IPL ಆಯೋಜನೆಯಲ್ಲಿ ನಿಯಮ ಉಲ್ಲಂಘನೆ, ಅವ್ಯವಹಾರ ಆರೋಪ – KSCA ವಿರುದ್ಧ ಕ್ರಮಕ್ಕೆ MLC ದಿನೇಶ್‌ ಗೂಳಿಗೌಡ ಪತ್ರ!

ಕರ್ನಾಟಕ ರಾಜ್ಯ ಕ್ರಿಕೆಟ್ ಅಸೋಸಿಯೇಷನ್ ಹಾಗೂ ಡಿಎನ್ಎ ಎಂಟರ್ಟೈನ್ಮೆಂಟ್ ನೆಟ್ವರ್ಕ್ ಕಂಪನಿಯಿಂದ ರಾಜ್ಯದಲ್ಲಿ ಕ್ರಿಕೆಟ್ ಪಂದ್ಯಾವಳಿಗಳ ಆಯೋಜನೆಗೆ ಸಂಬಂಧಿಸಿದಂತೆ ನಿಯಮ ಉಲ್ಲಂಘನೆ ಮತ್ತು ಅವ್ಯವಹಾರಗಳ ಕುರಿತು ತುರ್ತು ಕ್ರಮ ಕೈಗೊಳ್ಳುವಂತೆ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆ ಶಿವಕುಮಾರ್ ಹಾಗೂ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಅವರಿಗೆ MLC ದಿನೇಶ್‌ ಗೂಳಿಗೌಡ ಪತ್ರ ಬರೆದಿದ್ದಾರೆ.

ಕರ್ನಾಟಕ ರಾಜ್ಯ ಕ್ರಿಕೆಟ್ ಅಸೋಸಿಯೇಷನ್ (ಕೆಎಸ್‌ಸಿಎ) ಹಾಗೂ ಡಿಎನ್ಎ ಎಂಟರ್ಟೈನ್ಮೆಂಟ್ ನೆಟ್ವರ್ಕ್ ಕಂಪನಿ ರಾಜ್ಯದಲ್ಲಿ ಟೆಸ್ಟ್, ಏಕದಿನ ಹಾಗೂ ಐಪಿಎಲ್ ಕ್ರಿಕೆಟ್ ಪಂದ್ಯಾವಳಿಗಳನ್ನು ಆಯೋಜಿಸಲು ಒಪ್ಪಂದ ಮಾಡಿಕೊಂಡಿರುವುದು ಗಮನಕ್ಕೆ ಬಂದಿದೆ. ಆದರೆ, ಕಂಪನಿಯು ಪಂದ್ಯಾವಳಿಗಳ ಆಯೋಜನೆಯಲ್ಲಿ ಏಕಪಕ್ಷೀಯ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಿರುವುದು, ಯಾವುದೇ ನಿಯಮಾವಳಿಗಳನ್ನು ಅನುಸರಿಸದೆ, ಸರ್ಕಾರದ ಆದೇಶಗಳಿಗೆ ಬೆಲೆ ನೀಡದೆ ಹಾಗೂ ಸಂಬಂಧಿಸಿದ ಇಲಾಖೆಗಳ ಸೂಕ್ತ ಅನುಮತಿಗಳಿಲ್ಲದೆ ನಡೆದುಕೊಳ್ಳುತ್ತಿರುವುದು ಆತಂಕಕಾರಿ ವಿಷಯವಾಗಿದೆ. ಕ್ರೀಡಾ ಮತ್ತು ಯುವಜನ ಇಲಾಖೆಯು ತಕ್ಷಣ ಕ್ರಮ ಕೈಗೊಳ್ಳದಿದ್ದಲ್ಲಿ ಸರ್ಕಾರ ಹಾಗೂ ಇಲಾಖೆಗೆ ಕೆಟ್ಟ ಹೆಸರು ಬರುವ ಸಾಧ್ಯತೆ ಇದೆ.

ಕಾರ್ಯದರ್ಶಿ ಶ್ರೀ ಶಂಕರ ಅವರು ಕಂಪನಿಯ ಲೋಪದೋಷಗಳನ್ನು ನಿರ್ಲಕ್ಷಿಸಿ ಅವ್ಯವಹಾರಗಳಿಗೆ ಅವಕಾಶ ನೀಡಿರುವುದು ಸಾರ್ವಜನಿಕ ವಲಯದಲ್ಲಿ ತೀವ್ರ ಚರ್ಚೆ ಮತ್ತು ಆಕ್ರೋಶಕ್ಕೆ ಕಾರಣವಾಗಿದೆ. ಮುಖ್ಯಮಂತ್ರಿಗಳು ಕ್ರೀಡಾ ಖಾತೆಯನ್ನು ಹೊಂದಿದ್ದರೂ, ಕೆಎಸ್‌ಸಿಎ ಮತ್ತು ಡಿಎನ್ಎ ಎಂಟರ್ಟೈನ್ಮೆಂಟ್ ಕಂಪನಿಗಳ ಹೊಂದಾಣಿಕೆಯಿಂದ ಐಪಿಎಲ್ ಪಂದ್ಯಾವಳಿಗಳ ಟಿಕೆಟ್‌ಗಳು ಕಾಳಸಂತೆಯಲ್ಲಿ ದುಬಾರಿ ಬೆಲೆಗೆ ಮಾರಾಟವಾಗುತ್ತಿವೆ (ಉದಾಹರಣೆಗೆ 1200 ರೂ. ಟಿಕೆಟ್‌ಗಳು 10000ರಿಂದ 15000 ರೂ. ವರೆಗೆ ಹಾಗೂ 20,000 ರೂ. ಇರುವ ವಿಐಪಿ ಟಿಕೆಟ್‌ಗಳು 2 ಲಕ್ಷ ರೂ. ವರೆಗೆ ಮಾರಾಟವಾಗುತ್ತಿವೆ). ಇದು ಸರ್ಕಾರ ಮತ್ತು ಕ್ರೀಡಾ ಇಲಾಖೆಗೆ ಕೆಟ್ಟ ಹೆಸರು ತರುತ್ತಿದೆ. ಅಲ್ಲದೆ, ಸಾರ್ವಜನಿಕವಾಗಿ ಕೆಟ್ಟ ಹೆಸರನ್ನೂ ತರುತ್ತಿದೆ. ಅಲ್ಲದೆ, ಪಂದ್ಯಾವಳಿಗಳಿಗೆ ಆಗಮಿಸುವ ಅತಿಥಿಗಳಿಗಾಗಿ ಪೂರೈಕೆಯಾಗುತ್ತಿರುವ ಆಹಾರ ಮತ್ತು ಪಾನೀಯಗಳು ಕಳಪೆಯಾಗಿದ್ದು, ಈಗಾಗಲೇ ಅತಿಥಿಗಳ ಆರೋಗ್ಯದ ಮೇಲೆ ಪರಿಣಾಮ ಬೀರಿರುವುದು ಇಲಾಖಾ ಮಟ್ಟದಲ್ಲಿ ಚರ್ಚೆಯಾಗಿದೆ. ಪ್ರಾಯೋಜಕ ಸಂಸ್ಥೆಯು ಯಾವುದೇ ನಿಯಮಗಳಿಗೆ ಬೆಲೆ ನೀಡದೆ ತನ್ನಿಷ್ಟದಂತೆ ನಡೆದುಕೊಳ್ಳುತ್ತಿರುವುದು ಸರ್ಕಾರದ ಟೀಕೆಗೆ ಕಾರಣವಾಗುತ್ತಿದೆ.

ಕೆಎಸ್‌ಸಿಎ ಸಂಸ್ಥೆಯು ಪಂದ್ಯಾವಳಿಗಳನ್ನು ಆಯೋಜಿಸುವಾಗ ಸ್ಥಳೀಯ ಆಡಳಿತ ಇಲಾಖೆಗಳು (ಬಿಬಿಎಂಪಿ), ಪೊಲೀಸ್ ಇಲಾಖೆ ಹಾಗೂ ಅಗ್ನಿಶಾಮಕ ದಳದಿಂದ ಪೂರ್ವಾನುಮತಿ ಮತ್ತು ನಿರಾಕ್ಷೇಪಣ ಪತ್ರಗಳನ್ನು ಪಡೆಯುವುದು ಕಡ್ಡಾಯ ನಿಯಮವಾಗಿದೆ. ಆದರೆ, ಪ್ರಸ್ತುತ ಪಂದ್ಯಾವಳಿಗಳು ಯಾವುದೇ ನಿಯಮಗಳನ್ನು ಪಾಲಿಸದೆ, ಏಕಪಕ್ಷೀಯವಾಗಿ ನಿರ್ಧಾರವನ್ನು ತೆಗೆದುಕೊಳ್ಳುತ್ತಿರುವುದು ಸರ್ಕಾರದ ಗಮನಕ್ಕೆ ಬಂದಿಲ್ಲವೆಂಬುದು ತೋರುತ್ತದೆ.

ಈ ಪರಿಸ್ಥಿತಿಯನ್ನು ನಿಯಂತ್ರಿಸಲು ಸರ್ಕಾರವು ತಕ್ಷಣವೇ ಏಕಗವಾಕ್ಷಿ ಪದ್ಧತಿಯನ್ನು ಜಾರಿಗೆ ತರುವುದು ಅತ್ಯಗತ್ಯ. ಈ ಪದ್ಧತಿಯು ಸ್ಥಳೀಯ ಆಡಳಿತ ಸಂಸ್ಥೆಗಳು, ಪೊಲೀಸ್ ಇಲಾಖೆ, ಕ್ರೀಡಾ ಇಲಾಖೆ ಮತ್ತು ಅಗ್ನಿಶಾಮಕ ದಳದ ಕಾರ್ಯದರ್ಶಿಗಳು, ಆಯುಕ್ತರುಗಳು ಹಾಗೂ ಹಿರಿಯ ಅಧಿಕಾರಿಗಳನ್ನು ಒಳಗೊಂಡಿರಬೇಕು. ಇದರಿಂದ ಟಿಕೆಟ್ ವಿತರಣೆ ಮತ್ತು ಅತಿಥಿ ಸತ್ಕಾರ ಸೇರಿದಂತೆ ಎಲ್ಲ ವಿಭಾಗಗಳಲ್ಲಿ ನಿಯಂತ್ರಣ ಸಾಧಿಸಿ, ಯಶಸ್ವಿಯಾಗಿ ಪಂದ್ಯಾವಳಿಗಳನ್ನು ವ್ಯವಸ್ಥಿತವಾಗಿ ಆಯೋಜಿಸಲು ಸಾಧ್ಯವಾಗುತ್ತದೆ ಜೊತೆಗೆ ಸರ್ಕಾರಕ್ಕೆ ಉತ್ತಮ ಹೆಸರು ಬರುತ್ತದೆ.

ಈ ಕೆಳಗಿನ ಕ್ರಮಗಳನ್ನು ಅನುಸರಿಸಬೇಕೆಂದು ಕೋರಿಕೆ :

• ಹಣಕಾಸು ತನಿಖೆ: ಟಿಕೆಟ್ ಅಕ್ರಮ, ಕಳಪೆ ಸೌಲಭ್ಯಗಳು ಹಾಗೂ ಹಣಕಾಸು ಅವ್ಯವಹಾರದ ಕುರಿತು ತನಿಖೆಯಾಗ ಬೇಕು.
• ಒಡಂಬಡಿಕೆ ಪರಿಶೀಲನೆ: ಪ್ರಸ್ತುತ ಚಾಲ್ತಿಯಲ್ಲಿರುವ ಕೆಎಸ್‌ಸಿಎ-ಡಿಎನ್‌ಎ ಒಪ್ಪಂದದ ಷರತ್ತುಗಳನ್ನು ಪುನರ್ ಪರಿಶೀಲಿಸಿ, ಉಲ್ಲಂಘನೆಯಾಗಿದ್ದರೆ ಒಡಂಬಡಿಕೆಯನ್ನು ರದ್ದು ಮಾಡಲು ಪರಿಗಣಿಸುವುದು.
• ಇಲಾಖಾ ಹೊಣೆಗಾರಿಕೆ: ಅವ್ಯವಹಾರ ತಡೆಯುವಲ್ಲಿ ವಿಫಲರಾಗಿರುವ ಕ್ರೀಡಾ ಇಲಾಖೆ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳುವುದು.
• ಸಾರ್ವಜನಿಕ ಹಿತರಕ್ಷಣೆ: ಟಿಕೆಟ್ ಕಾಳಸಂತೆ, ಕಳಪೆ ಸೌಲಭ್ಯಗಳಿಂದ ಸಾರ್ವಜನಿಕರಿಗೆ ಆಗುತ್ತಿರುವ ತೊಂದರೆ ತೊಂದರೆಯನ್ನು ತಪ್ಪಿಸಿ ಸಾರ್ವಜನಿಕ ಹಿತಾಸಕ್ತಿಯನ್ನು ಕಾಪಾಡುವುದು.
• ಪಾರದರ್ಶಕ ಆಡಳಿತ:ಟಿಕೆಟ್ ವಿತರಣೆ, ಹಣಕಾಸು ನಿರ್ವಹಣೆ, ಗುತ್ತಿಗೆ ಕರಾರಿನಲ್ಲಿ ಪಾರದರ್ಶಕತೆ ಇರುವಂತೆ ನೋಡಿಕೊಳ್ಳುವುದು.
• ಮಾರ್ಗಸೂಚಿ ರಚನೆ: ಮುಂದಿನ ಪಂದ್ಯಾವಳಿಗಳಿಗೆ ತಪ್ಪುಗಳು ಪುನರಾವರ್ತನೆ ಯಾಗದಂತೆ ಕಟ್ಟುನಿಟ್ಟಿನ ನೀತಿ- ನಿಯಮಾವಳಿಗಳನ್ನು ರೂಪಿಸುವುದು.
• ಕಾನೂನು ಕ್ರಮ:ನಿಯಮ ಉಲ್ಲಂಘನೆಗೆ ಕಂಪನಿ ವಿರುದ್ಧ ಕಾನೂನು ಕ್ರಮ ಪರಿಶೀಲಿಸಿ ಕೈಗೊಳ್ಳುವುದು.
• ದುರ್ನಡತೆಗೆ ತಡೆ: ಅಧಿಕಾರಿಗಳ ದುರ್ನಡತೆ ತಡೆಯಲು ಕಠಿಣ ನಿಯಮ ಜಾರಿಗೆ ತಂದು ಅನುಷ್ಠಾನಗೊಳಿಸುವುದು.

ಇದನ್ನೂ ಓದಿ : ಆಪರೇಷನ್ ಸಿಂಧೂರ ಸಕ್ಸಸ್ : ನಾಳೆ ಎಲ್ಲಾ ಮಸೀದಿಗಳಲ್ಲಿ ವಿಶೇಷ ಪ್ರಾರ್ಥನೆಗೆ ಜಮೀರ್ ಸೂಚನೆ!

Btv Kannada
Author: Btv Kannada

Read More