ಮಂಗಳೂರು : ಹಿಂದೂ ಕಾರ್ಯಕರ್ತ ಸುಹಾಸ್ ಶೆಟ್ಟಿ ಹತ್ಯೆಯ ಭೀಕರ ದೃಶ್ಯ ಸಿಸಿಟಿವಿ ಹಾಗೂ ಸ್ಥಳೀಯರ ಮೊಬೈಲ್ ಕ್ಯಾಮರಾಗಳಲ್ಲಿ ಸೆರೆಯಾಗಿತ್ತು. ಮಂಗಳೂರಿನ ಪೊಲೀಸರು ಕೂಡ ಇದೇ ವಿಡಿಯೋಗಳನ್ನು ಆಧರಿಸಿ ಆರೋಪಿಗಳ ಬೆನ್ನುಬಿದ್ದಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು 8 ಮಂದಿಯನ್ನ ಅರೆಸ್ಟ್ ಮಾಡಿದ್ದಾರೆ. ಬಂಧನ ಬೆನ್ನಲ್ಲೇ ಪ್ರಾಥಮಿಕ ತನಿಖೆಯಲ್ಲಿ ತಿಳಿದುಕೊಂಡ ಮಾಹಿತಿಯನ್ನು ಮಂಗಳೂರು ಪೊಲೀಸರು ಬಹಿರಂಗಪಡಿಸಿದ್ದಾರೆ.
ಮಂಗಳೂರು ಪೊಲೀಸ್ ಕಮಿಷನರ್ ಅನುಪಮ್ ಅಗರ್ವಾಲ್ ಅವರು ಈ ಬಗ್ಗೆ ಸುದ್ದಿಗೋಷ್ಟಿ ನಡೆಸಿ ಮಾಹಿತಿ ನೀಡಿದ್ದಾರೆ. ಕೊಲೆ ಪ್ರಕರಣದಲ್ಲಿ ಬಂಧನಕ್ಕೊಳಗಾದವರನ್ನು ಅಬ್ದುಲ್ ಸಫ್ವಾನ್, ನಿಯಾಝ್, ಮಹಮ್ಮದ್ ಮುಸಮ್ಮೀರ್, ಕಲಂದರ್ ಶಾಫಿ, ಆದಿಲ್ ಮೆಹರೂಫ್, ರಂಜಿತ್, ಮಹಮ್ಮದ್ ರಿಝ್ವಾನ್ ಹಾಗೂ ನಾಗರಾಜ್ ಎಂದು ಗುರುತಿಸಲಾಗಿದೆ. ಹತ್ಯೆಯಲ್ಲಿ 10 ಜನ ಭಾಗಿಯಾಗಿದ್ದಾರೆ, ಇನ್ನೂ ಇಬ್ಬರ ಬಂಧನ ಬಾಕಿ ಇದೆ. ಈ ಪ್ರಕರಣವನ್ನು ರಿವೇಂಜ್ ಎಂದು ಹೇಳೊಕೆ ಈಗ ಆಗಲ್ಲ. ಸಫ್ವಾನ್ಗೂ ಸುಹಾಸ್ನಿಂದ ಕೊಲೆಯಾಗುವ ಆತಂಕ ಇತ್ತು. ಹಾಗಾಗಿ ಆದಿಲ್ ಸಂಪರ್ಕ ಪಡೆದು ಕೊಲೆ ಮಾಡಲಾಗಿದೆ ಎಂದು ಹೇಳಿದ್ದಾರೆ.
ಆರು ಜನ ಸೇರಿ ಸುಹಾಸ್ ಶೆಟ್ಟಿ ಮೇಲೆ ಮಾರಕಾಸ್ತ್ರದಿಂದ ಹಲ್ಲೆ ಮಾಡಿದ್ದಾರೆ. ಹತ್ಯೆಯ ಪ್ರಮುಖ ಆರೋಪಿ ಸಫ್ವಾನ್ ಮೇಲೆ 2023ರಲ್ಲಿ ಮೇಲೆ ಮಾರಣಾಂತಿಕ ಹಲ್ಲೆ ಆಗಿತ್ತು. ಪ್ರಶಾಂತ್ ಹಾಗೂ ಧನರಾಜ್ ಹಲ್ಲೆ ಮಾಡಿದ್ದರು. ಈ ಇಬ್ಬರು ಸುಹಾಸ್ ಶೆಟ್ಟಿ ಸ್ನೇಹಿತರು, ಇದೇ ಕಾರಣಕ್ಕೆ ಆತನಿಗೆ ಕೊಲೆ ಆತಂಕ ಇತ್ತು. ಈ ಹಿನ್ನೆಲೆಯಲ್ಲಿ ಸುಹಾಸ್ನನ್ನು ಕೊಲೆ ಮಾಡಲು ತೀರ್ಮಾನ ಮಾಡಿದ್ದ. ಇದೇ ವೇಳೆ ಹತ್ಯೆಯಾಗಿದ್ದ ಫಾಝೀಲ್ ತಮ್ಮನನ್ನು ಸಂಪರ್ಕಿಸಿ ಸುಹಾಸ್ ಕೊಲೆ ಮಾಡೋಕೆ ಸಂಚು ರೂಪಿಸಿದ್ದರು ಎಂದು ತಿಳಿಸಿದ್ದಾರೆ.
ಸುಹಾಸ್ ಹತ್ಯೆಗೆ 5 ಲಕ್ಷ ರೂ. ನೀಡೋದಾಗಿ ಫಾಜಿಲ್ನ ತಮ್ಮ ಆದಿಲ್ ಸಫ್ವಾನ್ ತಂಡಕ್ಕೆ ಹೇಳಿರುತ್ತಾನೆ. ಅದರಲ್ಲಿ 3 ಲಕ್ಷ ರೂ. ಅಡ್ವಾನ್ಸ್ ನೀಡಿರುತ್ತಾನೆ. ಬಳಿಕ ಒಂದು ತಂಡವನ್ನು ಹತ್ಯೆಗಾಗಿ ಸಫ್ವಾನ್ ರೆಡಿ ಮಾಡ್ತಾನೆ. ನಿಯಾಜ್ನ ಇಬ್ಬರು ಸ್ನೇಹಿತರು ನಾಗಾರಾಜ್ ಮತ್ತು ರಂಜಿತ್ನನ್ನು ಸಂಪರ್ಕಿಸಿ, ಇಬ್ಬರು ಸಫ್ವಾನ್ ಮನೆಯಲ್ಲಿ ಎರಡು ದಿನಗಳ ಕಾಲ ಇದ್ದು, ಮೇ 1 ರಂದು ಸುಹಾಸ್ ಚಲನವಲನಗಳನ್ನು ಗಮನಿಸಿ ಕೊಲೆ ಮಾಡಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ : ಸುಹಾಸ್ ಶೆಟ್ಟಿ ಕೊಲೆಯಲ್ಲಿ ಯಾರೆಲ್ಲ ಶಾಮೀಲು? ಹತ್ಯೆ ಮಾಡಿದ್ದೇಕೆ? – ಇಲ್ಲಿದೆ ಇಂಚಿಂಚೂ ಮಾಹಿತಿ!
