ವಂಚಕಿ ಐಶ್ವರ್ಯಾ ಗೌಡ CDR​ ಕೇಸ್​​ – ವಿಚಾರಣೆಗೆ ಹಾಜರಾಗಲು ನೋಟಿಸ್ ಜಾರಿ..!

ಬೆಂಗಳೂರು : ಮಾಜಿ ಸಂಸದ ಡಿ.ಕೆ. ಸುರೇಶ್ ಅವರ ತಂಗಿ ಎಂದು ಕೋಟ್ಯಾಂತರ ರೂ. ವಂಚಿಸಿದ ಆರೋಪ ಎದುರಿಸುತ್ತಿರುವ ಐಶ್ವರ್ಯಾ ಗೌಡ ವಿರುದ್ಧ ಮತ್ತೊಂದು ಗಂಭೀರ ಆರೋಪ ಕೇಳಿಬಂದಿದೆ. ಐಶ್ವರ್ಯಾ ಗೌಡ ಅಕ್ರಮವಾಗಿ ಹಲವು ವ್ಯಕ್ತಿಗಳ ಫೋನ್ ಕರೆ ದಾಖಲೆಗಳನ್ನು (ಸಿಡಿಆರ್) ಪಡೆದುಕೊಂಡಿದ್ದು, ಖುದ್ದು ಪ್ರಕರಣದ ತನಿಖಾಧಿಕಾರಿಯಾಗಿರುವ ಎಸಿಪಿ‌ ಭರತ್ ರೆಡ್ಡಿ ಅವರು ನೀಡಿರುವ ದೂರಿನ ಮೇರೆಗೆ ಮತ್ತೊಂದು ಎಫ್ಐಆರ್ ದಾಖಲಿಸಲಾಗಿದೆ.

ಈ ಸಂಬಂಧ ಇದೀಗ ಬಂಗಾರ ವಂಚಕಿ ಐಶ್ವರ್ಯಾ ಗೌಡಗೆ ವಿಚಾರಣೆಗೆ ಹಾಜರಾಗಲು ವಿಜಯನಗರ ಎಸಿಪಿ ಚಂದನ್ ನೋಟಿಸ್ ಜಾರಿ ಮಾಡಿದ್ದಾರೆ. ಗುರುವಾರ ಬೆಳ್ಳಗ್ಗೆ 10:30ಕ್ಕೆ ವಿಚಾರಣೆ ಹಾಜರಾಗಲು ಸೂಚಿಸಲಾಗಿದೆ. ಹಣ ಪಡೆದು ವಂಚಿಸಿದ್ದವರ ಮೇಲೆ ನಿಗಾವಹಿಸಲು ಪೊಲೀಸರನ್ನ ಬಳಸಿಕೊಂಡು ಅಕ್ರಮವಾಗಿ ಐಶ್ವರ್ಯಾ ಸಿಡಿಆರ್ ಪಡೆದಿದ್ದಾರೆ ಎನ್ನಲಾಗಿದೆ. ವಿಚಾರಣೆಗೆ ಹಾಜರಾದಗ ಈ ಎಲ್ಲವುಗಳ ಬಗ್ಗೆ ತನಿಖೆ ನಡೆಯಲಿದೆ.

ಇನ್ನು ವಂಚನೆ ಪ್ರಕರಣ ದಾಖಲಾಗುತ್ತಿದ್ದಂತೆ ಐಶ್ವರ್ಯಾ ಗೌಡ ಅವರ 5 ಹಾಗೂ ಅವರ ಪತಿಯ 2 ಮೊಬೈಲ್ ಫೋನ್‌ಗಳನ್ನು ವಶಕ್ಕೆ ಪಡೆದಿದ್ದ ಪೊಲೀಸರು, ಅವುಗಳಲ್ಲಿದ್ದ ಡೇಟಾ ಸಂಗ್ರಹಣೆಗಾಗಿ ನ್ಯಾಯಾಲಯದ ಅನುಮತಿ ಪಡೆದು ಪಶ್ಚಿಮ ವಿಭಾಗದ ಸಿಇಎನ್ ಠಾಣೆಗೆ ರವಾನಿಸಿದ್ದರು. ಆ ಫೋನ್‌ಗಳಲ್ಲಿರುವ ಡೇಟಾವನ್ನು ಸಂಗ್ರಹಿಸಿದಾಗ ಅದರಲ್ಲಿ ಹಲವು ವ್ಯಕ್ತಿಗಳ ಸಿಡಿಆರ್ ವಿವರಗಳು ಪತ್ತೆಯಾಗಿವೆ.

ಫೋನ್ ಕರೆ ದಾಖಲೆಗಳು ಖಾಸಗಿಯಾಗಿದ್ದು, ಸಾಮಾನ್ಯವಾಗಿ ಅಪರಾಧ ಪ್ರಕರಣಗಳ ತನಿಖೆ ನಡೆಸುವಾಗ ತನಿಖಾ ಸಂಸ್ಥೆ ಅಥವಾ ತನಿಖಾಧಿಕಾರಿಗಳು ಮಾತ್ರವೇ ಅಗತ್ಯತೆ ಅನುಸಾರ ಅವುಗಳನ್ನು ಪಡೆದುಕೊಳ್ಳುವ ಅವಕಾಶ ಹೊಂದಿರುತ್ತಾರೆ ಎಂದು ಎಫ್​ಐಆರ್​ ದಾಖಲಾಗಿದೆ. ಆದರೆ ಆರೋಪಿ ಐಶ್ವರ್ಯಾ ಗೌಡ ಅಕ್ರಮವಾಗಿ ಅನೇಕ ವ್ಯಕ್ತಿಗಳ ಸಿಡಿಆರ್ ಪಡೆದುಕೊಂಡಿರುವುದು ಬಯಲಾಗಿದೆ. ಆದ್ದರಿಂದ ಐಶ್ವರ್ಯಾ ಗೌಡ ಹಾಗೂ ಆಕೆಗೆ ಸಿಡಿಆರ್ ನೀಡಿರುವ ತನಿಖಾ ಸಂಸ್ಥೆಯ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ತನಿಖಾಧಿಕಾರಿಯಾಗಿರುವ ಎಸಿಪಿ‌ ಭರತ್ ರೆಡ್ಡಿ ದೂರು ನೀಡಿದ್ದರು.

Btv Kannada
Author: Btv Kannada

Read More