ಬೆಂಗಳೂರು : ಜಮ್ಮು-ಕಾಶ್ಮೀರದ ಪಹಲ್ಗಾಮ್ನಲ್ಲಿ ನಡೆದ ಉಗ್ರರ ದಾಳಿಯಲ್ಲಿ ಪ್ರಾಣತೆತ್ತ ಕನ್ನಡಿಗ, ಬೆಂಗಳೂರಿನ ಭರತ್ ಭೂಷಣ್ ಮನೆಗೆ ಶುಕ್ರವಾರ NIA ಟೀಂ (ರಾಷ್ಟ್ರೀಯ ತನಿಖಾ ದಳ) ಭೇಟಿ ನೀಡಿದೆ.
ಈಗಾಗಲೇ ಉಗ್ರರ ದಾಳಿ ಪ್ರಕರಣದ ತನಿಖೆಯನ್ನು ಚುರುಕುಗೊಳಿಸಿರುವ ರಾಷ್ಟ್ರೀಯ ತನಿಖಾ ದಳ, ಮತ್ತಿಕೆರೆಯ ಸುಂದರ್ ನಗರದಲ್ಲಿರುವ ಭರತ್ ಭೂಷಣ್ ಮನೆಗೆ ತೆರಳಿ ಸುಮಾರು 8 ಗಂಟೆಗಳ ಕಾಲ ಮೃತ ಭರತ್ ಪತ್ನಿ ಸುಜಾತರನ್ನ ವಿಚಾರಣೆ ನಡೆಸಿದ್ದಾರೆ. ಈ ವೇಳೆ ಉಗ್ರರ ದಾಳಿ ಸಂದರ್ಭದ ಕುರಿತ ಹಲವು ಮಾಹಿತಿಯನ್ನು ಸಂಗ್ರಹಿಸಲಾಗಿದೆ. ದಾಳಿ ನಡೆದ ಸಂದರ್ಭದಲ್ಲಿನ ಘಟನಾವಳಿಗಳು, ಕೃತ್ಯಕ್ಕೆ ಮುನ್ನ ಉಗ್ರರು ಏನು ಮಾತನಾಡಿದರು, ಅವರ ಮುಖಚಹರೆ ಮತ್ತಿತರ ವಿವರಗಳನ್ನ ಎನ್ಐಎ ಅಧಿಕಾರಿಗಳು ಕಲೆಹಾಕಿದ್ದಾರೆ.
ಪ್ರಕರಣ : ಏಪ್ರಿಲ್ 22ರಂದು ಜಮ್ಮು-ಕಾಶ್ಮೀರದ ಬೈಸರನ್ ಕಣಿವೆಯ ಪಹಲ್ಗಾಮ್ನಲ್ಲಿ ನಡೆದ ಭಯೋತ್ಪಾದಕ ದಾಳಿಯಲ್ಲಿ ಇಬ್ಬರು ಕನ್ನಡಿಗರು ಸೇರಿ 26 ಜನ ಅಮಾಯಕರು ಸಾವನ್ನಪ್ಪಿದರೆ, 20 ಜನ ಗಾಯಗೊಂಡಿದ್ದರು. ಪ್ರಕರಣದ ತನಿಖೆಯನ್ನ ಎನ್ಐಎಗೆ ವಹಿಸಿ ಕೇಂದ್ರ ಗೃಹ ಸಚಿವಾಲಯ ಆದೇಶಿಸಿತ್ತು. ತನಿಖೆ ಕೈಗೆತ್ತಿಕೊಂಡಿರುವ ಎನ್ಐಎ ಅಧಿಕಾರಿಗಳ ತಂಡ ಉಗ್ರ ಕೃತ್ಯ ನಡೆದ ಸ್ಥಳ, ಉಗ್ರರ ಪ್ರವೇಶ ಮತ್ತು ನಿರ್ಗಮನದ ಕುರುಹುಗಳ ಕುರಿತು ಈಗಾಗಲೇ ಪರಿಶೀಲನೆ ಆರಂಭಿಸಿದೆ.
ಇದನ್ನೂ ಓದಿ : ಪಾಕ್ ಮತ್ತೊಂದು ಶಾಕ್ – ಯುದ್ಧದ ಬಿಸಿಗೆ ಬೆದರಿ 600ಕ್ಕೂ ಹೆಚ್ಚು ಸೈನಿಕರು ಸಾಮೂಹಿಕ ರಾಜೀನಾಮೆ!
