ಈ ಸಲ ಕಪ್ ನಮ್ದು – ಆರ್‌ಸಿಬಿ ದಿಗ್ವಿಜಯಕ್ಕೆ ಸಿದ್ದು, ಡಿಕೆಶಿ, ಹೆಚ್‌ಡಿಕೆ ಸೇರಿದಂತೆ ಗಣ್ಯರಿಂದ ಅಭಿನಂದನೆಗಳ ಸುರಿಮಳೆ!

ಬೆಂಗಳೂರು : ರಾಯಲ್ ಚಾಲೆಂಜರ್ಸ್ ಬೆಂಗಳೂರು ಕೊನೆಗೂ ಪ್ರಶಸ್ತಿ ಬರವನ್ನು ನೀಗಿಸಿಕೊಂಡಿದೆ. ಮೋದಿ ಸ್ಟೇಡಿಯಂನಲ್ಲಿ ನಿನ್ನೆ ನಡೆದ ಅಂತಿಮ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ತಂಡವನ್ನು ಆರ್‌ಸಿಬಿ ಕೇವಲ 6 ರನ್‌ಗಳಿಂದ ಸೋಲಿಸಿ ಚಾಂಪಿಯನ್ ಆಗಿ ಹೊರಹೊಮ್ಮಿದೆ.

ಇನ್ನು ಐಪಿಎಲ್‌ ಚಾಂಪಿಯನ್‌ ಪಟ್ಟಕ್ಕೇರಿದ ಆರ್‌ಸಿಬಿಗೆ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ ಶಿವಕುಮಾರ್‌ ಹಾಗೂ ಕೇಂದ್ರ ಸಚಿವ ಹೆಚ್‌.ಡಿ ಕುಮಾರಸ್ವಾಮಿ ಸೇರಿ ಅನೇಕ ರಾಜಕೀಯ ನಾಯಕರುಗಳು ಅಭಿನಂದನೆ ಸಲ್ಲಿಸಿದ್ದಾರೆ.

ಈ ಬಗ್ಗೆ ಎಕ್ಸ್‌ನಲ್ಲಿ ಪೋಸ್ಟ್‌ ಹಾಕಿರುವ ಸಿಎಂ ಸಿದ್ದರಾಮಯ್ಯ, ಐಪಿಎಲ್ ಫೈನಲ್ ಪಂದ್ಯದಲ್ಲಿ ಪಂಜಾಬ್ ತಂಡವನ್ನು ಬಗ್ಗುಬಡಿದು ಕಪ್ ಮುಡಿಗೇರಿಸಿಕೊಂಡ ಆರ್‌ಸಿಬಿ ತಂಡಕ್ಕೆ ಅಭಿನಂದನೆಗಳು. ಇಡೀ ಪಂದ್ಯಾವಳಿಯಲ್ಲಿ ಒಂದು ತಂಡವಾಗಿ ಸಂಘಟಿತ ಪ್ರದರ್ಶನ ನೀಡುವ ಮೂಲಕ ಕೋಟ್ಯಂತರ ಅಭಿಮಾನಿಗಳ ಕನಸನ್ನು ಈ ದಿನ ಆರ್‌ಸಿಬಿಯ ಹುಡುಗರು ನನಸಾಗಿಸಿದ್ದಾರೆ. ಆರ್‌ಸಿಬಿಯ ಈ ವಿಜಯದಲ್ಲಿ ವಿರಾಟ್ ಕೋಹ್ಲಿಯ 18 ವರ್ಷಗಳ ಕಾಲದ ತಪಸ್ಸಿದೆ, ನಿಷ್ಠೆ, ಬದ್ಧತೆಯಿದೆ. ಬೌಲಿಂಗ್, ಬ್ಯಾಟಿಂಗ್, ಫೀಲ್ಡಿಂಗ್ ಹೀಗೆ ಎಲ್ಲಾ ವಿಭಾಗದಲ್ಲೂ ಆರ್‌ಸಿಬಿ ಪ್ರತಿ ಆಟಗಾರರು ಚಾಂಪಿಯನ್ ಪ್ರದರ್ಶನ ನೀಡಿದ್ದಾರೆ ಎನ್ನುವುದರಲ್ಲಿ ಅನುಮಾನವೇ ಇಲ್ಲ. ಇದು ಇತಿಹಾಸ ಸೃಷ್ಟಿಸಿದ ದಿನ.. ಕೊನೆಯದಾಗಿ, ಈ ಸಲ ಕಪ್ ನಮ್ದೆ.. ಎಂದು ಬರೆದುಕೊಂಡಿದ್ದಾರೆ.

ಮರೆಯಲಾಗದ, ಐತಿಹಾಸಿಕ ಗೆಲುವು : ಡಿಕೆ ಶಿವಕುಮಾರ್ : ಈ ಸಲಾ ಕಪ್ ನಮ್ದೇ! ಐಪಿಎಲ್​ನಲ್ಲಿ ಇಂದು ಮರೆಯಲಾಗದ, ಐತಿಹಾಸಿಕ ಗೆಲುವಿಗಾಗಿ ಆರ್​ಸಿಬಿಗೆ ಅಭಿನಂದನೆಗಳು. 18 ವರ್ಷಗಳ ಉತ್ಸಾಹ, ನಿಷ್ಠೆ ಈ ರಾತ್ರಿ ಹೊರಹೊಮ್ಮಿದೆ. ನೀವು ಪ್ರತಿಯೊಬ್ಬ ಕನ್ನಡಿಗನ ಕನಸನ್ನು ನನಸಾಗಿಸಿದ್ದೀರಿ. ಇದು ಗೆಲುವಿಗಿಂತ ಹೆಚ್ಚಿನದು. ಇಡೀ RCB ಸೈನ್ಯಕ್ಕೆ ಭಾವನಾತ್ಮಕ ಕ್ಷಣವಾಗಿದೆ. ಈ ಗೆಲುವನ್ನು ಕರ್ನಾಟಕ ಹೆಮ್ಮೆಯಿಂದ ಹೇಳುತ್ತದೆ ಎಂದು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್​ ಟ್ವೀಟ್​ ಮಾಡಿದ್ದಾರೆ.

ಈ ಬಗ್ಗೆ ಎಕ್ಸ್‌ನಲ್ಲಿ, ವೀಡಿಯೋ ಹಂಚಿಕೊಂಡಿರುವ ಹೆಚ್‌ಡಿಕೆ, ಬೆಂಗಳೂರು ತಂಡಕ್ಕೆ ಹೃತ್ಪೂರ್ವಕ ಅಭಿನಂದನೆಗಳು. ಆರೂವರೆ ಕೋಟಿ ಕನ್ನಡಿಗರ ಕನಸನ್ನು ನನಸು ಮಾಡಿದ ಪಟಿದಾರ್ ಪಡೆಯ ಶ್ರೇಷ್ಠ ಕ್ರಿಕೆಟ್ ಕನ್ನಡಿಗರು ಮಾತ್ರವಲ್ಲದೆ, ಇಡೀ ಜಗತ್ತಿನ ಕ್ರಿಕೆಟ್ ಪ್ರೇಮಿಗಳ ಮನಸೂರೆಗೊಂಡಿದೆ ಎಂದು ಹೇಳಿದ್ದಾರೆ. ಕರ್ನಾಟಕದ ಕ್ರಿಕೆಟ್ ಇತಿಹಾಸದಲ್ಲಿಯೇ ಈ ಗೆಲುವು ಮಹೋನ್ನತ ಮೈಲುಗಲ್ಲು ಎಂಬುದು ನನ್ನ ಅಭಿಪ್ರಾಯ, ಮುಖ್ಯವಾಗಿ 18 ವರ್ಷಗಳಷ್ಟು ಸುದೀರ್ಘ ಕಾಲ ತಂಡ ಶ್ರೇಯಸ್ಸಿಗಾಗಿ ತಮ್ಮನ್ನು ಸಮರ್ಪಣೆ ಮಾಡಿಕೊಂಡ ಹಿರಿಯ ಆಟಗಾರ ಕೋಹ್ಲಿಯವರಿಗೆ ಅಭಿನಂದಿಸುತ್ತೇನೆ ಎಂದು ಹೇಳಿಕೊಂಡಿದ್ದಾರೆ.

ಕನಸು ಕೊನೆಗೂ ನನಸಾಗಿದೆ: ಆರ್​ ಅಶೋಕ್​ : 18 ವರ್ಷಗಳ ಭರವಸೆ, ದುಃಖ ಮತ್ತು ಉತ್ಸಾಹ, ಕನಸು ಕೊನೆಗೂ ನನಸಾಗಿದೆ. ಆರ್​ಸಿಬಿಗೆ ಅಭಿನಂದನೆಗಳು. ಕೊನೆಗೂ ಚಾಂಪಿಯನ್ಸ್ ಎಂದು ಆರ್​ ಅಶೋಕ್​ ಟ್ವೀಟ್​ ಮಾಡಿದ್ದಾರೆ.

ಇದನ್ನೂ ಓದಿ : ಆರ್​ಸಿಬಿಗೆ ಅಭಿನಂದನೆಗಳ ಮಹಾಪೂರ – ಬೆಂಗಳೂರಿನ ಗಲ್ಲಿ ಗಲ್ಲಿಯಲ್ಲೂ ವಿಜಯೋತ್ಸವ.. ಮುಗಿಲು ಮುಟ್ಟಿದ ಫ್ಯಾನ್ಸ್​ ಸಂಭ್ರಮ!

 

 

Btv Kannada
Author: Btv Kannada

Read More