ಬೆಂಗಳೂರು : ರೈಲ್ವೆ ನೇಮಕಾತಿ ಮಂಡಳಿಯು ಇಲಾಖೆಯ ನರ್ಸಿಂಗ್ ಸೂಪರಿಂಟೆಂಡೆಂಟ್ ಪರೀಕ್ಷೆಯನ್ನು ಇದೇ 29ರಂದು ಹಮ್ಮಿಕೊಂಡಿದೆ. ಈ ಪರೀಕ್ಷೆಗೆ ಹಾಜರಾಗುವ ಅಭ್ಯರ್ಥಿಗಳು ಪರೀಕ್ಷಾ ಕೊಠಡಿಗೆ ತೆರಳುವಾಗ ಧಾರ್ಮಿಕ ಸಂಕೇತಗಳಾದ ಮಂಗಳಸೂತ್ರ, ಜನಿವಾರ ಮೊದಲಾವುಗಳನ್ನು ಧರಿಸುವಂತಿಲ್ಲ ಎಂದು ಪರೀಕ್ಷೆ ಕೊಠಡಿಯ ಪ್ರವೇಶ ಪತ್ರದಲ್ಲಿ ಉಲ್ಲೇಖಿಸಿರುವ ಮಾರ್ಗಸೂಚಿಯಲ್ಲಿ ಸೂಚನೆ ನೀಡಲಾಗಿದ್ದು, ಇದಕ್ಕೆ ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ವಿರೋಧ ವ್ಯಕ್ತಪಡಿಸಿದೆ.
ಈ ಕುರಿತು ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ಅಧ್ಯಕ್ಷರಾದ ಎಸ್. ರಘುನಾಥ್ ಅವರು ಕೇಂದ್ರ (ರೈಲ್ವೆ ಖಾತೆ ರಾಜ್ಯ) ಸಚಿವ ವಿ. ಸೋಮಣ್ಣ ಅವರಿಗೆ ಪತ್ರ ಬರೆದಿದ್ದಾರೆ. ‘ಮಂಗಳವಾರ ಬೆಳಗ್ಗೆ 9.00 ಗಂಟೆಗೆ ರೈಲ್ವೆ ಇಲಾಖೆಯ ನರ್ಸಿಂಗ್ ಸೂಪರಿಂಟೆಂಡೆಂಟ್ ಹುದ್ದೆಗೆ ಮಂಗಳೂರಿನ ಬೊಂದಲ್ ಬೆಸೆಂಟ್ ವಿದ್ಯಾಕೇಂದ್ರದಲ್ಲಿ ಪರೀಕ್ಷೆ ನಡೆಯಲಿದ್ದು, ಪರೀಕ್ಷೆಯನ್ನು ಬರೆಯುವವರು ಜನಿವಾರ ಮತ್ತು ಮಾಂಗಲ್ಯ ಸೂತ್ರವನ್ನು ತೆಗದಿಟ್ಟು ಪರೀಕ್ಷೆ ಬರೆಯಬೇಕೆಂದು ಪರೀಕ್ಷಾ ನಿಯಮಾವಳಿಯಲ್ಲಿ ಉಲ್ಲೇಖಿಸಲಾಗಿದೆ ಎಂದು ತಿಳಿದುಬಂದಿದೆ. ಇಂತಹ ನಿಯಮಾವಳಿಗಳು ಹಿಂದು ಧರ್ಮಕ್ಕೆ ಮತ್ತು ಬ್ರಾಹ್ಮಣರ ಪದ್ಧತಿಗಳು ಮತ್ತು ನಂಬಿಕೆಗೆ ವಿರುದ್ಧವಾಗಿದೆ ಮತ್ತು ಸಮಾಜದಲ್ಲಿ ಇಲ್ಲದ ಸಮಸ್ಯೆಯನ್ನು ಹುಟ್ಟುಹಾಕುವಂತಿದೆ.
ಕರ್ನಾಟಕ ರಾಜ್ಯದ ಸಿ.ಇ.ಟಿ ಪರೀಕ್ಷೆಯಲ್ಲಿ ಇದೆ ನಿಯಮಾವಳಿಯನ್ನು ಅಳವಡಿಸಿದ್ದು, ಪರೀಕ್ಷೆ ಬರೆಯುವ ವಿದ್ಯಾರ್ಥಿಗಳ ಜನಿವಾರವನ್ನು ತೆಗೆದು ಹಾಕಿದ್ದು ರಾಜ್ಯದೆಲ್ಲಡೆ ಪ್ರತಿಭಟನೆಗಳು ನಡೆದಿವೆ ಮತ್ತು ರಾಜ್ಯ ಉಚ್ಚ ನ್ಯಾಯಾ ಲಯದಲ್ಲಿ ಸಾರ್ವಜನಿಕ ಹಿತಾಸಕ್ತಿಯ ಅರ್ಜಿಯನ್ನು ಸಲ್ಲಿಸಲಾಗಿದೆ. ತತ್ಸಂಬಂಧವಾಗಿ ರಾಜ್ಯ ಸರ್ಕಾರಕ್ಕೆ ರಾಜ್ಯ ಉಚ್ಚ ನ್ಯಾಯಾಲಯ ಈಗಾಗಲೇ ನೋಟೀಸ್ ಕೂಡ ನೀಡಿದೆ.
ಆದ್ದರಿಂದ ದಯಮಾಡಿ ಸದರಿ ನಿಯಮಾವಳಿಯನ್ನು ಸರಿಪಡಿಸಿ ಜನಿವಾರ ಮತ್ತು ಮಾಂಗಲ್ಯ ಸೂತ್ರವನ್ನು ಧರಿಸಿಕೊಂಡು ಪರೀಕ್ಷೆ ಬರೆಯಲು ಅನುವು ಮಾಡಿಕೊಡಬೇಕೆಂದು ವಿನಂತಿಸುತ್ತೇವೆ. ಇಲ್ಲವಾದಲ್ಲಿ ಇಂತಹ ಧೋರಣೆಯನ್ನು ಖಂಡಿಸಿ ನ್ಯಾಯಕ್ಕಾಗಿ ಪ್ರತಿಭಟನೆ ಅನಿವಾರ್ಯವಾಗಿ ಮಾಡಬೇಕಾಗುತ್ತದೆ ಎಂದು ತಿಳಿಸುತ್ತಿದೇವೆ” ಎಂದು ಪತ್ರದ ಮೂಲಕ ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ಅಧ್ಯಕ್ಷರಾದ ಎಸ್. ರಘುನಾಥ್ ಅವರು ವಿ. ಸೋಮಣ್ಣನವರಿಗೆ ತಿಳಿಸಿದ್ದಾರೆ.
ಇದನ್ನೂ ಓದಿ : ಪಹಲ್ಗಾಮ್ ಉಗ್ರರ ದಾಳಿ ಪ್ರಕರಣ – ಮೃತ ಭರತ್ ಭೂಷಣ್ ಪತ್ನಿಯಿಂದ ಮಾಹಿತಿ ಪಡೆದ NIA!
