ಕಾಲ್ತುಳಿತ ದುರಂತ -​ ಸಿದ್ದರಾಮಯ್ಯ ಸರ್ಕಾರಕ್ಕೆ ಇವತ್ತು ಮಹತ್ವದ ದಿನ.. ಹೈಕೋರ್ಟ್​ನಲ್ಲಿ PIL ವಿಚಾರಣೆ!

ಬೆಂಗಳೂರು : ಚಿನ್ನಸ್ವಾಮಿ ಸ್ಟೇಡಿಯಂ ಬಳಿ 11 ಅಮಾಯಕರನ್ನ ಬಲಿ ತೆಗೆದುಕೊಂಡ ಕಾಲ್ತುಳಿತ ಪ್ರಕರಣ ಹೈಕೋರ್ಟ್​ ಕಟಕಟೆಯಲ್ಲಿ ನಿಂತಿದೆ. ಸರ್ಕಾರದ ವೈಫಲ್ಯ, KSCA ನಿರ್ಲ್ಯಕ್ಷದ ಬಗ್ಗೆ ​​​​ತರಾಟೆಗೆ ತೆಗೆದುಕೊಂಡ ಹೈಕೋರ್ಟ್​, ವಿಚಾರಣೆಯನ್ನ ಜೂನ್​ಕ್ಕೆ 10ಕ್ಕೆ ಮುಂದೂಡಿತ್ತು.

ಕಪ್​ ಗೆದ್ದ ಸಂಭ್ರಮ ಕಸಿದುಕೊಂಡ ಕಾಲ್ತುಳಿತದ ಘಟನೆ ಬಗ್ಗೆ ಸ್ವಯಂಪ್ರೇರಿತ ಪಿಐಎಲ್ ದಾಖಲಿಸಿಕೊಂಡಿದ್ದ ಹೈಕೋರ್ಟ್​ ದುರಂತವನ್ನ ಗಂಭೀರವಾಗಿ ಪರಿಗಣಿಸಿದೆ. ಸರ್ಕಾರಕ್ಕೆ ಒಂದಷ್ಟು ಪ್ರಶ್ನೆಗಳನ್ನ ಕೇಳಿದ್ದ ನ್ಯಾಯಾಲಯ, ಚಾಟಿ ಬೀಸಿತ್ತು. ಇಂದು ಮತ್ತೆ ಈ ಪ್ರಕರಣದ ವಿಚಾರಣೆ ನಡೆಯಲಿದ್ದು, ಹೈಕೋರ್ಟ್​ನತ್ತ ರಾಜ್ಯದ ಜನರ ಗಮನ ನೆಟ್ಟಿದೆ.

ಹೈಕೋರ್ಟ್ ಹಂಗಾಮಿ ಮುಖ್ಯ ನ್ಯಾಯಮೂರ್ತಿ ಶ್ರೀ ಕಾಮೇಶ್ವರ ರಾವ್ ಹಾಗೂ ನ್ಯಾಯಮೂರ್ತಿ ಸಿ.ಎಂ ಜೋಶಿ ಅವರ  ದ್ವಿಸದಸ್ಯ ಪೀಠದಲ್ಲಿ PIL ಅರ್ಜಿ ವಿಚಾರಣೆ ನಡೆಯಲಿದೆ. ಕಳೆದ ವಾರ ಮ್ಯಾಜಿಸ್ಟೀರಿಯಲ್ ತನಿಖೆ ಮತ್ತು ರಿಪೋರ್ಟ್ ನೀಡುವಂತೆ ನ್ಯಾಯ ಪೀಠ ಸೂಚಿಸಿತ್ತು. ಅದರಂತೆ ಇಂದು ಚಿನ್ನಸ್ವಾಮಿ ಸ್ಟೇಡಿಯಂ ಕಾಲ್ತುಳಿತ ಸಂಬಂಧಪಟ್ಟ ಪ್ರಾಥಮಿಕ ತನಿಖಾ ವರದಿಯನ್ನು ತನಿಖಾಧಿಕಾರಿ ಜಗದೀಶ್ ಅವರು ಹೈಕೋರ್ಟ್​ಗೆ ಸಲ್ಲಿಸಲಿದ್ದಾರೆ.  ಹೈಕೋರ್ಟ್​ ಇಂದು ನಡೆಸಲಿರೋ ವಿಚಾರಣೆ ಸರ್ಕಾರದ ದೃಷ್ಟಿಯಲ್ಲೂ ಮಹತ್ವದ್ದಾಗಿದ್ದು, ಇಡೀ ಪ್ರಕರಣಕ್ಕೆ ಹೊಸ ಆಯಾಮ ತಂದುಕೊಡೋ ಸಾಧ್ಯತೆಯೂ ಇದೆ.

ಕೋರ್ಟ್​ನಲ್ಲಿ ಸರ್ಕಾರದ ನಿಲುವು ಏನು?

  • ಸಂಭ್ರಮಾಚರಣೆ ದಿನದಂದು ಸರ್ಕಾರ ಕೈಗೊಂಡ ಕ್ರಮಗಳ ಬಗ್ಗೆ ಚರ್ಚೆ
  •  ಆರ್‌ಸಿಬಿ ವಿಜಯೋತ್ಸವ 3 ಹಂತದಲ್ಲಿ ನಡೆಸುವ ಆಲೋಚನೆ ಇತ್ತು
  •  ವಿಧಾನಸೌಧದ ಮೆಟ್ಟಿಲ ಮೇಲೆ ಸರ್ಕಾರದಿಂದ ಸನ್ಮಾನ ಕಾರ್ಯಕ್ರಮ
  •  ಸಾರ್ವಜನಿಕರಿಗೆ ತೊಂದರೆ ಕಾರಣಕ್ಕೆ ವಿಕ್ಟರಿ ಪರೇಡ್​ಗೆ ಅನುಮತಿ ನೀಡಿಲ್ಲ
  •  ಕೆಎಸ್‌ಸಿಎ, ಆರ್‌ಸಿಬಿ, ಡಿಎನ್‌ಎಯಿಂದ ಚಿನ್ನಸ್ವಾಮಿಯಲ್ಲಿ ವಿಜಯೋತ್ಸವ
  •  ಕ್ರೀಡಾಂಗಣದ ಗೇಟ್​ಗಳನ್ನ ತೆರೆಯುವ, ಮುಚ್ಚುವ ಅಧಿಕಾರ ಸರ್ಕಾರದ್ದಲ್ಲ
  •  ವಿಧಾನಸೌಧದ ಮುಂದೆ ನಡೆದ ಕಾರ್ಯಕ್ರಮದಲ್ಲಿ ಅವಘಡ ನಡೆದಿಲ್ಲ
  •  ಕೋರ್ಟ್​ಗೆ ಮನವರಿಕೆ ಮಾಡಿಕೊಡುವ ಸಂಬಂಧ ಸಭೆಯಲ್ಲಿ ಚರ್ಚೆ

RCB ಮಾರ್ಕೆಟಿಂಗ್ ಹೆಡ್​ಗೆ ಇವತ್ತಾದ್ರೂ ಸಿಗುತ್ತಾ ಖುಷ್? ಕಾಲ್ತುಳಿತ ಪ್ರಕರಣಕ್ಕೆ ಸಂಬಂಧಿಸಿದಂತೆ ತಮ್ಮ ವಿರುದ್ಧ ದಾಖಲಾಗಿರುವ ಪ್ರಕರಣ ರದ್ದುಪಡಿಸುವಂತೆ ಆರ್‌ಸಿಬಿ ಮಾರ್ಕೆಟಿಂಗ್‌ ಮುಖ್ಯಸ್ಥ ನಿಖಿಲ್‌ ಸೋಸಲೆ ಹೈಕೋರ್ಟ್​ಗೆ ಅರ್ಜಿ ಸಲ್ಲಿಸಿದ್ದರು. ಹೈಕೋರ್ಟ್​ನ ಏಕಸದಸ್ಯ ಪೀಠ ವಾದ-ಪ್ರತಿವಾದ ಆಲಿಸಿ, ವಿಚಾರಣೆಯನ್ನು ಇಂದಿಗೆ ಮುಂದೂಡಿತ್ತು. ಹೀಗಾಗಿ ನಿಖಿಲ್ ಸೋಸಲೆಗೂ ಇವತ್ತು ಬಿಗ್ ಡೇ. ಒಟ್ನಲ್ಲಿ ಹೈಕೋರ್ಟ್​ ಕಟಕಟೆಯಲ್ಲಿ ನಿಂತಿರೋ ಕಾಲ್ತುಳಿತ ದುರಂತ ಅಸುನೀಗಿದ 11 ಮಂದಿಯ ಕುಟುಂಬಕ್ಕೆ ನ್ಯಾಯ ಒದಗಿಸುವ ಆಶಾಭಾವನೆ ಮೂಡಿಸಿದೆ.

ಇದನ್ನೂ ಓದಿ : ಮಂಡ್ಯ ಮನ್​ಮುಲ್ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ ಯು.ಸಿ. ಶಿವಕುಮಾರ್!

Btv Kannada
Author: Btv Kannada

Read More