ಭಾರತ-ಪಾಕಿಸ್ತಾನ ನಡುವಿನ ಕದನ ವಿರಾಮದ ಹಿನ್ನೆಲೆಯಲ್ಲಿ ಸ್ಥಗಿತಗೊಂಡಿದ್ದ ಐಪಿಎಲ್ ಪಂದ್ಯಗಳನ್ನು ಪುನಾರಂಭಿಸಲು ಬಿಸಿಸಿಐ ಸಿದ್ಧತೆ ನಡೆಸುತ್ತಿದೆ. ಆಯಾಯ ನಗರಗಳಲ್ಲೇ ಪಂದ್ಯಗಳು ನಡೆಯುವ ಸಾಧ್ಯತೆಗಳಿದ್ದು, ಮೇ 15ರಿಂದ ಪಂದ್ಯಗಳು ಆರಂಭವಾಗಬಹುದು ಎಂದು ಹೇಳಲಾಗಿದೆ.
ಗುರುವಾರ ಡೆಲ್ಲಿ ಕ್ಯಾಪಿಟಲ್ಸ್-ಪಂಜಾಬ್ ಕಿಂಗ್ಸ್ ನಡುವಿನ ಪಂದ್ಯ ಅರ್ಧಕ್ಕೇ ಸ್ಥಗಿತಗೊಂಡ ಬಳಿಕ ಶುಕ್ರವಾರ ಇಡೀ ಟೂರ್ನಿಯನ್ನೇ ಮೊಟಕುಗೊಳಿಸಲಾಗಿತ್ತು. ಆಟಗಾರರು, ಪ್ರೇಕ್ಷಕರ ಸುರಕ್ಷತೆ ಕಾರಣಕ್ಕೆ ಈ ನಿರ್ಧಾರ ಕೈಗೊಳ್ಳಲಾಗಿತ್ತು. ಭಾರತ-ಪಾಕಿಸ್ತಾನ ನಡುವೆ ಕದನ ವಿರಾಮ ಜಾರಿಯಾದರೆ ಟೂರ್ನಿ ಪುನಾರಂಭಿಸಲು ಬಿಸಿಸಿಐ ಕಾಯುತ್ತಿದೆ.
ಇಂದು ಬಿಸಿಸಿಐ ಮಹತ್ವದ ಸಭೆ : ಟೂರ್ನಿ ಪುನಾರಂಭದ ಬಗ್ಗೆ ಬಿಸಿಸಿಐ ಭಾನುವಾರ ಮಹತ್ವದ ಸಭೆ ನಡೆಸಲಿದೆ. ಈ ಬಗ್ಗೆ ಮಂಡಳಿಯ ಉಪಾಧ್ಯಕ್ಷ ರಾಜೀವ್ ಶುಕ್ಲಾ ಮಾಹಿತಿ ನೀಡಿದ್ದಾರೆ. ‘ಯುದ್ಧ ನಿಂತಿದೆ. ಈಗಿನ ಪರಿಸ್ಥಿತಿ ಬಗ್ಗೆ ಬಿಸಿಸಿಐ ಅಧಿಕಾರಿಗಳು, ಐಪಿಎಲ್ ಆಡಳಿತ ಮಂಡಳಿ ಭಾನುವಾರ ಸಭೆ ನಡೆಸಿ, ತೀರ್ಮಾನ ಕೈಗೊಳ್ಳಲಿದೆ. ಟೂರ್ನಿ ಯಾವಾಗ ನಡೆಸುವುದು ಸೂಕ್ತ ಎಂದು ಅವಲೋಕಿಸಿ, ವೇಳಾಪಟ್ಟಿ ಸಿದ್ಧಪಡಿಸುತ್ತೇವೆ’ ಎಂದಿದ್ದಾರೆ.
ಡೆಲ್ಲಿ ಕ್ಯಾಪಿಟಲ್ಸ್-ಪಂಜಾಬ್ ಕಿಂಗ್ಸ್ ನಡುವೆ ಮರು ಪಂದ್ಯ? ಗುರುವಾರ ಧರ್ಮಶಾಲಾ ಕ್ರೀಡಾಂಗಣದಲ್ಲಿ ನಡೆಯುತ್ತಿದ್ದ ಪಂಜಾಬ್ ಕಿಂಗ್ಸ್ ಹಾಗೂ ಡೆಲ್ಲಿ ಕ್ಯಾಪಿಟಲ್ಸ್ ನಡುವಿನ ಪಂದ್ಯ ಅರ್ಧದಲ್ಲೇ ಸ್ಥಗಿತಗೊಂಡಿತ್ತು. ಈ ಪಂದ್ಯ ರದ್ದುಗೊಳಿಸಲಾಗಿದೆಯೇ ಅಥವಾ ಮತ್ತೆ ಆಡಿಸಲಾಗುತ್ತದೆಯೇ ಎಂಬುದು ಇನ್ನೂ ದೃಢಪಟ್ಟಿಲ್ಲ. ಎರಡು ತಂಡಗಳಿಗೆ ಅಂಕ ಹಂಚಿಕೆ ಕೂಡಾ ಆಗದ ಹಿನ್ನೆಲೆಯಲ್ಲಿ, ಪಂದ್ಯವನ್ನು ಮತ್ತೆ ನಡೆಸುವ ಸಾಧ್ಯತೆಯಿದೆ ಎಂದು ಹೇಳಲಾಗುತ್ತಿದೆ.
ಇದನ್ನೂ ಓದಿ : ಪದ್ಮಶ್ರೀ ಪುರಸ್ಕೃತ ಕೃಷಿ ವಿಜ್ಞಾನಿ ಡಾ.ಸುಬ್ಬಣ್ಣ ಅಯ್ಯಪ್ಪನ್ ನಿಗೂಢ ಸಾವು – ಕಾವೇರಿ ನದಿಯಲ್ಲಿ ಶವ ಪತ್ತೆ!
