ಬೆಂಗಳೂರು : ರಾಜ್ಯ ಪೊಲೀಸ್ ಮಹಾನಿರ್ದೇಶಕ ಅಲೋಕ್ ಮೋಹನ್ ಅವರ ಅಧಿಕಾರಾವಧಿ ನಾಲ್ಕು ತಿಂಗಳು ವಿಸ್ತರಣೆಯೇ ಅಥವಾ ಇಲ್ಲವೇ ಎಂಬ ಕುರಿತು ಸರ್ಕಾರ ನಿಲುವು ಪ್ರಕಟಿಸದೆ ಕುತೂಹಲ ಮೂಡಿಸಿದೆ.
ಇದೇ ತಿಂಗಳ 30ರಂದು ವಯೋಮಿತಿ ಅನ್ವಯ ಡಿಜಿ-ಐಜಿಪಿ ಅವರು ನಿವೃತ್ತರಾಗಬೇಕಿದೆ. ಆದರೆ ಸುಪ್ರೀಂ ಕೋರ್ಟ್ ಆದೇಶವನ್ನು ಮುಂದಿಟ್ಟು ನಾಲ್ಕು ತಿಂಗಳು ಅಧಿಕಾರ ವಿಸ್ತರಣೆಗೆ ಅವರು ಮನವಿ ಮಾಡಿದ್ದಾರೆ. ಆದರೆ ಡಿಜಿಪಿ ಅಧಿಕಾರ ವಿಸ್ತರಣೆ ಅಥವಾ ಹೊಸಬರ ನೇಮಕಾತಿ ಪ್ರಕ್ರಿಯೆ ಕುರಿತು ಸರ್ಕಾರ ಇನ್ನೂ ನಿರ್ಧಾರ ಪ್ರಕಟಿಸಿಲ್ಲ.
ಕೆಲವರು ಡಿಜಿಪಿ ಅಧಿಕಾರಾವಧಿ ಆಗಸ್ಟ್ ತಿಂಗಳವರೆಗೆ ವಿಸ್ತರಣೆಯಾಗಿದೆ ಎಂದರೆ, ಅಧಿಕಾರ ವಿಸ್ತರಣೆ ಪ್ರಸ್ತಾಪ ಸರ್ಕಾರದ ಮುಂದೆ ಇಲ್ಲ. ಹೀಗಾಗಿ ಹೊಸ ಡಿಜಿಪಿ ನೇಮಕವಾಗಬಹುದು ಎಂದು ಕೆಲ ಅಧಿಕಾರಿಗಳ ವಾದವಾಗಿದೆ.
ರಾಜ್ಯದಲ್ಲಿ ಡಿಜಿಪಿ-ಐಜಿ ಅವರ ಕಾಲಾವಧಿ ಕನಿಷ್ಠ ಎರಡು ವರ್ಷಗಳಿರಬೇಕು ಎಂದು ಸುಪ್ರೀಂಕೋರ್ಟ್ ಆದೇಶವಿದೆ. ಮೊದಲು ನಾಲ್ಕು ತಿಂಗಳು ಪ್ರಭಾರಿಯಾಗಿದ್ದ ಅಲೋಕ್ ಮೋಹನ್ ಅವರು, ನಂತರ ಕಾಯಂ ಡಿಜಿಪಿಯಾದರು. ನ್ಯಾಯಾಲಯದ ಆದೇಶದಂತೆ ತಮಗೆ 4 ತಿಂಗಳು ಅಧಿಕಾರಾವಧಿ ವಿಸ್ತರಿಸಬೇಕು ಎಂದು ಅವರು ಕೋರಿದ್ದಾರೆ.
ಸೋಮವಾರ ನಿರ್ಧಾರ ಸಾಧ್ಯತೆ : ಏ.30ರಂದು ಬಸವ ಜಯಂತಿಗೆ ಸರ್ಕಾರಿ ರಜೆ ಇದೆ. ಹೀಗಾಗಿ ಡಿಜಿಪಿ ಅಧಿಕಾರ ವಿಸ್ತರಣೆ ಸಂಬಂಧ ಸೋಮವಾರ ಸರ್ಕಾರ ತೀರ್ಮಾನಿಸುವ ಸಾಧ್ಯತೆಗಳಿವೆ. ಅಲ್ಲದೆ ನಿಯಮಾನುಸಾರ ನಿವೃತ್ತಿಗೆ ಒಂದು ವಾರ ಮುನ್ನ ಡಿಜಿಪಿ ಅವರಿಗೆ ಇಲಾಖೆಯು ಸೇವಾ ಕವಾಯತು (ಪರೇಡ್) ನೀಡಬೇಕಿದೆ. ಆದರೆ ಅಧಿಕಾರಾವಧಿ ವಿಸ್ತರಣೆ ಗೊಂದಲದಲ್ಲಿ ಪರೇಡ್ ಸಹ ನಿಗದಿಯಾಗಿಲ್ಲ. ಒಂದು ವೇಳೆ ಅಲೋಕ್ ಮೋಹನ್ ಅವರ ಅಧಿಕಾರಾವಧಿ ವಿಸ್ತರಣೆಯಾದರೆ ಹೊಸ ದಾಖಲೆ ಬರೆದಂತಾಗುತ್ತದೆ.
ಇದನ್ನೂ ಓದಿ : ಫ್ಯಾಕ್ಟರಿಯ ಮಹಿಳೆಯರ ಕಂಡ್ರೆ ‘ಜೀನಿ’ ಮಾಲೀಕನಿಗೆ ಪುಕ ಪುಕ – ರೇಪ್ ಕೇಸ್ ದಾಖಲಾಗ್ತಿದ್ದಂತೆ ತುಮಕೂರಿನಿಂದಲೇ ದಿಲೀಪ್ ಜೂಟ್!
