ಚಿತ್ರದುರ್ಗ : ಲೋಕಾಯುಕ್ತ ಬಲೆಗೆ ಬಿದ್ದು ಬಂಧನಕ್ಕೊಳಗಾಗಿದ್ದ ಹೊಸದುರ್ಗ ಪುರಸಭೆ ಮುಖ್ಯಾಧಿಕಾರಿ ಜಿ.ವಿ ತಿಮ್ಮರಾಜು (40) ಶನಿವಾರ ಹೃದಯಾಘಾತದಿಂದ ಮೃತಪಟ್ಟಿದ್ದಾರೆ.
ನಗರದ ಕಾರಾಗೃಹದಲ್ಲಿದ್ದ ಅವರಿಗೆ ಶನಿವಾರ ಬೆಳಿಗ್ಗೆ 7.50ಕ್ಕೆ ಅವರಿಗೆ ಹೃದಯಾಘಾತವಾಗಿದೆ. ಆ ಕೂಡಲೇ ಅವರನ್ನು ಚಿಕಿತ್ಸೆಗಾಗಿ ಜಿಲ್ಲಾ ಆಸ್ಪತ್ರೆಗೆ ರವಾನಿಸಲಾಯಿತು. ಆದ್ರೆ ಚಿಕಿತ್ಸೆಗೆ ಸ್ಪಂದಿಸದೆ ಬೆಳಿಗ್ಗೆ 8.30ರ ಸುಮಾರಿಗೆ ಮೃತಪಟ್ಟಿದ್ದಾರೆ.
ಏ.21 ರಂದು ಮುಖ್ಯಾಧಿಕಾರಿ ಜಿ.ವಿ. ತಿಮ್ಮರಾಜು ಪುರಸಭೆ ಸದಸ್ಯ ಶಂಕರಪ್ಪ ಅವರಿಂದ ₹25 ಸಾವಿರ ಹಣ ಪಡೆಯುತ್ತಿದ್ದ ವೇಳೆ ಲೋಕಾಯುಕ್ತ ಪೋಲಿಸ್ ಅಧಿಕಾರಿಗಳು ದಾಳಿ ನಡೆಸಿ, ಬಂಧಿಸಿದ್ದರು.
ಜಿ.ವಿ ತಿಮ್ಮರಾಜು ಪರಿಸರ ಎಂಜಿನಿಯರ್ ಆಗಿ ಗೌರಿಬಿದನೂರು, ಚಿಕ್ಕಬಳ್ಳಾಪುರ, ಮಾಲೂರು, ಶಿಡ್ಲಘಟ್ಟದಲ್ಲಿ ಕಾರ್ಯನಿರ್ವಹಿಸಿದ್ದರು. 6 ವರ್ಷಗಳ ಕಾಲ ಹೊಸದುರ್ಗದ ಪುರಸಭೆಯಲ್ಲಿ ಪರಿಸರ ಎಂಜಿನಿಯರ್ ಆಗಿ ಕಾರ್ಯ ನಿರ್ವಹಿಸಿದ್ದರು. ಎರಡು ವರ್ಷಗಳಿಂದ ಮುಖ್ಯಾಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದರು.
ಇದನ್ನೂ ಓದಿ : ಪಹಲ್ಗಾಮ್ ಹತ್ಯಾಕಾಂಡದ ತನಿಖೆ NIA ಹೆಗಲಿಗೆ – ಕೇಂದ್ರ ಗೃಹ ಇಲಾಖೆಯಿಂದ ಆದೇಶ!
