ಬೆಂಗಳೂರು : ರಾಜ್ಯ ಪೊಲೀಸ್ ಇತಿಹಾಸದಲ್ಲಿಯೇ ಮೊದಲ ಬಾರಿಗೆ ನಿವೃತ್ತಿಯ ನಂತರವು ಸುಪ್ರೀಂ ಕೋರ್ಟ್ ಆದೇಶದ ಅನ್ವಯ 21 ದಿನಗಳ ಸೇವಾ ಅವಧಿ ವಿಸ್ತರಣೆ ಮಾಡಿಸಿಕೊಡಿಸಿಕೊಂಡಿದ್ದ ರಾಜ್ಯ ಪೊಲೀಸ್ ಮಹಾನಿರ್ದೇಶಕ (DG-IGP) ಡಾ. ಅಲೋಕ್ ಮೋಹನ್ ಅವರು ನಾಳೆ ನಿವೃತ್ತರಾಗಲಿದ್ದಾರೆ. ಹೀಗಾಗಿ ರಾಜ್ಯ ಸರ್ಕಾರ ಇಂದೇ ಕರ್ನಾಟಕದ ನೂತನ ಡಿಜಿ-ಐಜಿಪಿ ನೇಮಕ ಮಾಡಿ ಆದೇಶ ಹೊರಡಿಸುವ ಸಾಧ್ಯತೆಯಿದೆ.

ಈ ಹಿನ್ನೆಲೆ ರಾಜ್ಯ ಸರ್ಕಾರ ಪೊಲೀಸ್ ಇಲಾಖೆಯ ಮುಂದಿನ ದಂಡನಾಯಕನ ಸ್ಥಾನಕ್ಕೆ ಯಾರನ್ನು ಪ್ರತಿಷ್ಠಾಪಿಸಲಿದೆ ಎಂಬ ಕುತೂಹಲ ಗರಿಗೆದರಿದೆ. ಡಾ. ಅಲೋಕ್ ಮೋಹನ್ ನಿವೃತ್ತಿಯಿಂದ ನೂತನ ಡಿಜಿ-ಐಜಿಪಿ ಸ್ಥಾನಕ್ಕೆ ಸೇವಾ ಹಿರಿತನದ ಆಧಾರದಲ್ಲಿ ಅಗ್ನಿಶಾಮಕ ದಳ ಹಾಗೂ ತುರ್ತು ಸೇವೆಗಳ ಇಲಾಖೆ ಡಿಜಿಪಿ ಪ್ರಶಾಂತ್ ಕುಮಾರ್ ಠಾಕೂರ್ ಹಾಗೂ ಸಿಐಡಿ ಡಿಜಿಪಿ ಡಾ.ಎಂ.ಎ. ಸಲೀಂ ಅವರ ಹೆಸರುಗಳು ಮುಂಚೂಣಿಯಲ್ಲಿವೆ.
ರಾಜ್ಯ ಸರ್ಕಾರ ಡಿಜಿ-ಐಜಿಪಿ ಸ್ಥಾನ ನೇಮಕ ಶಿಫಾರಸು ಸಂಬಂಧ ಕಳಿಸಿದ್ದ ಆರು ಮಂದಿ ಹಿರಿಯ ಐಪಿಎಸ್ ಅಧಿಕಾರಿಗಳ ಪಟ್ಟಿ ಪೈಕಿ ಪ್ರಶಾಂತ್ ಕುಮಾರ್ ಠಾಕೂರ್, ಡಾ.ಎಂ.ಎ. ಸಲೀಂ ಸೇರಿದಂತೆ ಮೂವರ ಹೆಸರನ್ನು ಅಂತಿಮಗೊಳಿಸಿ ವಾಪಸ್ ಕಳಿಸಿತ್ತು. ಈ ಬೆನ್ನಲ್ಲೇ ಡಿಜಿ-ಐಜಿಪಿ ಸ್ಥಾನಕ್ಕೆ ಅಧಿಕಾರಿಗಳು ಕಸರತ್ತು ಆರಂಭಿಸಿದ್ದರು. ಮಾಹಿತಿಗಳ ಪ್ರಕಾರ ರಾಜ್ಯ ಸರ್ಕಾರ ಕನ್ನಡಿಗ, ಸಿಐಡಿ ಡಿಜಿಪಿ ಡಾ.ಎಂ.ಎ. ಸಲೀಂ ಅವರನ್ನು ಡಿಜಿ-ಐಜಿಪಿ ಸ್ಥಾನಕ್ಕೆ ನೇಮಿಸುವ ಬಗ್ಗೆ ಒಲವು ತೋರಿದೆ ಎಂದು ಹೇಳಲಾಗುತ್ತಿದೆ.

ಆದರೆ, ಡಾ.ಎಂ.ಎ. ಸಲೀಂ ಅವರಿಗಿಂತ ಒಂದು ವರ್ಷ ಸೇವಾ ಹಿರಿತನ ಹೊಂದಿರುವ ಪ್ರಶಾಂತ್ ಕುಮಾರ್ ಠಾಕೂರ್ ಅವರನ್ನು ಬದಿಗೊತ್ತಿ ನಿರ್ಧಾರ ಕೈಗೊಂಡರೆ ಕಾನೂನು ಸಂಘರ್ಷಕ್ಕೆ ಸಿಲುಕುವ ತೊಂದರೆ ಬಗ್ಗೆಯೂ ರಾಜ್ಯ ಕಾಂಗ್ರೆಸ್ ಸರ್ಕಾರ ಆಲೋಚಿಸುತ್ತಿದೆ ಎಂದು ಮೂಲಗಳು ಹೇಳಿವೆ.

ಡಾ.ಎಂ.ಎ. ಸಲೀಂ ನೇಮಕಕ್ಕೆ ಸುಪ್ರೀಂ ಆದೇಶ ತೊಡಕು : ಡಿಜಿ-ಐಜಿಪಿ ಡಾ. ಎಂ.ಎ.ಸಲೀಂ ಅವರನ್ನು ನೇಮಕ ಮಾಡಲು ಸುಪ್ರೀಂಕೋರ್ಟ್ ಆದೇಶ ತೊಡಕಾಗಿದೆ. ಡಿಜಿ-ಐಜಿಪಿ ಹುದ್ದೆಗೆ ನೇಮಕವಾಗುವ ಅಧಿಕಾರಿಯ ಸೇವಾವಧಿಯು 2 ವರ್ಷಗಳ ಇರಬೇಕಾಗುತ್ತದೆ. ಆದ್ರೆ ಸಲೀಂ ಅವರ ಸೇವಾವಧಿ ಒಂದು ವರ್ಷ ಮಾತ್ರವಿದೆ. ಇದರಿಂದ ಸಲೀಂ ಅವರನ್ನು ಡಿಜಿ-ಐಜಿಪಿ ಹುದ್ದೆಗೆ ನೇಮಕ ಮಾಡಿದರೆ, ಸೇವಾ ಹಿರಿತನದಲ್ಲಿ ಮೊದಲನೇಯವರಾದ ಸೇವಾವಧಿ ಇನ್ನೂ ಎರಡು ವರ್ಷಗಳಿರುವ ಪ್ರಶಾಂತ್ ಕುಮಾರ್ ಠಾಕೂರ್ ಕಾನೂನು ಮೊರೆ ಹೋದರೆ ರಾಜ್ಯ ಸರ್ಕಾರಕ್ಕೆ ಹಿನ್ನಡೆಯಾಗಬಹುದು.
ಈ ನಿಟ್ಟಿನಲ್ಲಿ ಮೇ 21ರಷ್ಟರಲ್ಲಿ ಪ್ರಶಾಂತ್ ಕುಮಾರ್ ಠಾಕೂರ್ ಹಾಗೂ ಡಾ.ಎಂ.ಎ. ಸಲೀಂ ಅವರ ಪೈಕಿ ಯಾರಿಗೆ ಡಿಜಿ-ಐಜಿಪಿ ಹುದ್ದೆಯನ್ನು ಸರ್ಕಾರ ಯಾರಿಗೆ ನೀಡಲಿದೆ ಎಂಬುದು ರಾಜ್ಯ ಪೊಲೀಸ್ ಇಲಾಖೆಯಲ್ಲಿ ವ್ಯಾಪಕ ಚರ್ಚೆಗೆ ಗ್ರಾಸವಾಗಿದೆ.
ಇದನ್ನೂ ಓದಿ : ಕಿರೀಟಿ ಚೊಚ್ಚಲ ಚಿತ್ರದ ಸಾಂಗ್ ರಿಲೀಸ್ – ಜು.18ಕ್ಕೆ ‘ಜೂನಿಯರ್’ ತೆರೆಗೆ!
