ಮಂಗಳೂರು : ಕರಾವಳಿ ಮತ್ತು ಪಶ್ಚಿಮ ಘಟ್ಟ ಪ್ರದೇಶಗಳಲ್ಲಿ ಭಾರೀ ಮಳೆಯಾಗುತ್ತಿರುವ ಕಾರಣ ಪ್ರಸಿದ್ಧ ನಾಗಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯದ ಕುಮಾರಧಾರಾ ಸ್ನಾನ ಘಟ್ಟ ಮುಳುಗಡೆಯಾಗಿದೆ.
ಕುಮಾರಧಾರಾ ನದಿ ತುಂಬಿ ಹರಿಯುತ್ತಿದ್ದು, ಭಕ್ತಾಧಿಗಳಿಗೆ ಸ್ನಾನಘಟ್ಟದ ಬಳಿ ಇಳಿಯದಂತೆ ಸೂಚಿಸಲಾಗಿದೆ. ಭಕ್ತಾಧಿಗಳು ಕೇವಲ ನದಿ ನೀರನ್ನು ತಲೆಗೆ ಚಿಮುಕಿಸಲು ಮಾತ್ರ ಅನುಮತಿ ನೀಡಲಾಗಿದೆ. ದೇವಸ್ಥಾನದ ಆಡಳಿತ ಸ್ನಾನಘಟ್ಟದ ಸುತ್ತ ಹಗ್ಗವನ್ನು ಕಟ್ಟಿ ಹೆಚ್ಚುವರಿ ಸಿಬ್ಬಂದಿ ನೇಮಕ ಮಾಡಿದ್ದು, ಪ್ರಕೃತಿ ವಿಕೋಪ ತಡೆ ಸಿಬ್ಬಂದಿ ನೇಮಕ ಮಾಡುವಂತೆ ಸ್ಥಳೀಯರು ಆಗ್ರಹಿಸಿದ್ದಾರೆ.
ಇಂದು ರೆಡ್ ಅಲರ್ಟ್ : ದಕ್ಷಿಣ ಕನ್ನಡ ಜಿಲ್ಲಾದ್ಯಂತ ಭಾರೀ ಗಾಳಿ ಮಳೆಯಾಗುತ್ತಿದ್ದು, ಇಂದೂ ಕೂಡಾ ರೆಡ್ ಅಲರ್ಟ್ ಜಾರಿಯಾಗಿದೆ. ಬಿಟ್ಟು ಬಿಡದೇ ನಿರಂತರವಾಗಿ ಗುಡುಗು ಸಿಡಿಲು ಸಹಿತ ಭಾರೀ ಗಾಳಿ ಮಳೆ ಸುರಿಯುತ್ತಿದೆ. ಮಳೆ ಅಬ್ಬರದ ಹಿನ್ನೆಲೆಯಲ್ಲಿ ಪುತ್ತೂರಿಗೆ 25 ಮಂದಿಯ ಎನ್ಡಿಆರ್ಎಫ್ ತಂಡ ಆಗಮಿಸಿದೆ. ಭಾರೀ ಗಾಳಿ ಮಳೆ ಹಿನ್ನಲೆ ಅಧಿಕಾರಿಗಳಿಗೆ ಸರ್ವ ಸನ್ನದ್ಧ ಆಗಿರಲು ಸೂಚನೆ ನೀಡಲಾಗಿದೆ.
5 ದಿನಗಳ ಕಾಲ ಜಿಲ್ಲೆಗೆ ರೆಡ್ ಅಲರ್ಟ್ ಜಾರಿಯಾಗಿರುವ ಕಾರಣ ಅಪಾಯದಲ್ಲಿರುವ ಗುಡ್ಡ ಭಾಗದ ನಿವಾಸಿಗಳನ್ನು ಸ್ಥಳಾಂತರ ಮಾಡುವಂತೆ ಆದೇಶಿಸಲಾಗಿದೆ. ಈಗಾಗಲೇ ಸಮುದ್ರಕ್ಕೆ ತೆರಳಿರುವ ಮೀನುಗಾರಿಕಾ ಬೋಟ್ಗಳು ತಕ್ಷಣ ದಡಕ್ಕೆ ಬಂದು ನವಮಂಗಳೂರು ಬಂದರಿನಲ್ಲಿ (NMPA) ಲಂಗರು ಹಾಕಲು ಅನುಮತಿ ನೀಡಲಾಗಿದೆ.
ಇದನ್ನೂ ಓದಿ : ಪ್ಯಾನ್ ಇಂಡಿಯಾ ಮಟ್ಟದಲ್ಲಿ ತೆರೆಗೆ ಬರಲಿದೆ ‘ಸಹ್ಯಾದ್ರಿ’ – ವಿಭಿನ್ನವಾಗಿ ಟೈಟಲ್ ಲಾಂಚ್ ಮಾಡಿದ ಚಿತ್ರತಂಡ!
