ಉತ್ತರಕಾಶಿಯ ದಟ್ಟ ಕಾಡಿನಲ್ಲಿ ಹೆಲಿಕಾಪ್ಟರ್​ ಪತನ – ಪೈಲಟ್ ಸೇರಿ ಐವರು ದುರ್ಮರಣ.. ಇಬ್ಬರು ಗಂಭೀರ!

ಉತ್ತರಾಖಂಡ : ಉತ್ತರಾಖಂಡದ ಉತ್ತರಕಾಶಿ ಬಳಿ ಇಂದು (ಮೇ 8) ಬೆಳ್ಳಂಬೆಳಗ್ಗೆ ಪ್ರವಾಸಿಗರನ್ನು ಹೊತ್ತೊಯ್ಯುತ್ತಿದ್ದ ಹೆಲಿಕಾಪ್ಟರ್ ಪತನವಾಗಿದೆ. ದುರ್ಘಟನೆಯಲ್ಲಿ ಹೆಲಿಕಾಪ್ಟರ್​ನಲ್ಲಿದ್ದ ಪೈಲಟ್ ಸೇರಿ 5 ಮಂದಿ ಪ್ರವಾಸಿಗರು ಮೃತಪಟ್ಟಿದ್ದು, ಇಬ್ಬರು ಗಂಭಿರವಾಗಿ ಗಾಯಗೊಂಡಿದ್ದಾರೆ.

ಪ್ರವಾಸಿಗರನ್ನು ಹೊತ್ತೊಯ್ಯುತ್ತಿದ್ದ ಹೆಲಿಕಾಪ್ಟರ್ ಡೆಹ್ರಾಡೂನ್‌ನಿಂದ ಹರ್ಸಿಲ್ ಹೆಲಿಪ್ಯಾಡ್‌ಗೆ ತೆರಳುತ್ತಿದ್ದಾಗ ಈ ಅವಘಡ ಸಂಭವಿಸಿದೆ. ಪೊಲೀಸರು, ಸೇನಾ ಪಡೆ, ವಿಪತ್ತು ನಿರ್ವಹಣಾ ತಂಡ ಮತ್ತು ಆಂಬ್ಯುಲೆನ್ಸ್‌ಗಳು ಘಟನಾ ಸ್ಥಳಕ್ಕೆ ಧಾವಿಸಿದ್ದು, ರಕ್ಷಣಾ ಕಾರ್ಯಾಚರಣೆ ನಡೆಸಿವೆ. ಹೆಲಿಕಾಪ್ಟರ್ ಪತನಕ್ಕೆ ನಿಖರ ಕಾರಣವೇನೆಂದು ಇನ್ನು ತಿಳಿದುಬಂದಿಲ್ಲ. ಚಾರ್ ಧಾಮ್ ಯಾತ್ರೆ ಆರಂಭಗೊಂಡ ಕೆಲವೇ ದಿನಗಳಲ್ಲಿ ಈ ದುರಂತ ಸಂಭವಿಸಿದೆ.

ಉತ್ತರಕಾಶಿಯ ಗಂಗಾನಿ ಬಳಿ ಹೆಲಿಕಾಪ್ಟರ್ ಅಪಘಾತದಲ್ಲಿ ಕೆಲವರು ಸಾವನ್ನಪ್ಪಿರುವುದು ದುಃಖ ತಂದಿದೆ ಎಂದು ಉತ್ತರಾಖಂಡ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಹೇಳಿದ್ದಾರೆ. ಪರಿಹಾರ ಮತ್ತು ರಕ್ಷಣಾ ಕಾರ್ಯಕ್ಕಾಗಿ ಎಸ್‌ಡಿಆರ್‌ಎಫ್ ಮತ್ತು ಜಿಲ್ಲಾಡಳಿತ ತಂಡಗಳು ತಕ್ಷಣ ಸ್ಥಳಕ್ಕೆ ತಲುಪಿವೆ. ಅಪಘಾತದಲ್ಲಿ ಮಡಿದವರ ಆತ್ಮಕ್ಕೆ ಶಾಂತಿ ದೊರೆಯಲಿ ಮತ್ತು ಮೃತರ ಕುಟುಂಬಗಳಿಗೆ ಈ ದುಃಖವನ್ನು ಭರಿಸುವ ಶಕ್ತಿಯನ್ನು ಭಗವಂತ ನೀಡಲಿ ಎಂದು ಧಾಮಿ ಪ್ರಾರ್ಥಿಸಿದ್ದಾರೆ.

ಇನ್ನು, ಗಾಯಾಳುಗಳಿಗೆ ಸಾಧ್ಯವಿರುವ ಎಲ್ಲಾ ಸಹಾಯವನ್ನು ಒದಗಿಸಲು ಮತ್ತು ಅಪಘಾತದ ತನಿಖೆ ನಡೆಸಲು ಆಡಳಿತಕ್ಕೆ ಸೂಚನೆಗಳನ್ನು ನೀಡಲಾಗಿದೆ. ಈ ನಿಟ್ಟಿನಲ್ಲಿ, ನಾನು ಅಧಿಕಾರಿಗಳೊಂದಿಗೆ ನಿರಂತರವಾಗಿ ಸಂಪರ್ಕದಲ್ಲಿದ್ದೇನೆ ಮತ್ತು ಪ್ರತಿಯೊಂದು ಪರಿಸ್ಥಿತಿಯನ್ನು ಮೇಲ್ವಿಚಾರಣೆ ಮಾಡಲಾಗುತ್ತಿದೆ ಎಂದು ಧಾಮಿ ಹೇಳಿದ್ದಾರೆ.

ಇದನ್ನೂ ಓದಿ : ವಿಜಯಪುರದಲ್ಲಿ ಮುಂದಿನ ಸಚಿವ ಸಂಪುಟ ಸಭೆ – ಜಿಲ್ಲಾಧಿಕಾರಿ, ಎಸ್​ಪಿ ಜೊತೆ ಉಸ್ತುವಾರಿ ಸಚಿವ ಎಂ.ಬಿ. ಪಾಟೀಲ್​ ಚರ್ಚೆ!

Btv Kannada
Author: Btv Kannada

Read More