ದಾವಣಗೆರೆ : ಕರ್ತವ್ಯ ನಿಮಿತ್ತ ಹೆದ್ದಾರಿಯಲ್ಲಿ ವಾಹನ ತಪಾಸಣೆ ನಡೆಸುತ್ತಿದ್ದ ಪೊಲೀಸ್ ಪೇದೆ ಮೇಲೆ ಚಾಲಕನೋರ್ವ ಲಾರಿ ಹತ್ತಿಸಿದ ಪರಿಣಾಮ ಕಾನ್ಸ್ಟೇಬಲ್ ಸಾವನ್ನಪ್ಪಿರುವ ಘಟನೆ ದಾವಣಗೆರೆ ಹೊರವಲಯದ ಹೆಬ್ಬಾಳು ಟೋಲ್ ಗೇಟ್ ಬಳಿ ನಡೆದಿದೆ. ಮೃತ ಡಿಎಆರ್ ಕಾನ್ಸ್ಟೇಬಲ್ನ್ನು 32 ವರ್ಷದ ರಾಮಪ್ಪ ಪೂಜಾರ್ ಎಂದು ಗುರುತಿಸಲಾಗಿದೆ.
ಎಂದಿನಂತೆ ಪೊಲೀಸರು ರಾಷ್ಟ್ರೀಯ ಹೆದ್ದಾರಿಯಲ್ಲಿ ಲಾರಿಗಳನ್ನ ತಡೆದು ಪರಿಶೀಲನೆ ನಡೆಸುತ್ತಿದ್ದರು. ಈ ವೇಳೆ ದಾವಣಗೆರೆಯ ಗ್ರಾಮಾಂತರ ಠಾಣೆಯ ಕಾನ್ಸ್ಟೇಬಲ್ ರಾಮಪ್ಪ ಪೂಜಾರ್ ಸಂಚಾರಿ ಪೊಲೀಸರೊಂದಿಗೆ ಲಾರಿಯೊಂದನ್ನು ತಡೆಯಲು ಮುಂದಾಗಿದ್ದಾರೆ. ಆದ್ರೆ, ಲಾರಿ ಚಾಲಕ ಲಾರಿಯನ್ನ ನಿಲ್ಲಿಸದೇ ರಾಮಪ್ಪ ಪೂಜಾರ್ ಮೇಲೆಯೆ ಹತ್ತಿಸಿದ್ದಾನೆ.
ಲಾರಿ ಕೆಳಗೆ ಸಿಲುಕಿ ಗಂಭೀರವಾಗಿ ಗಾಯಗೊಂಡಿದ್ದ ರಾಮಪ್ಪ ಪೂಜಾರ್ನನ್ನು ದಾವಣಗೆರೆಯ ಖಾಸಗಿ ಆಸ್ಪತ್ರೆ ರವಾನಿಸಿತಾದರೂ, ಚಿಕಿತ್ಸೆ ಫಲಿಸದೆ ಸಾವನ್ನಪ್ಪಿದ್ದಾರೆ. ರಾಮಪ್ಪ ಮದುವೆಯಾಗಿ ಕೇಲವ ಒಂದು ವರ್ಷ ಕಳೆದಿತ್ತು ಎಂದು ತಿಳಿದುಬಂದಿದೆ.
ಘಟನಾ ಸ್ಥಳಕ್ಕೆ ಐಜಿಪಿ ರವಿಕಾಂತೇಗೌಡ, ಎಸ್ಪಿ ಉಮಾ ಪ್ರಶಾಂತ್, ಡಿವೈಎಸ್ಪಿ ಶರಣಬಸವೇಶ್ವರ ಸೇರಿದಂತೆ ಸಿಬ್ಬಂದಿಗಳು ಆಗಮಿಸಿದ್ದು, ಕಂಬನಿ ಮಿಡಿದಿದ್ದಾರೆ. ಇತ್ತ ಹೆಬ್ಬಾಳ್ ಟೋಲ್ ಗೇಟ್ನಲ್ಲಿ ಸರಿಯಾದ ಸಿಸಿ ಟಿವಿ ಅಳವಡಿಸಿರಲಿಲ್ಲ ಎನ್ನುವ ಆರೋಪ ಕೂಡ ಕೇಳಿ ಬಂದಿದೆ. ಇದರಿಂದ ಘಟನೆಯೂ ಕ್ಯಾಮರದಲ್ಲಿ ಸರಿಯಾಗಿ ಸೆರೆಯಾಗಿಲ್ಲ ಎಂದು ಅಧಿಕಾರಿಗಳು ಟೋಲ್ ಸಿಬ್ಬಂದಿ ವಿರುದ್ದ ಗರಂ ಆಗಿದ್ದಾರೆ.
ಇದನ್ನೂ ಓದಿ : ಇಂದು ಕೂಡ ಅಬ್ಬರಿಸಲಿದ್ದಾನೆ ವರುಣ.. ಬೆಂಗಳೂರು ಸೇರಿ ರಾಜ್ಯದ ವಿವಿಧೆಡೆ ಭಾರೀ ಮಳೆ ಸಾಧ್ಯತೆ – ಯೆಲ್ಲೋ ಅಲರ್ಟ್ ಘೋಷಣೆ!
