ಭಾರತ ಹಾಗೂ ಪಾಕಿಸ್ತಾನ ನಡುವಿನ ಘರ್ಷಣೆ ಮತ್ತಷ್ಟು ತೀವ್ರಗೊಂಡ ಹಿನ್ನೆಲೆಯಲ್ಲಿ ದೇಶದ 24 ವಿಮಾನ ನಿಲ್ದಾಣಗಳನ್ನು ಮೇ 15ರವರೆಗೆ ಮುಚ್ಚಲು ನಿರ್ಧರಿಸಲಾಗಿದೆ. ಇದರಲ್ಲಿ ಶ್ರೀನಗರ ಮತ್ತು ಚಂಡೀಗಢ ವಿಮಾನ ನಿಲ್ದಾಣಗಳೂ ಸೇರಿವೆ. ದೇಶದ ಉತ್ತರ ಮತ್ತು ಪಶ್ಚಿಮ ಭಾಗಗಳಲ್ಲಿರುವ ಈ ವಿಮಾನ ನಿಲ್ದಾಣಗಳಿಂದ ಯಾವುದೇ ನಾಗರಿಕ ವಿಮಾನಗಳು ಇರುವುದಿಲ್ಲ.
ಈ ಮೊದಲು ಇಲ್ಲಿನ ವಿಮಾನ ನಿಲ್ದಾಣಗಳನ್ನು ಮೇ 10ರವರೆಗೆ ಮುಚ್ಚಲು ನಿರ್ಧರಿಸಲಾಗಿತ್ತು. ಶುಕ್ರವಾರ ಈ ಮಾಹಿತಿಯನ್ನು ನೀಡಿದ ವಿಮಾನಯಾನ ಸಂಸ್ಥೆ, ವಿಮಾನ ನಿಲ್ದಾಣವನ್ನು ತಾತ್ಕಾಲಿಕವಾಗಿ ಮುಚ್ಚಿರುವುದರಿಂದ ಮೇ 15 ರವರೆಗೆ ವಿಮಾನಗಳು ರದ್ದಾಗಿರುತ್ತವೆ ಎಂದು ತಿಳಿಸಿದೆ.
ಮೂಲಗಳ ಪ್ರಕಾರ, ಮೇ 15ರಂದು ಬೆಳಿಗ್ಗೆ 5:29ರವರೆಗೆ 24 ವಿಮಾನ ನಿಲ್ದಾಣಗಳಲ್ಲಿ ಹಾರಾಟದ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಲಾಗುತ್ತದೆ. ಈ 24 ವಿಮಾನ ನಿಲ್ದಾಣಗಳಲ್ಲಿ ಚಂಡೀಗಢ, ಶ್ರೀನಗರ, ಅಮೃತಸರ, ಲೂಧಿಯಾನ, ಭುಂತರ್, ಕಿಶನ್ಗಢ, ಪಟಿಯಾಲ, ಶಿಮ್ಲಾ, ಧರ್ಮಶಾಲಾ, ಬಟಿಂಡಾ, ಜೈಸಲ್ಮೇರ್, ಜೋಧ್ಪುರ, ಲೇಹ್, ಬಿಕಾನೇರ್, ಭೂಜ್ನಗರ್ ಮತ್ತು ಪಠಾನೇರ್ ಸೇರಿವೆ.
“ಭಾರತದ ಹಲವಾರು ವಿಮಾನ ನಿಲ್ದಾಣಗಳನ್ನು ಮುಚ್ಚುವ ಬಗ್ಗೆ ವಿಮಾನಯಾನ ಅಧಿಕಾರಿಗಳ ಅಧಿಸೂಚನೆಯ ನಂತರ, ಜಮ್ಮು, ಶ್ರೀನಗರ, ಲೇಹ್, ಜೋಧ್ಪುರ, ಅಮೃತಸರ, ಚಂಡೀಗಢ, ಭುಜ್, ಜಾಮ್ನಗರ ಮತ್ತು ರಾಜ್ಕೋಟ್ನಂತಹ ವಿಮಾನ ನಿಲ್ದಾಣಗಳಿಗೆ ಮತ್ತು ಅಲ್ಲಿಂದ ಹೊರಡುವ ಏರ್ ಇಂಡಿಯಾ ವಿಮಾನಗಳನ್ನು ಮೇ 15 ರಂದು 05: 29 ಗಂಟೆಗಳ ಭಾರತೀಯ ಕಾಲಮಾನದವರೆಗೆ ರದ್ದುಗೊಳಿಸಲಾಗುತ್ತಿದೆ” ಎಂದು ಏರ್ ಇಂಡಿಯಾ ಹೇಳಿಕೆಯಲ್ಲಿ ತಿಳಿಸಿದೆ.
ಪ್ರಯಾಣಿಕರಿಗೆ ಪೂರ್ಣ ಮರುಪಾವತಿ : ಈ ಅವಧಿಯಲ್ಲಿ ಪ್ರಯಾಣಕ್ಕಾಗಿ ಮಾನ್ಯ ಟಿಕೆಟ್ಗಳನ್ನು ಹೊಂದಿರುವ ಗ್ರಾಹಕರಿಗೆ ಮರುಹೊಂದಿಸುವ ಶುಲ್ಕದಲ್ಲಿ ಒಂದು ಬಾರಿ ವಿನಾಯಿತಿ ಅಥವಾ ರದ್ದತಿಗೆ ಪೂರ್ಣ ಮರುಪಾವತಿಯನ್ನು ನೀಡಲಾಗುವುದು ಎಂದು ಏರ್ ಇಂಡಿಯಾ ತಿಳಿಸಿದೆ.
ಇದನ್ನೂ ಓದಿ : ‘ಆಪರೇಷನ್ ಸಿಂಧೂರ’ ಯಶಸ್ಸಿಗೆ ರಾಕಿಂಗ್ ಸ್ಟಾರ್ ಯಶ್ ಧನ್ಯವಾದ – ನಾಗರಿಕರಿಗೆ ಕೊಟ್ರು ಮಹತ್ವದ ಸಂದೇಶ!
