ಸರಕು ಸಾಗಣೆ ಮಾಡಲು 20 ಲಕ್ಷ ಲಂಚ – ರೆಡ್​ ಹ್ಯಾಂಡ್ ಆಗಿ​ ‘ಲೋಕಾ’ ಬಲೆಗೆ ಬಿದ್ದ ವಾಣಿಜ್ಯ ತೆರಿಗೆ ಇಲಾಖೆ ಅಧಿಕಾರಿ!

ಬೆಂಗಳೂರು : ಸರಕು ಸಾಗಣೆ ಮಾಡಲು ₹20 ಲಕ್ಷ ಲಂಚ ಸ್ವೀಕರಿಸುತ್ತಿದ್ದ ವೇಳೆ ವಾಣಿಜ್ಯ ತೆರಿಗೆ ಇಲಾಖೆ ಅಧಿಕಾರಿಯೊಬ್ಬರು ರೆಡ್​ಹ್ಯಾಂಡ್​ ಆಗಿ ಬೆಂಗಳೂರು ಗ್ರಾಮಾಂತರ ಲೋಕಾಯುಕ್ತ ಪೊಲೀಸರ ಬಲೆಗೆ ಸಿಕ್ಕಿಬಿದ್ದಿದ್ದಾರೆ.

ವಾಣಿಜ್ಯ ತೆರಿಗೆ ಪರಿವೀಕ್ಷಕ ಎಂ.ಆರ್. ನಿಜಾನಂದಮೂರ್ತಿ ಲೋಕಾಯುಕ್ತ ಬಲೆಗೆ ಬಿದ್ದ ಅಧಿಕಾರಿಯಾಗಿದ್ದಾರೆ. ಖಾಸಗಿ ವ್ಯಕ್ತಿ ಮನೋಜ್ ಎಂಬುವವರು ನೀಡಿದ ದೂರಿನ ಮೇರೆಗೆ ಕಾರ್ಯಾಚರಣೆ ಕೈಗೊಳ್ಳಲಾಗಿದೆ. ನಗರದ ನಾಗರಭಾವಿ ಬಳಿಯ ನಮ್ಮೂರ ತಿಂಡಿ ಹೊಟೇಲ್ ಬಳಿ ಮನೋಜ್ ಅವರಿಂದ ಆರೋಪಿ 20 ಲಕ್ಷ ಲಂಚ ಸ್ವೀಕರಿಸುತ್ತಿದ್ದ ವೇಳೆ ಕಾರ್ಯಾಚರಣೆ ನಡೆಸಿ ಬಂಧಿಸಲಾಗಿದೆ ಎಂದು ಲೋಕಾಯುಕ್ತ ಪೊಲೀಸರು ತಿಳಿಸಿದ್ದಾರೆ.

ವಾಣಿಜ್ಯ ತೆರಿಗೆ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಕೆಲವು ಅಧಿಕಾರಿಗಳು ಸರಕು ಸಾಗಾಣಿಕೆ ಕಂಪನಿಗಳ ಮಾಲೀಕರ ಕಡೆಯಿಂದ ಪ್ರತಿ ತಿಂಗಳು ಲಂಚದ ಹಣವನ್ನು ಪಡೆದುಕೊಂಡು, ದೆಹಲಿಯಿಂದ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೆದ್ದಾರಿ ಮಾರ್ಗವಾಗಿ ಪಾನ್ ಮಸಾಲವನ್ನು ಸಾಗಾಣಿಕೆ ಮಾಡಲು ಅನುಕೂಲ ಮಾಡಿಕೊಟ್ಟಿದ್ದರು. ಇದರಿಂದ ಪಾನ್ ಮಸಾಲ ಸರಕು ಸಾಗಾಣಿಕೆದಾರರಿಗೆ ಅಕ್ರಮವಾಗಿ ವ್ಯವಹಾರ ಮಾಡಲು ಅನುವು ಮಾಡಿಕೊಡಲಾಗಿತ್ತು ಎಂದು ಹೇಳಿದ್ದಾರೆ.

ಇಂತಹ ಘಟನೆಗಳಿಂದಾಗಿ ರಾಜ್ಯ ಸರ್ಕಾರದ ಬೊಕ್ಕಸಕ್ಕೆ ಕೋಟ್ಯಂತರ ರುಪಾಯಿ ನಷ್ಟ ಉಂಟು ಮಾಡುತ್ತಿದ್ದರು. ಕಾನೂನನ್ನು ಪಾಲಿಸದೆ ಖಾಸಗಿ ಕಂಪನಿ ಹಾಗೂ ಖಾಸಗಿ ಜನರಿಗೆ ಕಾನೂನು ಬಾಹಿರ ಲಾಭ ಮಾಡಿಕೊಡುವ ಸಲುವಾಗಿ ಲಂಚದ ಹಣ ವನ್ನು ಪಡೆದುಕೊಂಡು ಸರ್ಕಾರಕ್ಕೆ ವಂಚನೆಯನ್ನು ಮಾಡಲಾಗುತ್ತಿದ್ದು, ಸಾಗಾಣಿಕೆದಾರರ ವೈಯಕ್ತಿಕ ಹಿತಾಸಕ್ತಿಯನ್ನು ಕಾಪಾಡಲು ಅನುಕೂಲವನ್ನು ಮಾಡಿಕೊಡಲಾಗುತ್ತಿತ್ತು. ಈ ಬಗ್ಗೆ ದೂರು ಬಂದ ಹಿನ್ನೆಲೆಯಲ್ಲಿ ಕಾರ್ಯಾಚರಣೆ ಕೈಗೊಳ್ಳಲಾಗಿದೆ ಎಂದಿದ್ದಾರೆ.

ಇದನ್ನೂ ಓದಿ : ಇನ್ಮುಂದೆ ಫ್ಲೆಕ್ಸ್, ಬ್ಯಾನರ್, ಕಟೌಟ್​ನಲ್ಲಿರುವವರ ಮೇಲೂ ಕ್ರಿಮಿನಲ್ ಕೇಸ್.. ದಂಡ ವಸೂಲಿ – BBMPಯಿಂದ ಕಟ್ಟುನಿಟ್ಟಿನ ನಿಯಮ ಜಾರಿ!

Btv Kannada
Author: Btv Kannada

Read More

Read More