಶ್ ಉಳಿದ ಹಣ ಕೊಡದೆ ಜಮೀನು ಲಪಟಾಯಿಸಿಕೊಂಡ ಆರೋಪ ಕೇಳಿಬಂದಿದೆ. ಹಣ ಕೇಳಲು ಹೋದಾಗ ಸತೀಶ್ ಮುಖ್ಯ ಶಿಕ್ಷಕ ನರಸಿಂಹ ಮೂರ್ತಿಗೆ ಧಮ್ಕಿ ಹಾಕಿದ್ದಾರೆ ಎನ್ನಲಾಗಿದೆ. ಇದರಿಂದ ಮನನೊಂದು ನರಸಿಂಹ ಮೂರ್ತಿ ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿದೆ. ಬ್ಯಾಡರಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಮೃತದೇಹವನ್ನು ವಿಕ್ಟೋರಿಯಾ ಆಸ್ಪತ್ರೆಗೆ ರವಾನೆ ಮಾಡಲಾಗಿದೆ. ಪೊಲೀಸರು ಪ್ರಕರಣದ ತನಿಖೆಯನ್ನು ಮುಂದುವರೆಸಿದ್ದಾರೆ.
ಇದನ್ನೂ ಓದಿ : ಕಳಪೆ ಪಟ್ಟ ಹೊತ್ತು ಜೈಲು ಸೇರಿದ ಹನುಮಂತ.. ಪ್ರಾಣ ಸ್ನೇಹಿತರೇ ಬದ್ಧ ವೈರಿಗಳಾದ್ರಾ?