ಮಾವಿನ ಹಣ್ಣಿನ ಬೆಲೆ ಕುಸಿತ : ಇಂದು ಕೋಲಾರದ ಶ್ರೀನಿವಾಸಪುರ ಬಂದ್.. ಶಾಲೆಗಳಿಗೆ ರಜೆ, ಬಸ್ ಓಡಾಟ ಇಲ್ಲ!

ಕೋಲಾರ : ಇಂದು ಕೋಲಾರದ ಶ್ರೀನಿವಾಸಪುರ ಬಂದ್​​ಗೆ ಕರೆ ನೀಡಲಾಗಿದೆ. ಮಾವು ಬೆಂಬಲ ಬೆಲೆಗೆ ಒತ್ತಾಯಿಸಿ ಇಂದು ಶ್ರೀನಿವಾಸಪುರ ಬಂದ್​​​ಗೆ ಕರೆ ನೀಡಲಾಗಿದ್ದು, ಬೆಳ್ಳಂಬೆಳಗ್ಗೆ ಹೋರಾಟಗಾರರು ಬೀದಿಗಿಳಿದಿದ್ದಾರೆ.ಬಂದ್​​ಗೆ ವ್ಯಾಪಾಕ ಬೆಂಬಲ ವ್ಯಕ್ತವಾಗಿದ್ದು, ಪಟ್ಟಣದಲ್ಲಿ ಎಲ್ಲಾ ಅಂಗಡಿ ಮುಂಗಟ್ಟುಗಳನ್ನು ಮುಚ್ಚಲಾಗಿದೆ. ಜೊತೆಗೆ ಖಾಸಗಿ ಶಾಲೆಗಳ ಒಕ್ಕೂಟ ತಾಲೂಕಿನ ಎಲ್ಲಾ ಶಾಲೆಗಳಿಗೆ ರಜೆ ಘೋಷಣೆ ಮಾಡಲಾಗಿದೆ. ಬಸ್​​ ಸಂಚಾರವನ್ನು ಬಂದ್​​ ಮಾಡಲಾಗಿದೆ.

ಬೆಳ್ಳಂಬೆಳಗ್ಗೆ ಮಾವು ಬೆಂಬಲ ಬೆಲೆಗೆ ಒತ್ತಾಯಿಸಿ ರಸ್ತೆಗಿಳಿದ ಮಾವು ಬೆಳೆಗಾರರು ರಸ್ತೆಗೆ ಮಾವು ಚೆಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಬೆಂಬಲ ಬೆಲೆ ಘೋಷಣೆಗೆ ಒತ್ತಾಯ ಮಾಡಿದ್ದಾರೆ. ಎಷ್ಟೇ ಮನವಿ ಮಾಡಿದರೂ ಸರ್ಕಾರ ಸ್ಪಂದಿಸ್ತಿಲ್ಲ ಎಂದು ಬಂದ್​​ ಮಾಡಿ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಶ್ರೀನಿವಾಸಪುರ ಪಟ್ಟಣದ ಬಸ್ ನಿಲ್ದಾಣ ವೃತ್ತದಲ್ಲಿ ಮಾವು ಬೆಳೆಗಾರರು ಪ್ರತಿಭಟನೆ ನಡೆಸುತ್ತಿದ್ದಾರೆ. ಮಾವಿಗೆ ಬೆಂಬಲ ಬೆಲೆ ಸಿಗದೇ ರೈತರು ಪರದಾಡುವಂತಾಗಿದ್ದು, ಪ್ರತಿ ಕೆಜಿ ಮಾವಿಗೆ 10 ರಿಂದ 15 ರೂಪಾಯಿ ಬೆಂಬಲ ಬೆಲೆ ಘೋಷಣೆ ಮಾಡಬೇಕು ಎಂದು ಸರ್ಕಾರವನ್ನು ಒತ್ತಾಯಿಸಿದ್ದಾರೆ.

ನಗರದಲ್ಲಿ ಸರ್ಕಾರಿ ಬಸ್ ಸಂಚಾರ ಸಂಪೂರ್ಣ ಸ್ಥಗಿತ : ಕೋಲಾರ ಜಿಲ್ಲಾ ಮಾವು ಬೆಳೆಗಾರರ ಸಂಘದಿಂದ ಬಂದ್​ಗೆ ಕರೆ ನೀಡಿರುವ ಈ ಹಿನ್ನಲೆ ಇಂದು ಶ್ರೀನಿವಾಸಪುರ ನಗರದಲ್ಲಿ ಸರ್ಕಾರಿ ಬಸ್ ಸಂಚಾರ ಸಂಪೂರ್ಣ ಸ್ಥಗಿತಗೊಳಿಸಲಾಗಿದೆ. ಬೆಳ್ಳಂಬೆಳಗ್ಗೆ ಬೀದಿಗಿಳಿದ ಮಾವು ಬೆಳೆಗಾರರ ಸಂಘದ ಸದಸ್ಯರು ಶ್ರೀನಿವಾಸಪುರ ಪಟ್ಟಣದಲ್ಲಿ ವಾಹನಗಳನ್ನು ತಡೆದು ವಾಪಾಸ್ ಕಳಿಸ್ತಿದ್ದಾರೆ. ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಪೊಲೀಸರು ಬಿಗಿ ಬಂದೋಬಸ್ತ್ ಮಾಡಿದ್ದಾರೆ.
Btv Kannada
Author: Btv Kannada

Read More