ಶಿವಮೊಗ್ಗದಲ್ಲಿ ಅಕ್ರಮ ಮರಳು ಗಣಿಗಾರಿಕೆ ಸದ್ದು.. ಮಹಿಳಾ ಅಧಿಕಾರಿ ಮೇಲೆ ಶಾಸಕ ಸಂಗಮೇಶ್ ಪುತ್ರನ ದರ್ಪ – ಕಠಿಣ ಕ್ರಮಕ್ಕೆ ಆರ್.​ ಅಶೋಕ್ ಆಗ್ರಹ!

ಶಿವಮೊಗ್ಗ : ಅಕ್ರಮ ಮರಳು ಗಣಿಗಾರಿಕೆಯನ್ನು ತಡೆಯಲು ಹೋದ ಶಿವಮೊಗ್ಗ ಜಿಲ್ಲೆಯ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಮಹಿಳಾ ಅಧಿಕಾರಿಗೆ ಅವಾಚ್ಯ ಶಬ್ಧಗಳಿಂದ ನಿಂದಿಸಿರುವ ಭದ್ರಾವತಿ ಕಾಂಗ್ರೆಸ್‌ ಶಾಸಕ ಬಿ.ಕೆ.ಸಂಗಮೇಶ್‌ ಅವರ ಪುತ್ರ, ಬಸವೇಶ್ ವಿರುದ್ಧ ರಾಜ್ಯಾದ್ಯಂತ ಭಾರೀ ಆಕ್ರೋಶ ವ್ಯಕ್ತವಾಗುತ್ತಿದೆ.

ಶಾಸಕ ಸಂಗಮೇಶ್‌ ಪುತ್ರ ಬಸವೇಶ್, ಮಹಿಳಾ ಅಧಿಕಾರಿಗೆ ಅವಾಚ್ಯ ಶಬ್ಧಗಳಿಂದ ನಿಂದಿಸಿ, ದರ್ಪ ಮೆರೆದ ಆಡಿಯೋ, ವಿಡಿಯೋ ಎಲ್ಲೆಡೆ ಕೋಲಾಹಲ ಸೃಷ್ಟಿಸಿದ್ದು, ಶೀಘ್ರವೇ ಬಸವೇಶ್ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂಬ ಆಗ್ರಹಗಳು ಕೇಳಿಬರುತ್ತಿದೆ. ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ವಿಪಕ್ಷ ನಾಯಕ ಆರ್.​ ಅಶೋಕ್ ಕೂಡ​ ಕಿಡಿಕಾರಿದ್ದಾರೆ.

ವಿಪಕ್ಷ ನಾಯಕ ಆರ್.​ ಅಶೋಕ್​ ಕಿಡಿ : “ಕಾಂಗ್ರೆಸ್ ಪಕ್ಷದ ನೀಚ ಸಂಸ್ಕೃತಿ ಎಂಥದ್ದು, ಮಹಿಳೆಯರ ಮೇಲೆ ಕಾಂಗ್ರೆಸ್ ಪಕ್ಷಕ್ಕೆ ಇರುವ ಧೋರಣೆ ಎಂಥದ್ದು ಎನ್ನುವುದನ್ನ ಮತ್ತೊಮ್ಮೆ ಪ್ರದರ್ಶನ ಮಾಡಿದಂತಾಗಿದೆ. ಸಿಎಂ ಸಿದ್ದರಾಮಯ್ಯನವರೇ, ತಮ್ಮ ಭ್ರಷ್ಟ ಸರ್ಕಾರದ ಕಿರುಕುಳಕ್ಕೆ ಈಗಾಗಲೇ ರಾಜ್ಯದಲ್ಲಿ 4-5 ಪ್ರಾಮಾಣಿಕ ಅಧಿಕಾರಿಗಳು, ಗುತ್ತಿಗೆದಾರರು ಆತ್ಮಹತ್ಯೆಗೆ ಶರಣಾಗಿದ್ದಾರೆ. ನಿಮ್ಮ ಭ್ರಷ್ಟಾಚಾರದ ದಾಹಕ್ಕೆ ರಾಜ್ಯದಲ್ಲಿ ಇನ್ನೆಷ್ಟು ಬಲಿಯಾಗಬೇಕು?

ಇಷ್ಟಕ್ಕೂ ಶಾಸಕರ ಪುತ್ರನಿಗೆ ಅಧಿಕಾರಿಯೊಂದಿಗೆ ಮಾತನಾಡಲು ಯಾವ ಹಕ್ಕಿದೆ? ಭದ್ರಾವತಿ ಕ್ಷೇತ್ರಕ್ಕೆ ಸಂಗಮೇಶ್ ಅವರು ಶಾಸಕರೋ ಅಥವಾ ಪಾಳೆಗಾರರೋ? ಅಥವಾ ರಾಹುಲ್ ಗಾಂಧಿ ಅವರು ತೋರಿಸುವ ಸಂವಿಧಾನದ ಪುಸ್ತಕದಲ್ಲಿ ಶಾಸಕರ ಮಕ್ಕಳಿಗೆ, ಕುಟುಂಬಸ್ಥರಿಗೂ ಅಧಿಕಾರವಿದೆಯೋ? ಮಹಿಳೆಯರ ಮೇಲೆ ಕಾಂಗ್ರೆಸ್ ಪಕ್ಷದ ಈ ದಬ್ಬಾಳಿಕೆ, ದೌರ್ಜನ್ಯವನ್ನ ನಾಡಿನ ಜನತೆ ಗಮನಿಸುತ್ತಿದ್ದಾರೆ. ಇದಕ್ಕೆಲ್ಲ ನಾಡಿನ ಮಹಿಳೆಯರು ತಕ್ಕ ಉತ್ತರ ಕೊಡುವ ದಿನ ಬಹಳ ದೂರವಿಲ್ಲ ಎಂದು ಆರ್.​ ಅಶೋಕ್​ ಆಕ್ರೋಶ ಹೊರಹಾಕಿದ್ದಾರೆ.

ಹಾಗೆಯೇ ಭದ್ರಾವತಿಯನ್ನು ರಿಪಬ್ಲಿಕ್‌ ಮಾಡಿ ಆಟಾಟೋಪ ಮೆರೆಯುತ್ತಿರುವ ಶಾಸಕರ ಪುತ್ರ ಬಸವೇಶ್‌ರನ್ನು ಕೂಡಲೇ ಬಂಧಿಸಿ, ಗಡಿಪಾರು ಮಾಡಬೇಕೆಂದು ಬಿಜೆಪಿ ಆಗ್ರಹಿಸಿದೆ.

Btv Kannada
Author: Btv Kannada

Read More