ಸಾಂಸ್ಕೃತಿಕ ನಗರಿಯಲ್ಲಿ ಅದ್ಧೂರಿಯಾಗಿ ಬಿಡುಗಡೆಯಾಯಿತು S/O ಮುತ್ತಣ್ಣ ಚಿತ್ರದ “ಕಮ್ಮಂಗಿ ನನ್ ಮಗನೇ” ಹಾಡು!

ಪ್ರಣಂ ದೇವರಾಜ್ ನಾಯಕನಾಗಿ ನಟಿಸಿರುವ “S/O ಮುತ್ತಣ್ಣ” ಚಿತ್ರ ಆರಂಭದಿಂದಲೂ ಸಾಕಷ್ಟು ಸದ್ದು ಮಾಡುತ್ತಿದೆ. ಪುರಾತನ ಫಿಲಂಸ್ ನಿರ್ಮಾಣದ, ಶ್ರೀಕಾಂತ್ ಹುಣಸೂರು ನಿರ್ದೇಶಿಸಿರುವ ಈ ಚಿತ್ರಕ್ಕಾಗಿ ಗೀತರಚನೆಕಾರ ಯೋಗರಾಜ್ ಭಟ್ ಬರೆದಿರುವ “ಕಮ್ಮಂಗಿ ನನ್ ಮಗನೇ” ಎಂಬ ಹಾಡು ಬಿಡುಗಡೆ ಕಾರ್ಯಕ್ರಮ ಇತ್ತೀಚೆಗೆ ಮಾಲ್ ಆಫ್ ಮೈಸೂರಿನಲ್ಲಿ ಸಾವಿರಾರು ಜನರ ಸಮ್ಮುಖದಲ್ಲಿ‌ ಅದ್ದೂರಿಯಾಗಿ ನೆರವೇರಿತು. ಖ್ಯಾತ ನಟ ಶರಣ್ ಹಾಗೂ ಹೆಸರಾಂತ ಸಂಗೀತ ನಿರ್ದೇಶಕ ವಿ.ಹರಿಕೃಷ್ಣ ಈ ಹಾಡನ್ನು ಅದ್ಭುತವಾಗಿ ಹಾಡಿದ್ದಾರೆ. ನಟ ಶರಣ್ ಹಾಗೂ ನಿರ್ದೇಶಕ ಪವನ್ ಒಡೆಯರ್ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದರು.

ನಟ ಹಾಗೂ ಗಾಯಕ ಶರಣ್ ಅವರು, ನಾನು ಹುಟ್ಟಿದ್ದು ಯಾದಗಿರಿಯಲ್ಲಿ, ಬೆಳೆದಿದ್ದು ಹುಬ್ಬಳ್ಳಿಯಲ್ಲಿ. ಈಗ ಇರುವುದು ಬೆಂಗಳೂರಿನಲ್ಲಿ ಈ ಊರುಗಳು ಬಿಟ್ಟರೆ ಹೆಚ್ಚು ಪ್ರೀತಿಸುವುದು ಮೈಸೂರನ್ನು. ಅಂತಹ ನನ್ನ ನೆಚ್ಚಿನ ಊರಿನಲ್ಲಿ ನಾನು ಹಾಡಿರುವ ಹಾಡಿನ ಬಿಡುಗಡೆಯಾಗಿದ್ದು ಖುಷಿಯಾಗಿದೆ. ಯೋಗರಾಜ್ ಭಟ್ ಅವರು‌ ಬರೆದಿರುವ ಈ ಹಾಡಿಗೆ ವಿ.ಹರಿಕೃಷ್ಣ ಅವರು ಸಹ ಧ್ವನಿಯಾಗಿರುವುದು ಖುಷಿಯಾಗಿದೆ. ಸಚಿನ್ ಬಸ್ರೂರ್ ಸಂಗೀತ ಕೂಡ ಸೊಗಸಾಗಿದೆ‌. ಪುರಾತನ ಫಿಲಂಸ್ ನಿರ್ಮಾಣದಲ್ಲಿ, ಶ್ರೀಕಾಂತ್ ಹುಣಸೂರ್ ನಿರ್ದೇಶನದಲ್ಲಿ ಹಾಗೂ ಪ್ರಣಂ ದೇವರಾಜ್ ಮತ್ತು ರಂಗಾಯಣ ರಘು ಅವರ ಕಾಂಬಿನೇಶನ್​ನಲ್ಲಿ ಮೂಡಿಬಂದಿರುವ ಈ ಚಿತ್ರ ಭರ್ಜರಿ ಯಶಸ್ಸು ಕಾಣಲಿ ಎಂದು ಹಾರೈಸಿದರು.

ನಮ್ಮ ಚಿತ್ರದ ಚಿತ್ರೀಕರಣ ಮೈಸೂರಿನಲ್ಲೇ ಆಗಬೇಕಿತ್ತು. ಅದು ಆಗಲಿಲ್ಲ. ಆದರೆ ನಮ್ಮಿಷ್ಟದ ಮೈಸೂರು ನಮ್ಮನ್ನು ಬಿಡುವುದಿಲ್ಲ. ನಮ್ಮ ಚಿತ್ರದ ಮೊದಲ ಹಾಡು ಮೈಸೂರಿನಲ್ಲೇ ಬಿಡುಗಡೆಯಾಗಿದೆ. ಯೋಗರಾಜ್ ಭಟ್ ಅವರ ಸಾಹಿತ್ಯ, ಶರಣ್ ಹಾಗೂ ಹರಿಕೃಷ್ಣ ಅವರ ಗಾಯನ ಅದ್ಭುತವಾಗಿದೆ. ನಿಮ್ಮೆಲ್ಲರ ಪ್ರೋತ್ಸಾಹ ಸದಾ ಇರಲಿ ಎಂದು ನಾಯಕ ನಟ ಪ್ರಣಂ ದೇವರಾಜ್ ಹೇಳಿದರು.

ನಾನು ಹುಟ್ಟಿ ಬೆಳೆದಿದ್ದು ಮೈಸೂರಿನಲ್ಲಿ. ನನ್ನೂರಿನಲ್ಲಿ ನನ್ನ ನಿರ್ದೇಶನದ ಚಿತ್ರದ ಮೊದಲ ಹಾಡು ಬಿಡುಗಡೆಯಾಗಿದ್ದು ಸಂತಸ ತಂದಿದೆ ಎಂದು ನಿರ್ದೇಶಕ ಶ್ರೀಕಾಂತ್ ಹುಣಸೂರು ತಿಳಿಸಿದರು.

ಮೈಸೂರಿಗೂ ಕನ್ನಡ ಚಿತ್ರರಂಗಕ್ಕೆ ಅವಿನಾಭಾವ ಸಂಬಂಧವಿದೆ. ಅಂತಹ ಈ ಊರಿನಲ್ಲಿ “S\O ದೇವಣ್ಣ” ಅವರ ಪುತ್ರ ಪ್ರಣಂ ದೇವರಾಜ್ ಅಭಿನಯದ “S\O ಮುತ್ತಣ್ಣ” ಚಿತ್ರದ ಹಾಡು ಬಿಡುಗಡೆಯಾಗಿದೆ. ಹಾಡು ಚೆನ್ನಾಗಿದೆ, ನಾನು ಹಾಗೂ ಪ್ರಣಂ ಈ ಚಿತ್ರದಲ್ಲಿ ಅಪ್ಪ – ಮಗನಾಗಿ ನಟಿಸಿದ್ದೇವೆ ಎಂದು ನಟ ರಂಗಾಯಣ ರಘು ಹೇಳಿದರು.

ಸಂಗೀತ ನಿರ್ದೇಶಕ ಸಚಿನ್ ಬಸ್ರೂರ್ ಹಾಗೂ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ನಿರ್ದೇಶಕ ಪವನ್ ಒಡೆಯರ್ ಮುಂತಾದವರು “S/O ಮುತ್ತಣ್ಣ” ಚಿತ್ರದ ಬಗ್ಗೆ ಮಾಹಿತಿ ಹಂಚಿಕೊಂಡರು.

ಈ ಚಿತ್ರವನ್ನು ಪುರಾತನ ಫಿಲಂಸ್ ನಿರ್ಮಾಣ ಮಾಡಿರುತ್ತಾರೆ ಇವರಿಗೆ ಎಸ್ ಆರ್ ಕೆ ಫಿಲಂಸ್ ಸಾಥ್ ನೀಡಿದೆ‌. ಪ್ರಣಂ ದೇವರಾಜ್ ಅವರಿಗೆ ನಾಯಕಿಯಾಗಿ “ದಿಯಾ” ಖ್ಯಾತಿಯ ಖುಷಿ ರವಿ ಅಭಿನಯಿಸಿದ್ದಾರೆ. ರಂಗಾಯಣ ರಘು ನಾಯಕನ ತಂದೆಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಸುಚೇಂದ್ರ ಪ್ರಸಾದ್‌, ಗಿರೀಶ್‌ ಶಿವಣ್ಣ, ತಬಲ ನಾಣಿ, ಶ್ರೀನಿವಾಸ್‌ ಪ್ರಭು, ಸುಧಾ ಬೆಳವಾಡಿ, ಅರುಣ್‌ ಚಕ್ರವರ್ತಿ, ಸಂದೀಪ ಎಂ ಮುಂತಾದವರು ತಾರಾಬಳಗದಲ್ಲಿದ್ದಾರೆ. ಸಚಿನ್ ಬಸ್ರೂರು ಸಂಗೀತವಿರುವ ‘s/o ಮುತ್ತಣ್ಣ’ ಸಿನಿಮಾದ ಹಾಡುಗಳನ್ನು ಯೋಗರಾಜ್ ಭಟ್, ಜಯಂತ್ ಕಾಯ್ಕಿಣಿ, ಪ್ರಮೋದ್ ಮರವಂತೆ ಬರೆದಿದ್ದಾರೆ. ಸ್ಕೇಟಿಂಗ್ ಕೃಷ್ಣ ಛಾಯಾಗ್ರಹಣ ಹಾಗೂ ಹರೀಶ್ ಕೊಮ್ಮೆ ಅವರ ಸಂಕಲನ ಬಹುನಿರೀಕ್ಷಿತ ಈ ಚಿತ್ರಕ್ಕಿದೆ.

ಇದನ್ನೂ ಓದಿ : ಕೌಟುಂಬಿಕ ಕಥಾನಕ “ಸರಳ ಸುಬ್ಬರಾವ್” ಚಿತ್ರದ ಸಾಂಗ್ ರಿಲೀಸ್!

Btv Kannada
Author: Btv Kannada

Read More