ಏಕತೆ, ಒಗ್ಗಟ್ಟು ಅತ್ಯಗತ್ಯ – ಪಹಲ್ಗಾಮ್ ದಾಳಿಯ ಬಗ್ಗೆ ತುರ್ತು ಅಧಿವೇಶನ ಕರೆಯಲು ಪ್ರಧಾನಿ ಮೋದಿಗೆ ರಾಹುಲ್​ ಗಾಂಧಿ ಪತ್ರ!

ನವದೆಹಲಿ : ಪಹಲ್ಗಾಮ್​ ಭಯೋತ್ಪಾದಕ ದಾಳಿಯ ಕುರಿತು ತುರ್ತಾಗಿ ಸಂಸತ್ತಿನ ಉಭಯ ಸದನಗಳ ವಿಶೇಷ ಅಧಿವೇಶನ ಕರೆಯುವಂತೆ ಕೋರಿ ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದಾರೆ.

ಸಂಸತ್ತಿನ ಉಭಯ ಸದನಗಳ ವಿಶೇಷ ಅಧಿವೇಶನವನ್ನು ಆದಷ್ಟು ಬೇಗ ಕರೆಯುವಂತೆ ಪ್ರಧಾನಿ ಮೋದಿಗೆ ಪತ್ರ ಬರೆದಿರುವ ರಾಹುಲ್​ ಗಾಂಧಿಯವರು, ಈ ನಿರ್ಣಾಯಕ ಸಮಯದಲ್ಲಿ ಭಯೋತ್ಪಾದನೆಯ ವಿರುದ್ಧ ನಾವು ಯಾವಾಗಲೂ ಒಟ್ಟಾಗಿ ನಿಲ್ಲುತ್ತೇವೆ ಎಂದು ತೋರಿಸಬೇಕು ಅಂತಾ ಫೇಸ್​ಬುಕ್​ ಖಾತೆಯಲ್ಲಿ ಬರೆದುಕೊಂಡಿದ್ದಾರೆ.

2025, ಏಪ್ರಿಲ್ 22ರಂದು ಕಾಶ್ಮೀರದ  ಪಹಲ್ಗಾಮ್​ನಲ್ಲಿ ಅಮಾಯಕ ಪ್ರವಾಸಿಗರ ಮೇಲೆ ನಡೆದ ಕ್ರೂರ ಭಯೋತ್ಪಾದಕ ದಾಳಿಯನ್ನು ಎದುರಿಸುವ ನಮ್ಮ ಸಾಮೂಹಿಕ ಸಂಕಲ್ಪ ಮತ್ತು ಇಚ್ಛಾಶಕ್ತಿಯ ಪ್ರಬಲ ಪ್ರದರ್ಶನವಾಗಲಿದೆ. ಹೀಗಾಗಿ ಅಧಿವೇಶನವನ್ನು ಅದಕ್ಕೆ ತಕ್ಕಂತೆ ಕರೆಯಬೇಕಿದೆ ಎಂದು ನಾವು ಭಾವಿಸುತ್ತೇವೆ ಎಂದು ರಾಹುಲ್​ ಗಾಂಧಿ ಅವರು ಹೇಳಿದ್ದಾರೆ.

ಇನ್ನು ಅಮಾನವೀಯ ಭಯೋತ್ಪಾದಕ ದಾಳಿಯನ್ನು ಇಡೀ ಜಗತ್ತು ಖಂಡಿಸಿದೆ. ಏಪ್ರಿಲ್ 22ರಂದು ನಡೆದ ಈ ಕೃತ್ಯದಲ್ಲಿ 26 ಪ್ರವಾಸಿಗರು ಮೃತಪಟ್ಟರು. ಇದರಲ್ಲಿ ಪಾಕಿಸ್ತಾನ ಕೈವಾಡ ಇರುವುದರಿಂದ ಭಾರತ, ಪಾಕ್ ವಿರುದ್ಧ ಆಕ್ರೋಶ ಹೊರಹಾಕಿದೆ. ಅಲ್ಲದೆ, ರಾಜತಾಂತ್ರಿಕವಾಗಿ ಅನೇಕ ಕಠಿಣ ಕ್ರಮಗಳನ್ನು ಕೈಗೊಂಡಿದೆ. ಇತ್ತ ಪಾಕ್ ಕೂಡ ಭಾರತದ ವಿರುದ್ಧ ಕ್ರಮಗಳನ್ನು ಕೈಗೊಂಡಿದೆ. ಸದ್ಯ ಉಭಯ ದೇಶಗಳ ನಡುವಿನ ಪರಿಸ್ಥಿತಿ ಉದ್ವಿಗ್ನಗೊಂಡಿದ್ದು, ಯುದ್ಧದ ಭೀತಿ ಆವರಿಸಿದೆ. ಈ ಸಂದರ್ಭದಲ್ಲಿ ಏಕತೆಯನ್ನು ಪ್ರದರ್ಶಿಸಬೇಕಾಗಿರುವುದರಿಂದ ತುರ್ತು ಅಧಿವೇಶನ ಕರೆಯಲು ಪ್ರಧಾನಿ ಮೋದಿಗೆ ರಾಹುಲ್​ ಗಾಂಧಿ ಪತ್ರದ ಮೂಲಕ ಕೋರಿದ್ದಾರೆ. 

ಇದನ್ನೂ ಓದಿ : ದಕ್ಷ, ಪ್ರಾಮಾಣಿಕ IPS ಡಾ. ಎಂ.ಎ ಸಲೀಂ ನೂತನ DG-IGP ಆಗಿ ನೇಮಕ – ಕೆಲವೇ ಹೊತ್ತಲ್ಲಿ ಸಿಎಂ ಸಿದ್ದರಾಮಯ್ಯ ಅಧಿಕೃತ ಆದೇಶ!

Btv Kannada
Author: Btv Kannada

Read More

Read More