ಹುಬ್ಬಳ್ಳಿಯಲ್ಲಿ ಹಮ್ಮಿಕೊಂಡಿರುವ ‘ಕೈ’ ಪ್ರತಿಭಟನೆ ಯಾವ ಪುರುಷಾರ್ಥಕ್ಕೆ? – ಸಿಎಂ ಸಿದ್ದುಗೆ ಸರಣಿ ಪ್ರಶ್ನೆ ಮೂಲಕ ಜೋಶಿ ಕೌಂಟರ್!

ಬೆಂಗಳೂರು : ಕೇಂದ್ರ ಸರ್ಕಾರದ ಬೆಲೆ ಏರಿಕೆಯನ್ನು ಖಂಡಿಸಿ ಹುಬ್ಬಳ್ಳಿಯಲ್ಲಿ ನಾಳೆ ಕೇಂದ್ರ ಸರ್ಕಾರದ ವಿರುದ್ಧ ಕಾಂಗ್ರೆಸ್ ಪ್ರತಿಭಟನೆ ನಡೆಸಲಿದೆ. ಈ ಹಿನ್ನೆಲೆಯಲ್ಲಿ ಸಿಎಂ ಸಿದ್ದರಾಮಯ್ಯ ಅವರಿಗೆ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ 5 ಪ್ರಶ್ನೆಗಳನ್ನು ಕೇಳಿದ್ದಾರೆ. ಈ ಮೂಲಕ ರಾಜ್ಯ ಸರ್ಕಾರವನ್ನು ಹಾಗೂ ಕಾಂಗ್ರೆಸ್ ಪಕ್ಷವನ್ನು ಅವರು ತರಾಟೆಗೆ ತೆಗೆದುಕೊಂಡಿದ್ದಾರೆ.

ನಾಳೆ ನೀವು ಹುಬ್ಬಳ್ಳಿಯಲ್ಲಿ ಹಮ್ಮಿಕೊಂಡಿರುವ ಪ್ರತಿಭಟನೆ ಯಾವ ಪುರುಷಾರ್ಥಕ್ಕೆ? ಜನಸಾಮಾನ್ಯರ ಮೇಲೆ 48 ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ಬಿದ್ದಿರುವ ಬರೆ ಮರೆಸುವ ಪ್ರತಿಭಟನೆಯೇ? ಸಂವಿಧಾನ ವಿರೋಧಿಯಾಗಿ ನಡೆದುಕೊಳ್ಳುತ್ತಿರುವ ಕಾಂಗ್ರೆಸ್ ಸರ್ಕಾರದ ವಿರುದ್ಧವೇ ಈ ಪ್ರತಿಭಟನೆಯು? ರಾಜ್ಯದ ಆರ್ಥಿಕ ದುರ್ವ್ಯವಸ್ಥೆಯನ್ನು ಜನರಿಂದ ಮರೆಮಾಚಲು ಈ ಪ್ರತಿಭಟನೆ? ಆಡಳಿತದಲ್ಲಿ ಭ್ರಷ್ಟಾಚಾರ ತುಂಬಿ, ಅಭಿವೃಧಿಯೆ ಕಾಣದೇ ರಾಜ್ಯವನ್ನು ಅಧೋಗತಿಗೆ ತಳ್ಳಿದ ಪ್ರತೀಕವೇ ಈ ಪ್ರತಿಭಟನೆ? ಆರ್ಥಿಕವಾಗಿ ಸದೃಢವಾಗಿದ್ದ ರಾಜ್ಯವನ್ನು ಇಂದು ₹5.5 ಲಕ್ಷ ಕೋಟಿ ಸಾಲದ ಹೊರೆಯಲ್ಲಿ ದಬ್ಬಿರುವ ಸಾಧನೆಯ ಪ್ರದರ್ಶನವೇ ಈ ಪ್ರತಿಭಟನೆ? ಎಂದು ಪ್ರಶ್ನಿಸಿದ್ದಾರೆ.

ರಾಜ್ಯ ಸರ್ಕಾರ 48 ಅಗತ್ಯ ವಸ್ತುಗಳ ಬೆಲೆ ಹೆಚ್ಚಿಸಿದೆ ಜನಸಾಮಾನ್ಯರನ್ನು ಕಬ್ಬಿನಂತೆ ಹಿಂಡುತ್ತಿರುವುದು ಕಾಂಗ್ರೆಸ್ ಸರ್ಕಾರ. ಈಗ ಈ ಪ್ರತಿಭಟನೆ ಯಾರ ವಿರುದ್ಧ? ಎಂದು ಪ್ರಶ್ನಿಸಿದ್ದಾರೆ. ಮೂರು ಬಾರಿ ಹಾಲಿನ ದರ ₹9 ಏರಿಕೆ; ಮೊದಲು ₹2, ಎರಡನೇ ಬಾರಿ ₹3 , ಮೂರನೇ ಬಾರಿ ₹4 ಹೆಚ್ಚಿಸಿ ರೈತರಿಗೆ ಕೊಟ್ಟದ್ದು ಚೊಂಬು ಎಂದು ಕಿಡಿಕಾರಿದ್ದಾರೆ. ಬಸ್ ಪ್ರಯಾಣ ದರ ಶೇ.20ರಷ್ಟು ಅಧಿಕಗೊಳಿಸಿ ಜನರಿಗೆ ಕಾಂಗ್ರೆಸ್ ಸರ್ಕಾರ ದುಬಾರಿಯಾಗಿದೆ. ₹ 10 ಇದ್ದ ಪಹಣಿ ಶುಲ್ಕ ಒಮ್ಮೆಲೇ ₹25ಗೆ ಏರಿಕೆ ಮಾಡಿ ರೈತ ವಿರೋಧಿ ನಡೆಯಾಗಿದೆ. ರಾಜಧಾನಿಯಲ್ಲಿ ಕುಡಿಯುವ ನೀರಿನ ದರ ಬರೋಬ್ಬರಿ ₹ 200ರವರೆಗೆ ಹೆಚ್ಚಳ ಮಾಡಲಾಗಿದೆ. ವಿದ್ಯುತ್ ಪ್ರತಿ ಯುನಿಟ್ 36 ಪೈಸೆ ಹೆಚ್ಚಿಸಿ ಜನರಿಗೆ ಕರೆಂಟ್ ಶಾಕ್ ಕೊಟ್ಟಿದೆ. ₹ 20 ಇದ್ದ ಬಾಂಡ್ ಪೇಪರ್ ₹ 100ಗೆ ಏರಿಕೆ; ಮುದ್ರಾಂಕ ಶುಲ್ಕ ₹ 500 ಕ್ಕೇ ಹೆಚ್ಚಳ ಮಾಡಲಾಗಿದೆ ಎಂದು ವಾಗ್ದಾಳಿ ನಡೆಸಿದ್ದಾರೆ.

ಯಾರ ವಿರುದ್ಧ ನಿಮ್ಮ ಪ್ರತಿಭಟನೆ ? ಭಾರತದ ಇತಿಹಾಸದಲ್ಲಿ ಸಂವಿಧಾನದ ವಿಧಿ 356 ಅನ್ನು 125ಕ್ಕೂ ಹೆಚ್ಚು ಬಾರಿ ಕಾಂಗ್ರೆಸ್ ಪಕ್ಷ ದುರುಪಯೋಗಿಸಿಕೊಂಡಿದೆ. ಇಂದಿರಾ ಗಾಂಧಿಯವರ ಕಾಲದಲ್ಲಿ 1966 ರಿಂದ 1977 ರವರೆಗೆ ಸುಮಾರು 50 ಬಾರಿ ಈ ವಿಧಿಯನ್ನು ಬಳಸಿದ್ದಾರೆ. ಬಹುತೇಕ ಬೇರೆ ಪಕ್ಷದ ರಾಜ್ಯ ಸರ್ಕಾರಗಳನ್ನು ಕೆಡವಿದ್ದಾರೆ. ಸಂವಿಧಾನ ಶಿಲ್ಪಿ ಬಾಬಾ ಸಾಹೇಬರಿಗೆ 1954 ಬಂಡಾರ ಲೋಕಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಸೋಲಿಸಿ ಅವಮಾನ. ನಾರಾಯಣ ಎಸ್ ಕಜೋರ್ಲ್ಕರ್ ಗೆ 1970ರಲ್ಲಿ ಬಾಬಾ ಸಾಹೇಬರನ್ನು ಅವಮಾನಿಸಲೆಂದೇ ಪದ್ಮಭೂಷಣ ಪ್ರಶಸ್ತಿ. ಬಾಬಾ ಸಾಹೇಬರನ್ನು ಭಾರತ ರತ್ನ ಪುರಸ್ಕಾರಕ್ಕೆ ಕಾಂಗ್ರೆಸ್ ಪರಿಗಣಿಸಲೇ ಇಲ್ಲ. ಬಿಜೆಪಿ ಸರ್ಕಾರದ ನೇತೃತ್ವದಲ್ಲಿ ಅಂಬೇಡ್ಕರ್ ರವರಿಗೆ 1990 ರಲ್ಲಿ ಭಾರತ್ ರತ್ನ.

ಒಂದು ಸಮುದಾಯಕ್ಕೆ ಸಂವಿಧಾನವನ್ನು ಬದಲಾಯಿಸುತ್ತೇವೆ ಎಂದಿದ್ದು ಉಪ ಮುಖ್ಯಮಂತ್ರಿಗಳು. ಸಂವಿಧಾನದ ಆಶಯ ವಿರೋಧಿಸಿ ಒಂದು ಸಮುದಾಯಕ್ಕಾಗಿ ಮೀಸಲಾತಿ. ಉಪ ಮುಖ್ಯಮಂತ್ರಿಗಳ ಧಮ್ಕಿ ರಾಜಕಾರಣವನ್ನು ಏನೆಂದು ಹೇಳಬೇಕು. ವಿದೇಶಿ ನೆಲದಲ್ಲಿ ಭಾರತದ ವಿರುದ್ಧ ಮಾತನಾಡುವ ಕಾಂಗ್ರೆಸ್ ಹಾಗೂ ಅವರ ಪಕ್ಷದ ನಾಯಕರು ಸಂವಿಧಾನಕ್ಕೆ ಅಗೌರವ ತೋರುತಿಲ್ಲವೇ. ಪಾಕಿಸ್ತಾನದ ವಿರುದ್ದ ಯುದ್ದದ ವಿಚಾರವಾಗಿ ಮುಖ್ಯಮಂತ್ರಿ ಹಾಗೂ ಅವರ ಸಂಪುಟದ ಸಚಿವರುಗಳು ಪಾಕಿಸ್ತಾನ ಮಾತನಾಡುವ ರೀತಿಯಲ್ಲೇ ಮಾತನಾಡುತ್ತಾರೆ ಎಂದು ಪ್ರಹ್ಲಾದ್ ಜೋಶಿ ಕಿಡಿ ಕಾರಿದ್ದಾರೆ.

 

ಇದನ್ನೂ ಓದಿ : BBMPಯ ನೂತನ ಆಡಳಿತಾಧಿಕಾರಿಯಾಗಿ ತುಷಾರ್ ಗಿರಿನಾಥ್ ಅಧಿಕಾರ ಸ್ವೀಕಾರ!

Btv Kannada
Author: Btv Kannada

Read More

Read More