ನವದೆಹಲಿ : ಪಾಕಿಸ್ತಾನದಲ್ಲಿ ಅಡಗಿರುವ ಉಗ್ರರ ವಿರುದ್ಧದ ಭಾರತ ಬೃಹತ್ ಸೇನಾ ಕಾರ್ಯಾಚರಣೆ ನಡೆಸಿದ ಬಳಿಕ ಇದೇ ಮೊದಲ ಬಾರಿಗೆ ಯೋಧರನ್ನುದ್ದೇಶಿಸಿ ಮಾತನಾಡಿರುವ ಪ್ರಧಾನಿ ನರೇಂದ್ರ ಮೋದಿ, ‘ಆಪರೇಷನ್ ಸಿಂಧೂರ’ದ ಮೂಲಕ ಪಾಕಿಸ್ತಾನದ ಪಾಲಿಗೆ ಲಕ್ಷ್ಮಣ ರೇಖೆ ಎಳೆಯಲಾಗಿದೆ’ ಎಂದು ಹೇಳಿದ್ದಾರೆ. ಈ ಮೂಲಕ, ಭಾರತದ ಗಡಿ ದಾಟುವ ದುಸ್ಸಾಹಸಕ್ಕೆ ಕೈ ಹಾಕಿದರೆ ಸರ್ವನಾಶ ಖಚಿತ ಎಂದು ಪಾಕ್ಗೆ ಮೋದಿ ಪರೋಕ್ಷವಾಗಿ ಎಚ್ಚರಿಸಿದ್ದಾರೆ.
ಪಂಜಾಬ್ನ ಅದಂಪುರದ ವಾಯುನೆಲೆಯಲ್ಲಿ, ಭಾರತದ ಬಲಿಷ್ಠ ವಾಯು ರಕ್ಷಣಾ ವ್ಯವಸ್ಥೆಯಾದ ರಷ್ಯಾ ನಿರ್ಮಿತ ಎಸ್-400 ಮತ್ತು ಮಿಗ್-29 ಮುಂದೆ ನಿಂತು ಸೈನಿಕರನ್ನು ಉದ್ದೇಶಿಸಿ ಮಾತನಾಡಿದ ಮೋದಿ, ನೀವು ಮಾಡಿರುವ ಕೆಲಸ ಅಭೂತಪೂರ್ವ, ಅಕಲ್ಪನೀಯ ಮತ್ತು ಅದ್ಭುತ. ನಮ್ಮ ಸೇನೆ ಪೊಳ್ಳು ಅಣುಬೆದರಿಕೆಗೆ ತಕ್ಕ ಉತ್ತರ ನೀಡಿದಾಗ, ವೈರಿಗಳಿಗೆ ಭಾರತ ಮಾತಾ ಕಿ ಜೈ ಘೋಷಣೆಯ ಮಹತ್ವ ಅರಿವಾಗಿದೆ. ಇದು ಕೇವಲ ಘೋಷಣೆಯಲ್ಲ. ನಮ್ಮ ಸೈನಿಕರು ದೇಶಕ್ಕಾಗಿ ತಮ್ಮ ಪ್ರಾಣ ಮುಡಿಪಾಗಿಡುವ ಪ್ರತಿಜ್ಞೆ ಮಾಡಿದ್ದಾರೆ. ನಮ್ಮ ಡ್ರೋನ್ ಮತ್ತು ಕ್ಷಿಪಣಿಗಳು ವೈರಿಯ ಆಯುಧಗಳನ್ನು ಹೊಡೆದಾಗಲೂ ಇದೇ ಘೋಷಣೆ ಕೇಳುತ್ತಿತ್ತು ಎಂದರು.
ಇದೇ ವೇಳೆ ಸೈನಿಕರನ್ನು ಪ್ರಶಂಸಿಸಿರುವ ಮೋದಿ, ‘ನಿಮ್ಮ ಶೌರ್ಯದ ಕಥೆಗಳು ಇತಿಹಾಸದಲ್ಲಿ ಶಾಶ್ವತವಾಗಿ ಕೆತ್ತಲ್ಪಡುತ್ತವೆ. ನಮ್ಮ ಭೂಸೇನೆ, ವಾಯುಪಡೆ ಮತ್ತು ನೌಕಾಪಡೆಯ ಸಿಬ್ಬಂದಿಗೆ ವಂದಿಸುತ್ತೇನೆ. ನಾವು ಕೇವಲ ಉಗ್ರನೆಲೆಗಳನ್ನಷ್ಟೇ ಅಲ್ಲ, ಪಾಕಿಸ್ತಾನದ ಧೈರ್ಯವನ್ನೇ ನಾಶ ಮಾಡಿದ್ದೇವೆ. ಭಾರತದ ಮೇಲೆ ಕೆಟ್ಟ ದೃಷ್ಟಿ ನೆಟ್ಟರೆ ನಾಶವಾಗುತ್ತೇವೆ ಎಂಬುದು ಉಗ್ರ ಪೋಷಕರಿಗೆ ಅರಿವಾಗಿದೆ. ಇನ್ನವರು ಕೆಲದ ದಿನ ನೆಮ್ಮದಿಯಿಂದ ಮಲಗಲೂ ಆಗದು’ ಎಂದು ಹೇಳಿದ್ದಾರೆ. ಅಂತೆಯೇ, ‘ನಾವು ಉಗ್ರರಿಗೆ ತಪ್ಪಿಸಿಕೊಳ್ಳಲು ಅವಕಾಶ ಕೊಡುವುದಿಲ್ಲ. ಮನೆಯೊಳಗೆ ನುಗ್ಗಿ ಹೊಡೆಯುತ್ತೇವೆ’ ಎಂಬ ಸ್ಪಷ್ಟ ಸಂದೇಶವನ್ನೂ ನೀಡಿದ್ದಾರೆ.
ಇದನ್ನೂ ಓದಿ : ವಾಹನ ತಪಾಸಣೆ ನಡೆಸುತ್ತಿದ್ದ ಪೊಲೀಸ್ ಮೇಲೆ ಲಾರಿ ಹತ್ತಿಸಿದ ಚಾಲಕ – ಕಾನ್ಸ್ಟೇಬಲ್ ಸಾವು!
