ಕಲಬುರಗಿ : ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಯ (ಕೆಕೆಆರ್ಡಿಬಿ) 20 ಕೋಟಿ ರೂ. ಹಾಗೂ ರಾಜ್ಯ ಸರ್ಕಾರದ 5 ಕೋಟಿಯ (ಒಟ್ಟು ₹ 25 ಕೋಟಿ) ಟೆಂಡರ್ಗಳ ವರ್ಕ್ ಆರ್ಡರ್ ಕೊಡಿಸುವುದಾಗಿ ನಂಬಿಸಿ ಗುತ್ತಿಗೆದಾರನಿಂದ 1.21 ಕೋಟಿ ರೂ. ಪಡೆದು ವಂಚಿಸಿದ ಆರೋಪದಡಿ ರಾಜ್ಯದ ಪ್ರಭಾವಿ ಮಂತ್ರಿಯೊಬ್ಬರ ಅಳಿಯ ಸೇರಿ ಐವರ ವಿರುದ್ಧ ನಗರದ ಸೈಬರ್, ಆರ್ಥಿಕ ಮತ್ತು ಮಾದಕವಸ್ತು ತಡೆ (ಸೆನ್) ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಗುತ್ತಿಗೆದಾರ ನೀಡಿದ ದೂರಿನ ಅನ್ವಯ ಕಲಬುರಗಿಯ ಲಕ್ಷ್ಮಿಕಾಂತ ಕಟ್ಟಿಮನಿ, ರಾಯಚೂರಿನ ಸಂತೋಷ ನಾಯಕ, ಕಿರಣ್, ಬೆಂಗಳೂರಿನ ಶ್ರೀಧರ ಹಾಗೂ ಕೊಪ್ಪಳದ ರವಿ ಮಾಲಿಪಾಟೀಲ ವಿರುದ್ಧ BNS 190, 316(2), 318 (2), 318 (8) ಅಡಿಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
ಪ್ರಭಾವಿ ಮಂತ್ರಿ ಮತ್ತು ಅಳಿಯಿನಿಂದ 25 ಕೋಟಿ ಟೆಂಡರ್ ಗೋಲ್ಮಾಲ್ ಆಗಿದ್ದು, ನಮ್ಮದೇ ಸರ್ಕಾರ ತಾನೇ ಟೆಂಡರ್ ಕೊಡಸ್ತೀನಿ ಅಂತಾ ಹೇಳಿ ಮಹಾವಂಚನೆ ಎಸಗಿದ್ದಾರೆ. ಕಲಬುರಗಿ ಮೂಲದ ಶರಣಬಸಪ್ಪ ಎಂಬ ಗುತ್ತಿಗೆದಾರನಿಗೆ KKRDB ಯಲ್ಲಿ ಉಪಗುತ್ತಿಗೆ ಕೊಡಿಸೋದಾಗಿ ವಂಚಿಸಿದ್ದಾರೆ. ಟೆಂಡರ್ ನಿಮಗೆ ಸಿಗದೇ ಇದ್ದರೆ ಹಣ ವಾಪಸ್ ಕೊಡ್ತೀವಿ ಎಂದು ಮಂತ್ರಿ ಅಳಿಯ ಶ್ರೀಧರ್ ಹೇಳಿದ್ದರು. ಆದರೆ ಇದೀಗ ಹಣ ಕೊಡದೇ ಶ್ರೀಧರ್ ಎಸ್ಕೇಪ್ ಆಗಿದ್ದಾರೆ.

ದೊಡ್ಡ ಅಧಿಕಾರಿಗಳು, ರಾಜಕಾರಣಿಗಳ ಪರಿಚಯವಿದೆ, ಬಹಳಷ್ಟು ಜನರಿಗೆ 50 ಕೋಟಿವರೆಗೆ ಟೆಂಡರ್ ಕೊಡಿಸಿದ್ದೇನೆ. ನಿಮಗೂ ಟೆಂಡರ್ ಕೊಡಿಸುತ್ತೇನೆಂದು ಶ್ರೀಧರನ ಗ್ಯಾಂಗ್ ವಂಚಿಸಿದೆ. ಆರೋಪಿಗಳ ಬೇಡಿಕೆಯಂತೆ ಶರಣಬಸಪ್ಪ 1.21 ಕೋಟಿ ಕೊಟ್ಟಿದ್ದ, ಕಟ್ಟಡ ಸಾಮಗ್ರಿಗಳು ಖರೀದಿಸಿದ್ದಾಗಿ ಬಿಲ್ ತೋರಿಸಿ 2.28 ಲಕ್ಷ ಪಡೆದಿದ್ದರು.
ಕಲಬುರಗಿಯ ಮಿನಿ ವಿಧಾನಸೌಧ ಬಳಿ ಗುತ್ತಿಗೆದಾರ ಶರಣಬಸಪ್ಪ ನಿರ್ಮಲಾದೇವಿ ಸಬ್ ಕನ್ಸ್ಟ್ರಕ್ಷನ್ ಕಂಪನಿಯಿದ್ದು, ಈ ವೇಳೆ ಶರಣಬಸಪ್ಪ ಅವರಿಗೆ ಆರೋಪಿ ಲಕ್ಷ್ಮೀಕಾಂತ ಕಟ್ಟಿಮನಿ ಪರಿಚಯವಾಗಿತ್ತು. ನಂತರ KKRDBಯಲ್ಲಿ ಟೆಂಡರ್ ಕೊಡಿಸುತ್ತೇನೆಂದು ಲಕ್ಷ್ಮೀಕಾಂತ ಹೇಳಿದ್ದ. ನನ್ನ ಸ್ನೇಹಿತ ಶ್ರೀಧರ್ ಸಾಕಷ್ಟು ಜನರಿಗೆ ಟೆಂಡರ್ ಕೊಡಿಸಿದ್ದಾನೆ, ನಿಮಗೂ ಅವನ ಬಳಿ ಹೇಳಿ ಟೆಂಡರ್ ಕೊಡಿಸುತ್ತೆನೆ. ಬೀದರ್, ಜೇವರ್ಗಿ ಭಾಗದಲ್ಲಿ ಟೆಂಡರ್ ಕೊಡಿಸುತ್ತೇನೆಂದಿದ್ದ. ಟೆಂಡರ್ ನಿಮಗೆ ಬೇಕಾದ್ರೆ 5% ನಿಡಲೇಬೇಕೆಂದು ಲಕ್ಷ್ಮೀಕಾಂತ ಕಟ್ಟಿಮನಿ ಒತ್ತಾಯಿಸಿದ್ದ.
ಉಪಗುತ್ತಿಗೆ ಕೊಡಿಸ್ತೀನಿ ಅಂತ ಶ್ರೀಧರ ನೂರಾರು ಜನರಿಗೆ ಮೋಸ ಮಾಡಿ ಕೋಟ್ಯಾಂತರ ರೂಪಾಯಿ ವಂಚಿಸಿದ್ದಾನೆ. ಹಾಗಾದರೆ ಶ್ರೀಧರ ಒಬ್ನೇ ರಾಜಾರೋಷವಾಗಿ ಇಷ್ಟು ವಂಚನೆ ಮಾಡೋಕೆ ಸಾಧ್ಯಾನಾ? ಆ ಮಂತ್ರಿಯ ಕುಮ್ಮಕ್ಕಿನಿಂದಲೇ ಈ ಟೆಂಡರ್ ವಂಚನೆ ನಡೆದಿದೆ ಎನ್ನಲಾಗುತ್ತಿದೆ. ಕಲಬುರಗಿಯಲ್ಲಿ ಕೇಸು ದಾಖಲಾಗ್ತಿದ್ದಂತೆ ಶ್ರೀಧರನನ್ನ ಎಸ್ಕೇಪ್ ಮಾಡಿಸಲಾಗಿದೆ. ಶ್ರೀಧರ ಪರಾರಿಯಾಗೋಕೂ ಆ ಮಂತ್ರಿಯೇ ಕಾರಣವಂತೆ. ಆರೋಪಿ ಶ್ರೀಧರ ತಾನು ಬಿಲ್ಡರ್ ಅಂತ ಹೊರಜಗತ್ತಿಗೆ ತೋರಿಸಿಕೊಂಡಿದ್ದ. ಆದ್ರೆ, ಶ್ರೀಧರ ಯಾವುದೇ ಕೆಲಸ ಕಾರ್ಯ ಮಾಡ್ತಿರ್ಲಿಲ್ಲ. ಶ್ರೀಧರ ಹಾಗೂ ಆ ಮಂತ್ರಿಯನ್ನ ಬಂಧಿಸೋದು ಯಾವಾಗ? ED ಮತ್ತು IT ಅಧಿಕಾರಿಗಳು ಪ್ರಭಾವಿ ಸಚಿವ ಮನೆ ಕದ ತಟ್ಟುತ್ತಾರಾ? EDಯಲ್ಲೂ ಪ್ರಭಾವಿ ಮಂತ್ರಿ ಹಾಗೂ ಅಳಿಯನ ವಿರುದ್ಧ ಕೇಸ್ ಆಗುತ್ತಾ? ಅನ್ನೋ ಪ್ರಶ್ನೆ ಇದೀಗ ಹುಟ್ಟಿಕೊಂಡಿದೆ.
ಇದನ್ನೂ ಓದಿ : ಪ್ಯಾನ್ ಇಂಡಿಯಾ ಮಟ್ಟದಲ್ಲಿ ತೆರೆಗೆ ಬರಲಿದೆ ‘ಸಹ್ಯಾದ್ರಿ’ – ವಿಭಿನ್ನವಾಗಿ ಟೈಟಲ್ ಲಾಂಚ್ ಮಾಡಿದ ಚಿತ್ರತಂಡ!
