ರಾಹುಲ್​​ ಗಾಂಧಿಗೆ ನಿಂದನೆ, ಸುಳ್ಳು ಸುದ್ದಿ ಪ್ರಸಾರ – ರಿಪಬ್ಲಿಕ್ ಟಿವಿ ಪ್ರಧಾನ ಸಂಪಾದಕ ಅರ್ನಬ್ ಗೋಸ್ವಾಮಿ, ಅಮಿತ್ ಮಾಳವೀಯ ವಿರುದ್ದ FIR!

ಬೆಂಗಳೂರು : ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರ ವಿರುದ್ಧ ನಿಂದನೆಯ ಮಾತುಗಳನ್ನಾಡಿ, ಸುಳ್ಳು ಸುದ್ದಿ ಹರಡಿ ಮಾನಹಾನಿ ಮಾಡಿರುವ ಪ್ರಕರಣಕ್ಕೆ ಸಂಬಂಧಿಸಿ ರಿಪಬ್ಲಿಕ್ ಟಿವಿ ಪ್ರಧಾನ ಸಂಪಾದಕ ಅರ್ನಬ್ ಗೋಸ್ವಾಮಿ ಮತ್ತು ಬಿಜೆಪಿ ಐಟಿ ಸೆಲ್‌ನ ಅಮಿತ್ ಮಾಳವೀಯ ವಿರುದ್ಧ ಜಾಮೀನು ರಹಿತ ಸೆಕ್ಷನ್‌ಗಳ ಅಡಿಯಲ್ಲಿ ಬೆಂಗಳೂರಿನಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ.

ಬೆಂಗಳೂರಿನ ಹೈಗ್ರೌಂಡ್ಸ್ ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ಶ್ರೀಕಾಂತ್ ಸ್ವರೂಪ್ ಬಿ. ಎನ್ ಎಂಬವರು ದೂರು ನೀಡಿದ್ದು, ಅದರನ್ವಯ ಪೊಲೀಸರು ಜಾಮೀನು ರಹಿತ ಸೆಕ್ಷನ್‌ಗಳ ಅಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ‘ಟರ್ಕಿಯ ಇಸ್ತಾನ್‌ಬುಲ್ ಕಾಂಗ್ರೆಸ್ ಕೇಂದ್ರವು ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ (INC) ಕಚೇರಿಯಾಗಿದೆ ಎಂಬ “ಹುಸಿ ಹೇಳಿಕೆಯನ್ನು ಆರೋಪಿಗಳು ದುರುದ್ದೇಶಪೂರ್ವಕವಾಗಿ ಪ್ರಚಾರ ಮಾಡಿದ್ದಾರೆ’ ಎಂದು ದೂರುದಾರ ಶ್ರೀಕಾಂತ್ ಅವರು ಆರೋಪಿಸಿದ್ದಾರೆ.

ಹಾಗೆಯೇ ‘ಭಾರತೀಯರನ್ನು ವಂಚಿಸುವ, ಪ್ರಮುಖ ರಾಜಕೀಯ ಸಂಸ್ಥೆಯನ್ನು ದೂಷಿಸುವ, ರಾಷ್ಟ್ರೀಯತಾವಾದಿ ಭಾವನೆಗಳನ್ನು ಕುಶಲತೆಯಿಂದ ನಿರ್ವಹಿಸುವ, ಸಾರ್ವಜನಿಕ ಅಶಾಂತಿಯನ್ನು ಪ್ರಚೋದಿಸುವ ಮತ್ತು ರಾಷ್ಟ್ರೀಯ ಭದ್ರತೆ ಮತ್ತು ಪ್ರಜಾಪ್ರಭುತ್ವದ ಸಮಗ್ರತೆಯನ್ನು ದುರ್ಬಲಗೊಳಿಸುವ ಸ್ಪಷ್ಟ ಮತ್ತು ನಿರಾಕರಿಸಲಾಗದ ಕ್ರಿಮಿನಲ್ ಉದ್ದೇಶದಿಂದ ಈ ಕೃತ್ಯವನ್ನು ಕಾರ್ಯಗತಗೊಳಿಸಲಾಗಿದೆ” ಎಂದು ದೂರಿನಲ್ಲಿ ತಿಳಿಸಿದ್ದಾರೆ.

ಅರ್ನಬ್ ಗೋಸ್ವಾಮಿ ಮತ್ತು ಅಮಿತ್ ಮಾಳವೀಯ ವಿರುದ್ಧ ಎಫ್‌ಐಆರ್ ದಾಖಲಾಗಿರುವ ಬಗ್ಗೆ ಕರ್ನಾಟಕ ಯೂತ್ ಕಾಂಗ್ರೆಸ್ ಎಕ್ಸ್ ಖಾತೆಯಲ್ಲಿ ಎಫ್‌ಐಆರ್ ಪ್ರತಿಯನ್ನು ಪೋಸ್ಟ್ ಮಾಡಿದ್ದು, ‘ಅಮಿತ್ ಮಾಳವೀಯ ಮತ್ತು ಅರ್ನಬ್ ಗೋಸ್ವಾಮಿಗೆ ಸಮಯ ಮುಗಿದಿದೆ’ ಎಂದು ಬರೆದುಕೊಂಡಿದೆ. ಹಾಗೆಯೇ ಕಾಂಗ್ರೆಸ್ ನಾಯಕರ ವಿರುದ್ಧ ಸುಳ್ಳು ಸುದ್ದಿ ಹರಡುವುದು ಮತ್ತು ಅಶಾಂತಿಯನ್ನು ಪ್ರಚೋದಿಸಲು ಕಾರಣರಾದ ಇಬ್ಬರ ವಿರುದ್ಧ ದೂರು ದಾಖಲಾಗಿದೆ. ನಕಲಿ ಸುದ್ದಿಗಳನ್ನು ಹರಡುವ ಎಲ್ಲರಿಗೂ ಇದು ಒಂದು ಎಚ್ಚರಿಕೆಯಾಗಿದೆ. ನಮ್ಮ ನಾಯಕರ ಮಾನಹಾನಿ ಮಾಡುವುದು ಮತ್ತು ಪ್ರಜಾಪ್ರಭುತ್ವದ ಮೇಲೆ ದಾಳಿ ಮಾಡಿದರೆ ಬಲವಾದ ಕಾನೂನು ಮತ್ತು ರಾಜಕೀಯ ಪರಿಣಾಮಗಳಿಗೆ ಕಾರಣವಾಗುತ್ತದೆ ಎಂದು ಟ್ವೀಟ್‌ನಲ್ಲಿ ತಿಳಿಸಲಾಗಿದೆ.

ಇದನ್ನೂ ಓದಿ : ಆರ್​ಸಿಬಿ ಫ್ಯಾನ್ಸ್​ಗೆ ಬ್ಯಾಡ್​ ನ್ಯೂಸ್​ – SRH ವಿರುದ್ಧದ ಪಂದ್ಯ ಚಿನ್ನಸ್ವಾಮಿಯಿಂದ ಲಕ್ನೋಗೆ ಶಿಫ್ಟ್!

 

Btv Kannada
Author: Btv Kannada

Read More