ಮೈಸೂರು : ರಾಜ್ಯ ರಾಜಕಾರಣದಲ್ಲಿ ಸಿಎಂ ಬದಲಾವಣೆ ಬಗ್ಗೆ ಚರ್ಚೆ ನಡೆಯುತ್ತಿದ್ದು, ಇದೀಗ ಈ ಕುರಿತು ಇಂಧನ ಸಚಿವ ಕೆ.ಜೆ.ಜಾರ್ಜ್ ಪ್ರತಿಕ್ರಿಯಿಸಿ, ಜನ ಬೆಂಬಲವಿರುವ ಸಿಎಂ ಸಿದ್ದರಾಮಯ್ಯ ಅವರು ಇನ್ನೂ ಅಧಿಕಾರದಲ್ಲಿ 5 ವರ್ಷವೂ ಇರಬಹುದು, 10 ವರ್ಷಗಳೂ ಇರಬಹುದು ಎಂದಿದ್ದಾರೆ.
ಈ ಬಗ್ಗೆ ಮೈಸೂರಿನಲ್ಲಿ ಕೆ.ಜೆ.ಜಾರ್ಜ್ ಮಾತನಾಡಿ, ಹೈಕಮಾಂಡ್ ಹಾಗೂ ಶಾಸಕರ ಬೆಂಬಲ ಸಿದ್ದರಾಮಯ್ಯ ಹಾಗೂ ನಮ್ಮ ಸರ್ಕಾರದ ಮೇಲಿದೆ. ಯಾವ ವಿಚಾರ ಯಾವಾಗ ನಿರ್ಧರಿಸಬೇಕು ಎಂಬುದು ಹೈಕಮಾಂಡ್ಗೆ ತಿಳಿದಿದೆ. ಇನ್ನೂ ಕಾಂಗ್ರೆಸ್ ಸರ್ಕಾರ 5 ವರ್ಷವೂ ಇರಬಹುದು. ಈ ಸಂಬಂಧ ನನ್ನನ್ನು ಹೆಚ್ಚು ಪ್ರಶ್ನೆ ಕೇಳಿ ಸಿಲುಕಿಸಲು ಯತ್ನಿಸಬೇಡಿ. ನೀವು ಪ್ರಶ್ನೆ ಕೇಳಿದ್ದೀರಾ ನಾನು ಉತ್ತರಿಸಿದ್ದೇನೆ. ನನ್ನದೇ ಪ್ರಶ್ನೆ–ನನ್ನದೇ ಉತ್ತರ ಎಂಬಂತೆ ಬಿಂಬಿಸಬೇಡಿ ಎಂದು ಹೇಳಿದರು.
ಸ್ಮಾರ್ಟ್ ಮೀಟರ್ ಅಳವಡಿಕೆಯಲ್ಲಿ ಅವ್ಯವಹಾರ ನಡೆದಿದೆ ಎಂಬ ಬಿಜೆಪಿಯ ಆರೋಪಗಳ ಬಗ್ಗೆ ಪ್ರತಿಕ್ರಿಯಿಸಿದ ಅವರು, ಬಿಜೆಪಿಗೆ ಕಿಕ್ಕೂ ಇಲ್ಲ, ಬ್ಯಾಕೂ ಇಲ್ಲ. ಅವರೇನು ಅದರ ಬಗ್ಗೆ ಮಾತನಾಡುವುದು? ಅವರು ಎಲ್ಲಾ ವಿಚಾರಗಳಲ್ಲೂ ಇಂಥಾದ್ದೇ ಆರೋಪಗಳನ್ನು ಮಾಡುತ್ತಾರೆ ಎಂದರು.
ಡಿ.ಕೆ ರವಿ ಸಾವು, ಗಣಪತಿ ಆತ್ಮಹತ್ಯೆ ಪ್ರಕರಣದಲ್ಲೂ ನನ್ನ ಮೇಲೆ ಆರೋಪ ಮಾಡಿದ್ದರು. ಸಿಬಿಐನವರೂ ನನ್ನನ್ನ ಕರೆಸಲೇ ಇಲ್ಲ. ಇದೇ ರೀತಿ ಬಿಜೆಪಿಯವರು ಸ್ಮಾರ್ಟ್ ಮೀಟರ್ ವಿಚಾರದಲ್ಲೂ ನಿರಾಧಾರ ಆರೋಪ ಮಾಡುತಿದ್ದಾರೆ. ಬಿಜೆಪಿಯವರು ನನ್ನ ಮೇಲೆ ಯಾಕೆ ಈ ರೀತಿ ಆರೋಪ ಮಾಡುತ್ತಾರೆಯೋ ಗೊತ್ತಿಲ್ಲ ಎಂದು ಪ್ರತಿಕ್ರಿಯಿಸಿದರು.
ಇದನ್ನೂ ಓದಿ : ಕರುನಾಡಲ್ಲಿ ಮುಗಿಲು ಮುಟ್ಟಿದ RCB ಫ್ಯಾನ್ಸ್ ಸಂಭ್ರಮ – ಭಾವನಾತ್ಮಕ ಪೋಸ್ಟ್ ಹಂಚಿಕೊಂಡ ಕೊಹ್ಲಿ.. ಏನಂದ್ರು?
