ತುಮಕೂರಿನಲ್ಲಿ ಮಹಿಳಾ ಪೊಲೀಸ್ ಸಿಬ್ಬಂದಿಗೆ ಹಲ್ಲೆ, ಜಾತಿನಿಂದನೆ – ಇಬ್ಬರು ಕಾನ್‌ಸ್ಟೇಬಲ್‌ಗಳು ಸಸ್ಪೆಂಡ್!

ತುಮಕೂರು : ಮಹಿಳಾ ಪೊಲೀಸ್ ಸಿಬ್ಬಂದಿಗೆ ಹಲ್ಲೆ ನಡೆಸಿ ಜಾತಿನಿಂದನೆ ಮಾಡಿದ ಆರೋಪದ ಮೇಲೆ ಕುಣಿಗಲ್‌ ತಾಲೂಕು ಅಮೃತೂರು ಪೊಲೀಸ್‌ ಠಾಣೆಯ ಇಬ್ಬರು ಕಾನ್‌ಸ್ಟೇಬಲ್‌ಗಳನ್ನು ಸಸ್ಪೆಂಡ್ ಮಾಡಲಾಗಿದೆ. ಅಮೃತೂರು ಪೊಲೀಸ್‌ ಠಾಣೆಯ ಕಾನ್‌ಸ್ಟೇಬಲ್‌ಗಳಾದ ಭಗವಂತರಾಯ ಬಿರಾದಾ‌ರ್, ನಾಗಭೂಷಣ್‌ ಅಮಾನತುಗೊಂಡವರು.

ಮಹಿಳಾ ಸಿಬ್ಬಂದಿಯೊಬ್ಬರಿಗೆ ಮದುವೆಯಾಗುವುದಾಗಿ ನಂಬಿಸಿ ಲೈಂಗಿಕ ದೌರ್ಜನ್ಯವೆಸಗಿದ್ದ ಭಗವಂತರಾಯ ಬಿರದಾರ್‌ ಯಾರಿಗೂ ಗೊತ್ತಿಲ್ಲದ ಹಾಗೆ ಬೇರೊಂದು ಯುವತಿಯ ಜೊತೆಯಲ್ಲಿ ನಿಶ್ಚಿತಾರ್ಥ ಮಾಡಿಕೊಂಡಿದ್ದ. ಇದನ್ನು ಪ್ರಶ್ನೆ ಮಾಡಿದ್ದಕ್ಕೆ ಇಬ್ಬರ ಮಧ್ಯೆ ಪ್ರವೇಶಿಸಿದ್ದ ಮತ್ತೊಬ್ಬ ಕಾನ್‌ಸ್ಟೇಬಲ್‌ ನಾಗಭೂಷಣ್‌ ಮೊದಮೊದಲು ನ್ಯಾಯ ಕೊಡಿಸುತ್ತೇನೆ ಎಂದಿದ್ದವ ಬಳಿಕ ಭಗವಂತರಾಯ ಬಿರದಾರ್‌ ಜೊತೆ ಕೈ ಜೋಡಿಸಿದ್ದ. ಇನ್ನು ನೊಂದ ಮಹಿಳಾ ಪೊಲೀಸ್​ ಸಿಬ್ಬಂದಿ ಮೇಲೆಯೇ ಹಲ್ಲೆ, ಜಾತಿನಿಂದನೆ ಮಾಡಿ ಇಬ್ಬರು ಕಾನ್‌ಸ್ಟೇಬಲ್​ಗಳು ಪ್ರಾಣ ಬೆದರಿಕೆ ಹಾಕಿದ್ದರು ಎನ್ನಲಾಗಿದೆ.

ಇಬ್ಬರು ಕಾನ್‌ಸ್ಟೇಬಲ್​ಗಳ ಆರ್ಭಟಕ್ಕೆ ಹೆದರಿ ಹಾಗೂ ನ್ಯಾಯಕ್ಕಾಗಿ ಅಮೃತೂರು ಠಾಣೆಯಲ್ಲಿ ಮಹಿಳಾ ಪೊಲೀಸ್ ದೂರು ದಾಖಲಿಸಿದ್ದರು. ಎಫ್‌ಐಆರ್‌ ಆಗುತ್ತಿದ್ದಂತೆಯೇ ಈ ಇಬ್ಬರು ಕಾನ್‌ಸ್ಟೇಬಲ್​ಗಳು ಊರು ಬಿಟ್ಟಿದ್ದರು. ಇತ್ತ ಇಬ್ಬರನ್ನು ಬಂಧಿಸುವುದಕ್ಕೆ ವಿಶೇಷ ತನಿಖಾ ತಂಡವನ್ನು ಎಸ್​ಪಿ ಅಶೋಕ್​ ಕುಮಾರ್‌ ಕಳುಹಿಸಿರುವುದರ ಜೊತೆಗೆ ಅಮಾನತು ಕೂಡ ಮಾಡಿದ್ದಾರೆ.

ಇದನ್ನೂ ಓದಿ : ಮಿಲಿಟರಿ ಕ್ಯಾಂಟೀನ್​ಗಳಿಗೆ ಅಬಕಾರಿ ಸುಂಕ ವಿಧಿಸಲ್ಲ – ಸಿಎಂ ಸಿದ್ದರಾಮಯ್ಯ ಘೋಷಣೆ!

Btv Kannada
Author: Btv Kannada

Read More