ಬೆಂಗಳೂರು : ರಾಷ್ಟ್ರಧ್ವಜವನ್ನು ಕರವಸ್ತ್ರದಂತೆ ಬಳಸಿ ಅಪಮಾನ ಮಾಡಿದ ಕನ್ನಡ ಅಭಿಮಾನಿ ಸಂಘದ ಅಧ್ಯಕ್ಷ ಕೃಷ್ಣಪ್ಪ ಹಾಗೂ ಜಯನಗರ ಶಾಸಕ ಸಿ.ಕೆ ರಾಮಮೂರ್ತಿ ವಿರುದ್ಧ ಕೂಡಲೇ ಕಾನೂನು ಕ್ರಮ ಕೈಗೊಳ್ಳುವಂತೆ ಆಗ್ನೇಯ ವಿಭಾಗ ಉಪ ಪೊಲೀಸ್ ಆಯುಕ್ತರಿಗೆ ದೂರು ನೀಡಲಾಗಿದೆ.
ದೂರಿನಲ್ಲಿ ಏನಿದೆ? ಮೇ 8 ರಂದು ಜಯನಗರ 9ನೇ ಬ್ಲಾಕ್ನಲ್ಲಿರುವ ಬಲಮುರಿ ವಿನಾಯಕ ಸುಬ್ರಹ್ಮಣ್ಯ ದೇವಾಲಯದ ಬಳಿ ಜಯನಗರ ವಿಧಾನಸಭಾ ಕ್ಷೇತ್ರದ ಶಾಸಕ ಸಿ ಕೆ ರಾಮಮೂರ್ತಿ ಮತ್ತು ಬಿಜೆಪಿ ಮುಖಂಡರು ಸಾರ್ವಜನಿಕರಿಗೆ ಸಿಹಿ ಹಂಚುವ ಕಾರ್ಯಕ್ರಮ ಆಯೋಜಿಸಿದ್ದರು. ಈ ಸಂದರ್ಭ ಸಿಹಿ ಹಂಚುವಾಗ ಜಯನಗರ ಶಾಸಕ ಸಿ.ಕೆ. ರಾಮಮೂರ್ತಿಯವರ ಪಕ್ಕದಲ್ಲಿದ್ದ ಕನ್ನಡ ಅಭಿಮಾನಿ ಸಂಘದ ಅಧ್ಯಕ್ಷ ಕೃಷ್ಣಪ್ಪ ರಾಷ್ಟ್ರಧ್ವಜವನ್ನು ಕರಾವಸ್ತ್ರದಂತೆ ಬಳಸಿಕೊಂಡು ಕೈ ಒರೆಸಿಕೊಂಡಿದ್ದಾರೆ.
ರಾಷ್ಟ್ರೀಯ ಗೌರವ ಕಾಯ್ದೆ 1971ರ ಸೆಕ್ಷನ್ ಎರಡರ ಪ್ರಕಾರ ರಾಷ್ಟ್ರಧ್ವಜವನ್ನು ಅವಮಾನ ಮಾಡಿರುವ ಕಾರ್ಯಕ್ರಮ ಸಂಘಟಕ ಶಾಸಕ ಸಿ.ಕೆ. ರಾಮಮೂರ್ತಿ ಮತ್ತು ಕೃಷ್ಣಪ್ಪ ಹಾಗೂ ಬಿಜೆಪಿ ಮುಖಂಡರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕೆಂದು ಮೋನಿಶ್ ರೆಡ್ಡಿ, ಮತೀನ್ ಪಾಶ, ಶರತ್ ಆರ್, ಪವನ್ ಕುಮಾರ್ ಎಂಬವರು ಆಗ್ನೇಯ ವಿಭಾಗದ ಪೊಲೀಸ್ ಆಯುಕ್ತರಿಗೆ ದೂರು ಸಲ್ಲಿಸಿ ಮನವಿ ಮಾಡಿದ್ದಾರೆ.
ಇದನ್ನೂ ಓದಿ : ಸೇನಾ ಕಾರ್ಯಾಚರಣೆಯ LIVE ಕವರೇಜ್ ಬೇಡ – ಮಾಧ್ಯಮಗಳಿಗೆ ರಕ್ಷಣಾ ಇಲಾಖೆ ಸೂಚನೆ!
