ಕ್ಷಮೆ ಕೇಳದೇ ಮತ್ತೆ ಸೋನು ನಿಗಮ್ ಉದ್ಧಟತನ – ಸ್ಯಾಂಡಲ್​ವುಡ್​ನಿಂದ ಬ್ಯಾನ್​ ಮಾಡುವಂತೆ ಆಗ್ರಹ!

ಬೆಂಗಳೂರು : ಕನ್ನಡ ಹಾಡುಗಳಿಂದಲೇ ದೇಶ-ವಿದೇಶಗಳಲ್ಲಿ ಖ್ಯಾತರಾಗಿದ್ದ ಗಾಯಕ ಸೋನು ನಿಗಮ್ ಇದೀಗ ಕನ್ನಡಿಗರನ್ನು ಮತ್ತೆ ಕೆಣಕಿ ಉದ್ಧಟತನ ಮೆರೆದಿದ್ದಾರೆ. ಕನ್ನಡ, ಕನ್ನಡ ಎಂದಿದ್ದಕ್ಕೆ ಪಹಲ್ಗಾಮ್ ದಾಳಿ ಆಯ್ತು ಎಂದಿದ್ದ ಸೋನು ನಿಗಮ್ ವಿರುದ್ಧ ಬೆಂಗಳೂರಿನ ಆವಲಹಳ್ಳಿ ಪೊಲೀಸ್ ಠಾಣೆಯಲ್ಲಿ ಭಾಷಾ ಸಾಮರಸ್ಯ ಕದಡಿದ ಆರೋಪದ ಮೇಲೆ FIR ದಾಖಲಾಗಿತ್ತು.

FIR ಆದ್ರೂ ಖ್ಯಾತ ಗಾಯಕ ಸೋನು ನಿಗಮ್ ಮೊಂಡಾ ವರ್ತನೆ ತೋರಿಸಿದ್ದು ಕನ್ನಡಿಗರೇ ಗೂಂಡಾಗಳಂತೆ ವರ್ತಿಸಿದ್ರು ಎಂದು ಮತ್ತೆ ನಾಲಗೆ ಹರಿ ಬಿಟ್ಟಿದ್ದಾರೆ. ಮತ್ತೊಂದು ವಿಡಿಯೋ ರಿಲೀಸ್ ಮಾಡಿದ್ದ ಕನ್ನಡಿಗರ ವಿರುದ್ಧ ಕೆಂಡಕಾರಿ ತಮ್ಮ ನಡೆ ಸಮರ್ಥಿಸಿಕೊಂಡಿದ್ದಾರೆ.

ಕಾಶ್ಮೀರದ ಪಹಲ್ಗಾಮ್ ದಾಳಿ ಹೇಳಿಕೆ ಬಗ್ಗೆ ನನಗೆ ವಿಷಾದವಿಲ್ಲ. ಕನ್ನಡ, ಕನ್ನಡ ಎಂದು ಜನರು ಖುಷಿಯಲ್ಲಿ ಹೇಳುವುದಕ್ಕೂ, ಅದೇ ಮಾತನ್ನು ಕೋಪದಿಂದ ಬೆದರಿಕೆ ಒಡ್ಡುವ ರೀತಿ ಹೇಳುವುದಕ್ಕೂ ತುಂಬಾ ವ್ಯತ್ಯಾಸ ಇದೆ. ನಾನು ಶೋ ನೀಡುವಾಗ ನಾಲ್ಕೈದು ಗೂಂಡಾಗಳ ರೀತಿಯಲ್ಲಿ ಇದ್ದರು. ಆ ನಾಲ್ಕೈದು ಜನರಿಗೆ ತಿಳುವಳಿಕೆ ಹೇಳುವುದು ಅಗತ್ಯವಿತ್ತು. ಕನ್ನಡ, ಕನ್ನಡ ಎಂದು ಧಮ್ಕಿ ಹಾಕಿದ್ದವರನ್ನು ಹತೋಟಿಗೆ ತರಬೇಕಿತ್ತು. ಇಂಥವರನ್ನು ಹತೋಟಿಗೆ ತರದಿದ್ರೆ ಕಾರ್ಯಕ್ರಮದಲ್ಲಿ ಕಷ್ಟ ಆಗುತ್ತಿತ್ತು. ಹಾಗಾಗಿ ಅವರನ್ನು ಕಂಟ್ರೋಲ್​ ಮಾಡಲು ಆ ರೀತಿ ಮಾತಾಡಿದ್ದೇನೆ. ಕನ್ನಡಿಗರನ್ನು ಕಂಡರೆ ನನಗೆ ಬಹಳ ಪ್ರೀತಿ ಇದೆ ಎಂದು ಗಾಯಕ ಸೋನು ನಿಗಮ್ ತಾನು ಹೇಳಿದ್ದೇ ಸರಿ ಎಂದು ಸಮರ್ಥನೆಯಲ್ಲೂ ಮೊಂಡುತನ ಪ್ರದರ್ಶನ ತೋರಿದ್ದಾರೆ.

ಇನ್ನು ಯಾವುದೇ ರಾಜ್ಯಕ್ಕೆ ಹೋದ್ರೂ ಈ ರೀತಿಯ ಜನರು ಇರುತ್ತಾರೆ. ನೀವು ಇಂಥದ್ದೇ ಹಾಡನ್ನು ಹಾಡಬೇಕು ಎಂದು ಯಾರೂ ಬೆದರಿಕೆ ಹಾಕಬಾರದು ಎಂದಿದ್ದು ಗಾಯಕ ಸೋನು ನಿಗಮ್ ದುರಂಹಕಾರಕ್ಕೆ ಕನ್ನಡಿಗರು ಆಕ್ರೋಶ ಹೊರ ಹಾಕಿದ್ದಾರೆ. ಸೋನು ನಿಗಮ್ ವಿರುದ್ಧ ಕೋಟಿ ಕೋಟಿ ಕನ್ನಡಿಗರು ತಿರುಗಿಬಿದ್ದಿದ್ದಾರೆ.

ಖ್ಯಾತ ಗಾಯಕ ಸೋನು ನಿಗಮ್​ಗೆ ಬ್ಯಾನ್​​ ಭೀತಿ : – ಸೋನು ನಿಗಮ್​ ಅವರನ್ನು ಚಿತ್ರರಂಗದಿಂದಲೇ ಒದ್ದೋಡಿಸಲು ಕನ್ನಡಪರ ಸಂಘಟನೆಗಳು ಸಜ್ಜಾಗಿದ್ದು ಕನ್ನಡ ಚಿತ್ರರಂಗದಿಂದ ಬ್ಯಾನ್ ಮಾಡುವಂತೆ ಒತ್ತಡ ಹೆಚ್ಚಾಗಿದೆ. ಸ್ಯಾಂಡಲ್​ವುಡ್​ನಿಂದ ಸೋನು ನಿಗಮ್ ಬಹಿಷ್ಕಾರಕ್ಕೆ ಒತ್ತಾಯ ಕೇಳಿ ಬಂದಿದ್ದು ಚಲನಚಿತ್ರ ಮಂಡಳಿಗೆ ಕನ್ನಡಪರ ಹೋರಾಟಗಾರ ರೂಪೇಶ್ ರಾಜಣ್ಣ ದೂರು ನೀಡಿದ್ದಾರೆ. ಸೋನು ನಿಗಮ್ ಕ್ಷಮೆ ಕೇಳದಿದ್ದರೆ ಎಲ್ಲಿಯೇ ಸಿಕ್ಕರೂ ಮಸಿ ಬಳಿಯುವುದಾಗಿ ಎಚ್ಚರಿಕೆ ನೀಡಲಾಗಿದೆ.

ಕನ್ನಡಿಗರಿಗೆ ಅವಮಾನಕಾರಿಯಾಗಿ ಮಾತಾನಾಡಿರುವ ಸೋನು ನಿಗಮ್ ಅವರನ್ನು ಕನ್ನಡ ಚಿತ್ರರಂಗದಿಂದ ಸಂಪೂರ್ಣವಾಗಿ ನಿಷೇಧಿಸುವಂತೆ ಒತ್ತಾಯ ಮಾಡ್ತಿದ್ದು ಕನ್ನಡಿಗರಿಂದಲೇ ಖ್ಯಾತಿ, ಹಣ ಗಳಿಸಿ ಇದೀಗ ಕನ್ನಡಿಗರ ವಿರುದ್ಧವೇ ಮಾತನಾಡಿರುವುದು ಖಂಡನೀಯ. ನಿರ್ಮಾಪಕರು ಯಾವುದೇ ಕನ್ನಡ ಚಿತ್ರದಲ್ಲಿ ಹಾಡು ಹಾಡಿಸಬಾರದು ಎಂದು ಕರ್ನಾಟಕ ರಕ್ಷಣಾ ವೇದಿಕೆಯ ಅಧ್ಯಕ್ಷ ನಾರಾಯಣಗೌಡರು ಆಗ್ರಹ ಮಾಡಿದ್ದಾರೆ.

ಇದನ್ನೂ ಓದಿ : KSRTC ಬಸ್-ಆಟೋ ನಡುವೆ ಭೀಕರ ಅಪಘಾತ – ಒಂದೇ ಕುಟುಂಬದ ಮೂವರು ಸಾವು!

Btv Kannada
Author: Btv Kannada

Read More

Read More