ಬಡ್ಡಿ ಸಮೇತ ತೀರಿಸದೇ ಹೋದ್ರೆ ನಾನು ದೇವೇಗೌಡರ ಮಗನೇ ಅಲ್ಲ – HD ರೇವಣ್ಣ ಕಿಡಿ!

ಹಾಸನ : ನಾನು ಸಮಯಕ್ಕಾಗಿ ಕಾಯ್ತಾ ಇದಿನಿ, ಎಲ್ಲವನ್ನೂ ಬಡ್ಡಿ ಸಮೇತ ತೀರಿಸದೇ ಹೋದ್ರೆ ನಾನು ದೇವೇಗೌಡರ ಮಗನೇ ಅಲ್ಲ ಎಂದು ಮಾಜಿ ಸಚಿವ ಹೆಚ್.ಡಿ ರೇವಣ್ಣ ಕಿಡಿ ಕಾರಿದ್ದಾರೆ.

ಹಾಸನದ ದ್ಯಾಪಲಾಪುರ ಗ್ರಾಮದಲ್ಲಿ ಶ್ರೀ ಆಂಜನೇಯ ಸ್ವಾಮಿ ದೇವಾಲಯದ ಉದ್ಘಾಟನಾ ಕಾರ್ಯಕ್ರಮದಲ್ಲಿ ಹೆಚ್.ಡಿ ರೇವಣ್ಣ ಮಾತನಾಡಿ, ಕೆಲವರು ಹೇಳ್ತಾರೆ ದೇವೇಗೌಡರದು, ರೇವಣ್ಣ ಅವರದ್ದು ಮುಗಿತು ಅಂತಾರೆ. ಈ ಜಿಲ್ಲೆಗೆ ದೇವೇಗೌಡರ ಕೊಡುಗೆ ಏನೆಂದು ಜನರಿಗೆ ಗೊತ್ತಿದೆ ಎಂದಿದ್ದಾರೆ.

ಕೆಲವು ಅಧಿಕಾರಿಗಳು ರೇವಣ್ಣ ಹಾಗೂ ದೇವೇಗೌಡರದು ಮುಗೀತು ಎಂದು ತಿಳಿದುಕೊಂಡಿದ್ದಾರೆ. ಹಿಂದೆ ಕೂಡ ಜಿಲ್ಲೆಯಲ್ಲಿ ಎಲ್ಲಾ ಸ್ಥಾನ ಸೋತಿದ್ದೆವು. ಬಳಿಕ ಐದೇ ವರ್ಷಕ್ಕೆ ದೇವೇಗೌಡರು ಅಧಿಕಾರಕ್ಕೆ ಬಂದಿದ್ದರು. ಹಾಸನಕ್ಕೆ ದೇವೇಗೌಡರ ಕೊಡುಗೆ ಏನು ಅಂತಾರೆ. ರೈಲ್ವೆ ಯೋಜನೆ, ಇಂಜಿನಿಯರಿಂಗ್, ಮೆಡಿಕಲ್ ಕಾಲೇಜು, ನರ್ಸಿಂಗ್ ಕಾಲೇಜು ಮಾಡಿದ್ದು ಯಾರು? ಹಾಸನ ಜಿಲ್ಲೆಯ ಶಿಕ್ಷಣಕ್ಕೆ ಕುಮಾರಸ್ವಾಮಿ ಐದು ಸಾವಿರ ಕೋಟಿ ರೂ. ಕೊಟ್ಟಿದ್ರು ಎಂದಿದ್ದಾರೆ.

ಕಾಂಗ್ರೆಸ್‍ನವರು ಹಾಸನ – ಮೈಸೂರು ರೈಲ್ವೆ ಯೋಜನೆ ಸ್ಥಗಿತ ಮಾಡಿದ್ದರು. ಆದರೆ ದೇವೇಗೌಡರು ಪ್ರಧಾನಿಯಾಗಿ ಹತ್ತೆ ತಿಂಗಳಿಗೆ ಆ ಯೋಜನೆ ಮಾಡಿದ್ರು. ಕಾಂಗ್ರೆಸ್‍ನವರು ಈ ಜಿಲ್ಲೆಯಲ್ಲಿ ಸುಳ್ಳು ಹೇಳಿಕೊಂಡು ರಾಜಕಾರಣ ಮಾಡುತ್ತಿದ್ದಾರೆ. ಈ ಜಿಲ್ಲೆ ಲೂಟಿಕೋರರ ಕೈ ಸೇರಿದೆ. ನಾನೂ ಇಲ್ಲೇ ಇರ್ತಿನೆ, ಇದೆಲ್ಲಾ ಎಷ್ಟು ದಿನ ಇರುತ್ತದೆ ನೋಡೋಣ. ಈ ದೇಶ ಉಳಿಯಬೇಕಾದರೆ ಮೋದಿಯವರು ಇರಲೇಬೇಕು. ಅವರಿಗೆ ನಮ್ಮ ಪಕ್ಷದ ಸಂಪೂರ್ಣ ಬೆಂಬಲ ಇದೆ ಎಂದಿದ್ದಾರೆ.

ಇದನ್ನೂ ಓದಿ : ಆ್ಯಂಕರ್ ಅನುಶ್ರೀ ಕೈಗೆ ಉಂಗುರ.. ಮದುವೆ ಗಾಸಿಪ್ ಬೆನ್ನಲ್ಲೇ ವಿಡಿಯೋ ವೈರಲ್!

Btv Kannada
Author: Btv Kannada

Read More