ಗುಡಿಬಂಡೆ : ಪಟ್ಟಣದ ಅಂಬೇಡ್ಕರ್ ವೃತ್ತದಲ್ಲಿ ಪುತ್ಥಳಿ ನಿರ್ಮಾಣದ ವಿಚಾರವಾಗಿ ಒಕ್ಕಲಿಗರು ಮತ್ತು ಬಲಿಜ ಸಮುದಾಯ ನಡುವೆ ಇಂದು ತೀವ್ರ ಜಟಾಪಟಿ ನಡೆಯಿತು. ಎರಡೂ ಸಮುದಾಯಗಳ ಮುಖಂಡರು ಪ್ರತ್ಯೇಕವಾಗಿ ಪ್ರತಿಭಟನೆ ನಡೆಸಿದರು.
ಪರಿಸ್ಥಿತಿ ನಿಯಂತ್ರಿಸಲು ಖುದ್ದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕುಶಾಲ್ ಚೌಕ್ಷೆ ಅವರೇ ಲಾಠಿ ಹಿಡಿದು ರಸ್ತೆಗೆ ಇಳಿದರು. ಪ್ರತಿಭಟನೆ ನಡೆಸಿದವರನ್ನು SP ಅವರೇ ಎಳೆದು ಸ್ಥಳದಿಂದ ಕದಲಿಸಿದರು. ಗುಡಿಬಂಡೆಯ ಅಂಬೇಡ್ಕರ್ ವೃತ್ತದಲ್ಲಿ ಎರಡು ಗುಂಟೆ ಸರ್ಕಾರಿ ಕರಾಬ್ ಇದ್ದು, ಇಲ್ಲಿ ಪಟ್ಟಣ ಪಂಚಾಯಿತಿಯಿಂದ ₹10 ಲಕ್ಷ ವ್ಯಯಿಸಿ ಉದ್ಯಾನ ನಿರ್ಮಿಸಲಾಗಿದೆ. 2022ರಲ್ಲಿ ನಡೆದ ಕೆಂಪೇಗೌಡ ಜಯಂತಿಯ ಕಾರ್ಯಕ್ರಮದ ಉದ್ಯಾನದಲ್ಲಿ ಅವಳಿ ಬೈರೇಗೌಡ ಅವರ ವಿಗ್ರಹ ಪ್ರತಿಷ್ಠಾಪಿಸಲು ತೀರ್ಮಾನಿಸಲಾಗಿತ್ತು.
ಇತ್ತೀಚೆಗೆ ನಡೆದ ಕೈವಾರ ತಾತಯ್ಯ ಅವರ ಜಯಂತಿಯಲ್ಲಿ ಬಲಿಜ ಸಮುದಾಯದ ಮುಖಂಡರು ಈ ಸರ್ಕಾರಿ ಜಾಗದಲ್ಲಿ ಕೈವಾರ ತಾತಯ್ಯ ವಿಗ್ರಹ ಪ್ರತಿಷ್ಠಾಪಿಸಲು ನಿರ್ಧರಿಸಿದ್ದರು. ಪಟ್ಟಣ ಪಂಚಾಯಿತಿ ಸಹ ಕೈವಾರ ತಾತಯ್ಯ ಅವರ ವಿಗ್ರಹ ಪ್ರತಿಷ್ಠಾಪಿಸಲು ನಿರ್ಣಯ ಸಹ ಕೈಗೊಂಡಿತ್ತು.
ಈ ವಿಚಾರವಾಗಿ ಎರಡೂ ಸಮುದಾಯಗಳ ನಡುವೆ ತಿಕ್ಕಾಟ ಆರಂಭವಾಗಿತ್ತು. ಇಂದು ಬಲಿಜ ಸಮುದಾಯವರು ಕೈವಾರ ತಾತಯ್ಯ ಅವರ ಪುತ್ಥಳಿ ನಿರ್ಮಾಣಕ್ಕೆ ಭೂಮಿ ನೆರವೇರಿಸಿದರು. ಇದಕ್ಕೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ ಒಕ್ಕಲಿಗ ಸಮುದಾಯದವರು ಉದ್ಯಾನದ ಮುಂಭಾಗದಲ್ಲಿ ಪ್ರತಿಭಟಿಸಿದರು. ಸ್ಥಳಕ್ಕೆ ಬಂದ ಸರ್ಕಲ್ ಇನ್ಸ್ಪೆಕ್ಟರ್ ನಯಾಜ್ ಬೇಗ ಮತ್ತು ತಹಶೀಲ್ದಾರ್ ಸಿಗ್ನತುಲ್ಲ ಮುಖಂಡರ ಮನವೊಲಿಸಲು ಪ್ರಯತ್ನಿಸಿ ವಿಫಲರಾದರು. ನಂತರ ಸ್ಥಳಕ್ಕೆ ಬಂದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕುಶಾಲ್ ಚೌಕ್ಸೆ ಪ್ರತಿಭಟನಾಕಾರರನ್ನು ಚದುರಿಸಿದರು.
ಇದನ್ನೂ ಓದಿ : ಬನಶಂಕರಿ ದೇವಸ್ಥಾನದಲ್ಲಿ “ಸಿಂಧೂರಿ” ಚಿತ್ರಕ್ಕೆ ಚಾಲನೆ.. ಮುಖ್ಯಪಾತ್ರದಲ್ಲಿ ರಾಗಿಣಿ ದ್ವಿವೇದಿ-ಧರ್ಮ ಕೀರ್ತಿರಾಜ್ ನಟನೆ!
