ಯು ಟರ್ನ್ 2 ಖ್ಯಾತಿಯ ಚಂದ್ರು ಓಬಯ್ಯ ಅವರೀಗ ಒಂದರ ಮೇಲೊಂದರಂತೆ ಸಿನಿಮಾಗಳನ್ನು ಆರಂಭಿಸಿದ್ದಾರೆ. ಕೆಲವೊಂದು ಸಿನಿಮಾ ಬಿಡುಗಡೆ ಹಂತಕ್ಕೂ ತಲುಪಿದ್ದು, ಅದರಲ್ಲಿ ಕರಿಮಣಿ ಮಾಲಿಕ ನೀನಲ್ಲ ಕೂಡ ಒಂದು. ಈಗಾಗಲೇ ತನ್ನ ಶೂಟಿಂಗ್ ಮುಗಿಸಿರುವ ಚಿತ್ರವೀಗ ಪೋಸ್ಟ್ ಪ್ರೊಡಕ್ಷನ್ ಕೊನೇ ಹಂತದಲ್ಲಿದೆ. ಚಂದ್ರು ಓಬಯ್ಯ ಅವರೇ ಕಥೆ, ಚಿತ್ರಕಥೆ ಬರೆದು ನಿರ್ದೇಶನದ ಜೊತೆಗೆ ನಿರ್ಮಾಣದ ಜವಾಬ್ದಾರಿಯನ್ನೂ ಸಹ ಚಂದ್ರು ಓಬಯ್ಯ ಹೊತ್ತಿದ್ದಾರೆ. ಚಿತ್ರದ ಸಹ ನಿರ್ಮಾಪಕರಾಗಿ ಅನ್ನಪೂರ್ಣ ಶಂಕ್ರಯ್ಯ ಕೈಜೋಡಿಸಿದ್ದಾರೆ.
ಬಿಎಂಟಿಸಿಯಲ್ಲಿ ಕೆಲಸ ಮಾಡುತ್ತಿರುವ ಮಾರುತಿ ಬಿ.ಎಂ.ಟಿ.ಸಿ, ಅವರು ಈ ಚಿತ್ರದ ನಾಯಕನಾಗಿದ್ದು, ರಮಿಕ ಸುತಾರ ನಾಯಕಿಯ ಪಾತ್ರ ನಿರ್ವಹಿಸಿದ್ದಾರೆ. ಮತ್ತೊಂದು ಪ್ರಮುಖ ಪಾತ್ರದಲ್ಲಿ ಕಾಕ್ರೋಚ್ ಸುಧಿ ಕಾಣಿಸಿಕೊಂಡಿದ್ದಾರೆ. ಚಿತ್ರದ ಟೀಸರನ್ನು ನಿರ್ದೇಶಕ ಪಲ್ಲಕ್ಕಿ ರಾಧಾಕೃಷ್ಣ ಹಾಗೂ ಅಂಜಿನಪ್ಪ ಸೇರಿ ಬಿಡುಗಡೆ ಮಾಡಿದರು. ಮುಖ್ಯ ಅತಿಥಿಗಳಾಗಿ ಟಿ.ಎನ್.ನಾಗೇಶ್, ಶ್ರೀನಿವಾಸ್ ಭಾಗವಹಿಸಿದ್ದರು.
ಚಂದ್ರು ಓಬಯ್ಯ ಅವರು, ಕರಿಮಣಿ ಮಾಲಿಕ ನೀನಲ್ಲ ನನ್ನ ನಿರ್ದೇಶನದ 9ನೇ ಚಿತ್ರ. ಇದು ಬೆಂಗಳೂರಿನಲ್ಲೇ ನಡೆದಂಥ ನೈಜಘಟನೆ ಆಧಾರಿತ ಚಿತ್ರ. ಎಳನೀರು ಮಾರೋ ಹುಡುಗ, ಹೂ ಮಾರೋ ಹುಡುಗಿಯ ನಡುವೆ ನಡೆಯೋ ವಿಭಿನ್ನ ಪ್ರೇಮಕಥೆ ಇದಾಗಿದ್ದು, ಇವರಿಬ್ಬರ ನಡುವೆ ಮತ್ತೊಬ್ಬನ ಎಂಟ್ರಿ ಆಗುತ್ತೆ. ಇಲ್ಲಿ ನಾಯಕಿಯ ಕರಿಮಣಿ ಮಾಲೀಕ ಯಾರಾಗ್ತಾರೆ ಅನ್ನೋದೇ ಚಿತ್ರದ ಕುತೂಹಲ. ನಾನು ರೆಡಿ ಮಾಡಿಕೊಂಡಿದ್ದ ಕಥೆಗೆ ಇದೇ ಟೈಟಲ್ ಸೂಕ್ತ ಎನಿಸಿ ಈ ಶೀರ್ಷಿಕೆ ಇಟ್ಟಿದ್ದೇನೆ. ಬೆಂಗಳೂರು ಸುತ್ತಮುತ್ತ 35ಕ್ಕೂ ಹೆಚ್ಚು ದಿನಗಳ ಕಾಲ ನಮ್ಮ ಚಿತ್ರದ ಶೂಟಿಂಗ್ ನಡೆಸಿದ್ದೇವೆ, ಚಿತ್ರದ ಟೈಟಲ್ ಹಾಡನ್ನು ಪಾವಗಡದ ಬಳಿಯಿರೋ ನಿಡಗಲ್ ಬೆಟ್ಟದಲ್ಲಿ ಶೂಟ್ ಮಾಡಿದ್ದೇವೆ. ಕರಿಮಣಿ ಮಾಲಿಕ ನೀನಲ್ಲ ಚಿತ್ರದಲ್ಲಿ 3 ಹಾಡುಗಳಿದ್ದು, ಟೈಟಲ್ ಸಾಂಗ್ ಅಲ್ಲದೆ 2 ಮೆಲೋಡಿ ಸಾಂಗ್ ಚಿತ್ರದಲ್ಲಿದೆ, ಚಿತ್ರದ ಮ್ಯೂಸಿಕ್ ನಾನೇ ಮಾಡಿದ್ದೇನೆ ಎಂದು ಹೇಳಿದರು.
ಚಿತ್ರದ ನಾಯಕನಟ ಮಾರುತಿ ಬಿಎಂಟಿಸಿ ಅವರು, ಸದ್ಯ ನಾನೀಗ ಬಿಎಂಟಿಸಿಯಲ್ಲಿ ಕೆಲಸ ಮಾಡುತ್ತಿದ್ದೇನೆ, ಬ್ಯಾಡಗಿ ತಾಲ್ಲೂಕು ಕಾಗಿನೆಲೆಯಲ್ಲಿ ವಿದ್ಯಾಭ್ಯಾಸ ಮಾಡಿದೆ, ವಿದ್ಯಾಭ್ಯಾಸದ ದಿನಗಳಲ್ಲಿ ಅನೇಕ ನಾಟಕಗಳನ್ನು ಮಾಡುತ್ತಿದ್ದೆ, ಚಲನಚಿತ್ರ ಕಲಾವಿದನಾಗಬೇಕೆನ್ನುವುದು ನನ್ನ ಬಹುದಿನಗಳ ಕನಸು. ಅದಕ್ಕಾಗಿಯೇ ಸೃಷ್ಠಿ ಅಕಾಡೆಮಿಯಲ್ಲಿ ಅಭಿನಯ ಕಲಿತೆ. ಈ ಚಿತ್ರದಲ್ಲಿ ಎಳನೀರು ಮಾರೋ ಹುಡುಗನಾಗಿ ನಟಿಸಿದ್ದೇನೆ ಎಂದು ಹೇಳಿದರು.
ನಾಯಕಿಯ ಪಾತ್ರದಲ್ಲಿ ಕಾಣಿಸಿಕೊಂಡಿರುವ ರಮಿಕಾ ಸುತಾರ ಮಾತನಾಡಿ, ನಾನು ಮೂಲತ: ಗುಲ್ಬರ್ಗದವಳು. ಸಿನಿಮಾ ಬಗ್ಗೆ ಮೊದಲಿಂದಲೂ ಆಸಕ್ತಿಯಿತ್ತು. ಆಕ್ಟಿಂಗ್ ಕ್ಲಾಸ್ ಹೋಗಿದ್ದೇನೆ. ಈ ಚಿತ್ರದಲ್ಲಿ ಒಬ್ಬ ಹೂಮಾರುವ ಹುಡುಗಿಯಾಗಿ ನಟಿಸಿದ್ದೇನೆ. ಸ್ವಲ್ಪ ಬಜಾರಿ ಥರದ ಪಾತ್ರ, ಆಡಿಷನ್ನಲ್ಲಿ ಸೆಲೆಕ್ಟ್ ಆಗಿ ಈ ಚಿತ್ರದಲ್ಲಿ ನಟಿಸಿದ್ದೇನೆ ಎಂದು ಹೇಳಿದರು.
ಚಿತ್ರದ ಮತ್ತೊಬ್ಬ ನಾಯಕ ಕಾಕ್ರೋಚ್ ಸುಧೀ ಅವರು, ನಾಯಕ ನಾಯಕಿ ಕಥೆಯಲ್ಲಿ ಬರೋ ಮತ್ತೊಬ್ಬ ವ್ಯಕ್ತಿಯ ಪಾತ್ರವನ್ನು ನಾನು ಮಾಡಿದ್ದೇನೆ, ಮಾರುತಿ ಅವರು ತುಂಬಾ ಕನಸಿಟ್ಟುಕೊಂಡು ಸಿನಿಮಾಗೆ ಬಂದಿದ್ದಾರೆ. ನೀನಲ್ಲ, ನೀನೇ ನಲ್ಲ ಅಂತ ನಾಯಕಿ ಯಾರ್ಯಾರಿಗೆ ಹೇಳ್ತಾಳೆ ಅನ್ನೋದೇ ಚಿತ್ರದ ಕಥೆ ಎಂದರು. ಮತ್ತೊಬ್ಬ ನಟಿ ಮೀನಾಕುಮಾರಿ ಮಾತನಾಡಿ, ನಾನು ಈಗಾಗಲೇ 30ಕ್ಕೂ ಹೆಚ್ಚು ಚಿತ್ರಗಳಲ್ಲಿ ಅಭಿನಯಿಸಿ. ಈ ಹಿಂದೆ ಚಂದ್ರು ಅವರ ಚಿತ್ರದಲ್ಲಿ ಅಭಿನಯಿಸಿದ್ದೇನೆ ಇದರಲ್ಲಿ ನಾಯಕಿಯ ತಾಯಿಯ ಪಾತ್ರ ಮಾಡಿದ್ದೇನೆ ಎಂದರು. ಚಿತ್ರದ ಉಳಿದ ತಾರಾಗಣದಲ್ಲಿ ಮೂಗು ಸುರೇಶ್, ರೇಖಾದಾಸ್ ಮುಂತಾದವರಿದ್ದಾರೆ.
ಇದನ್ನೂ ಓದಿ : ಸಾಧನಾ ಸಮಾವೇಶಕ್ಕೆ ಭರದ ಸಿದ್ದತೆ.. 2 ಲಕ್ಷ ಜನ ಸೇರುವ ನಿರೀಕ್ಷೆ : ಸಚಿವ ಜಮೀರ್ ಅಹಮದ್!
