ಮಾದಪ್ಪನ ಸನ್ನಿಧಿ ಗಡಿ ಜಿಲ್ಲೆ ಚಾಮರಾಜನಗರದಲ್ಲಿ ಇತಿಹಾಸದಲ್ಲೇ ಇದೇ ಮೊದಲ ಬಾರಿಗೆ ಸಚಿವ ಸಂಪುಟ ಸಭೆ ನಡೆದಿದೆ. ರಾಜಧಾನಿ ಬೆಂಗಳೂರು ಹೊರತುಪಡಿಸಿ ಕಲಬುರಗಿ ಹಾಗೂ ಚಾಮರಾಜನಗರದಲ್ಲಿ ಕ್ಯಾಬಿನೆಟ್ ಮೀಟಿಂಗ್ ನಡೆಸುವ ಮೂಲಕ ರಾಜ್ಯ ಸರ್ಕಾರ ಹಿಂದುಳಿದ ಪ್ರದೇಶಗಳ ಅಭಿವೃದ್ಧಿಗೂ ಪಣ ತೊಟ್ಟಿದೆ.

ಇಂದು ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ಹನೂರು ತಾಲ್ಲೂಕಿನ ಮಲೆ ಮಹದೇಶ್ವರ ಬೆಟ್ಟದಲ್ಲಿ ಸಚಿವ ಸಂಪುಟ ಸಭೆ ಯಶಸ್ವಿಯಾಗಿ ನಡೆದಿದೆ. ಜೇನುಮಲೆ ಹಾಗೂ ವಜ್ರಮಲೆ ಅತಿಥಿ ಗೃಹಗಳ ಎದುರಿನ ಖಾಲಿ ಜಾಗದಲ್ಲಿ ಹಾಕಿದ್ದ ಜರ್ಮನ್ ಟೆಂಟ್ನಲ್ಲಿ ಸಚಿವ ಸಂಪುಟ ಸಭೆ ನಡೆಯಿತು. ಕ್ಯಾಬಿನೆಟ್ ಮೀಟಿಂಗ್ನಲ್ಲಿ ಡಿಸಿಎಂ ಡಿ.ಕೆ. ಶಿವಕುಮಾರ್, ಗೃಹ ಸಚಿವ ಡಾ.ಜಿ.ಪರಮೇಶ್ವರ್, ಸಚಿವರಾದ ಹೆಚ್ಸಿ ಮಹದೇವಪ್ಪ, ಜಮೀರ್ ಅಹಮದ್, ಕೆ.ಹೆಚ್ ಮುನಿಯಪ್ಪ, ಹೆಚ್.ಕೆ.ಪಾಟೀಲ್, ಲಕ್ಷ್ಮೀ ಹೆಬ್ಬಾಳ್ಕರ್, ಸತೀಶ್ ಜಾರಕಿಹೊಳಿ ಸೇರಿ ಹಲವು ಸಚಿವರು ಹಿರಿಯ ಅಧಿಕಾರಿಗಳು ಭಾಗಿಯಾಗಿದ್ದರು.

ಮಲೆ ಮಹದೇಶ್ವರ ಬೆಟ್ಟದಲ್ಲಿ ನಡೆದ ಸಚಿವ ಸಂಪುಟ ಸಭೆಯ ಬಳಿಕ ಸುದ್ದಿಗೋಷ್ಠಿ ನಡೆಸಿದ ಸಿಎಂ ಸಿದ್ದರಾಮಯ್ಯ ಅವರು ಸಂಪುಟ ಸಭೆಯಲ್ಲಿ ಕೈಗೊಂಡ ನಿರ್ಣಯಗಳ ಬಗ್ಗೆ ಮಾಹಿತಿ ನೀಡಿದ್ರು. ಚಾಮರಾಜನಗರ ಹಾಗೂ ಸಿದ್ದರಾಮಯ್ಯ ತವರು ಜಿಲ್ಲೆ ಮೈಸೂರಿಗೆ ಸರ್ಕಾರದಿಂದ ಭರ್ಜರಿ ಗಿಫ್ಟ್ ಸಿಕ್ಕಿದೆ.

ಕಲಬುರಗಿ ವಿಭಾಗದ ಕ್ಯಾಬಿನೆಟ್ ಸಭೆ ಬಳಿಕ ಇಂದು ಮೈಸೂರು ವಿಭಾಗದ ಸಂಪುಟ ಸಭೆ ನಡೆಸಿದ್ದೇವೆ. ಇದೇ ರೀತಿ ಬೆಳಗಾವಿ ವಿಭಾಗದ ಸಂಪುಟ ಸಭೆ ವಿಜಯಪುರದಲ್ಲಿ, ಬೆಂಗಳೂರು ವಿಭಾಗದ ಸಭೆ ನಂದಿಬೆಟ್ಟದಲ್ಲಿ ನಡೆಯಲಿದೆ ಎಂದ್ರು. ಕಾಶ್ಮೀರ ಭಯೋತ್ಪಾದಕ ದಾಳಿಯಲ್ಲಿ ಮೃತರಾದ ಎಲ್ಲ ಹುತಾತ್ಮರಿಗೆ ಶ್ರದ್ಧಾಂಜಲಿ ಮತ್ತು ಧರ್ಮಗುರು ಪೋಪ್ ಅವರ ನಿಧನಕ್ಕೆ ಶ್ರದ್ಧಾಂಜಲಿ ಸಲ್ಲಿಸಲಾಯಿತು. 3,647 ಕೋಟಿ 42 ಲಕ್ಷ ಮೌಲ್ಯದ ಕಾಮಗಾರಿಗೆ ಕ್ಯಾಬಿನೆಟ್ ಅಂಗೀಕಾರ ಕೊಟ್ಟಿದೆ. PWD, ಬೃಹತ್-ಸಣ್ಣ ನೀರಾವರಿ ಇಲಾಖೆ, ಇಂಧನ ಇಲಾಖೆ, ಆರೋಗ್ಯ ಇಲಾಖೆ, ಗ್ರಾಮೀಣಾಭಿವೃದ್ಧಿ, ಬುಡಕಟ್ಟು ಅಭಿವದ್ಧಿ, ಟ್ರೈಬಲ್ ಹಳ್ಳಿಗಳಿಗೆ ರಸ್ತೆಗಳಿಗೆ ಅನುದಾನ ಬಿಡುಗಡೆ ಮಾಡಲಾಗುವುದು.

ನೀರಾವರಿಗೆ 1,787 ಕೋಟಿ ರೂಪಾಯಿ ನಿಗದಿ, sc/st ಜನರ ವಸತಿ, ಕೇರಿಗಳಿಗೆ ಮೂಲಭೂತ ಸೌಕರ್ಯ ಒದಗಿಸಲಾಗುವುದು. ಮಾನವ-ಪ್ರಾಣಿ ಸಂಘರ್ಷ ತಡೆಯಲು 210 ಕೋಟಿ ಅನುದಾನ, ರೈಲ್ವೇ ಬ್ಯಾರಿಕೇಡ್ ಪೂರ್ಣಗೊಳಿಸಲಾಗುವುದು ಎಂದ್ರು. ಕುಡಿಯುವ ನೀರಿಗಾಗಿ 315 ಕೋಟಿ, ಆರೋಗ್ಯ ಸುಧಾರಣೆಗೆ 228 ಕೋಟಿ, ಕೊಳ್ಳೇಗಾಲದಲ್ಲಿ ಜಿಲ್ಲಾ ಆಸ್ಪತ್ರೆ ನಿರ್ಮಾಣಕ್ಕೆ ಸಂಪುಟ ಅಂಗೀಕಾರ ನೀಡಿದ್ದು 250 ಬೆಡ್ಗಳ ಜಿಲ್ಲಾಸ್ಪತ್ರೆ ನಿರ್ಮಾಣ ಆಗಲಿದೆ. ಪ್ರವಾಸೋದ್ಯಮ ಇಲಾಖೆಗೆ 300 ಕೋಟಿ ಅನುದಾನ, ಹನೂರಿನಲ್ಲಿ ತಾಲೂಕು ಆಸ್ಪತ್ರೆ, ತಾಲೂಕು ಭವನ ನಿರ್ಮಾಣ. ಚಿಕ್ಕಲ್ಲೂರಿನಲ್ಲಿ ರಾಜಪ್ಪಾಜಿ, ಸಿದ್ದಪ್ಪಾಜಿ, ಮಂಟೇಸ್ವಾಮಿ ಅಭಿವೃದ್ಧಿ ಕೇಂದ್ರ ಸ್ಥಾಪಿಸಲಾಗುವುದು ಎಂದ್ರು.
ವರುಣಾದ ಇಳಿಯಾಲದಲ್ಲಿ ಅಂತರಾಷ್ಟ್ರೀಯ ಕ್ರೀಡಾಂಗಣಕ್ಕೆ ಜಾಗ ಕೊಡಲು ಸಂಪುಟ ಅಂಗೀಕಾರ ನೀಡಿದ್ದು 40 ಕೋಟಿ ಅಂದಾಜಿನಲ್ಲಿ ಬದನವಾಳು ಅಭಿವೃದ್ಧಿ. ಮೈಸೂರಿನ ವಿಮಾನ ನಿಲ್ದಾಣದ ರನ್ ವೇ ವಿಸ್ತರಣೆಗೆ 101 ಕೋಟಿ ಮೊತ್ತದ ಜಾಗ ನೀಡಲಾಗುವುದು ಎಂದ್ರು.

ಮೈಸೂರಿನ ಅಟಾರ್ಹಾ ಕಚೇರಿಯ 100 ಕೋಟಿ ವೆಚ್ಚದ ಮ್ಯೂಸಿಯಂ ನಿರ್ಮಾಣಕ್ಕೆ ಒಪ್ಪಿಗೆ ನೀಡಲಾಗಿದೆ. 475 ಕೋಟಿ ವೆಚ್ಚದಲ್ಲಿ ಗುಂಡ್ಲುಪೇಟೆಯ 110 ಕೆರೆಗಳಿಗೆ ನೀರು ತುಂಬಿಸಲು ಗ್ರೀನ್ ಸಿಗ್ನಲ್ ಕೊಟ್ಟಿದೆ. ಚಾಮರಾಜನಗರದಲ್ಲಿ ಹೊಸ ಪ್ರವಾಸಿ ಮಂದಿರ ನಿರ್ಮಾಣ, ಚಾಮರಾಜನಗರ ಟೌನ್ನಲ್ಲಿ ಕುಡಿಯುವ ನೀರು, ಒಳ ಚರಂಡಿ ನಿರ್ಮಾಣ. ಚಾಮರಾಜನಗರದಲ್ಲಿ ಕ್ರೀಡಾಂಗಣ ನಿರ್ಮಾಣಕ್ಕೆ 15 ಕೋಟಿ ಅನುದಾನಕ್ಕೆ ಸಂಪುಟ ಒಪ್ಪಿಗೆ ನೀಡಿದೆ.
ಒಟ್ಟು 3,647.62 ಕೋಟಿ ವೆಚ್ಚದಲ್ಲಿ ಮೈಸೂರು ವಿಭಾಗದಲ್ಲಿ ತುರ್ತು ಅಭಿವೃದ್ಧಿ ಕಾರ್ಯಗಳು ನಡೆಯಲಿವೆ ಎಂದು ಸಂಪುಟ ಸಭೆಯಲ್ಲಿ ಕೈಗೊಂಡ ನಿರ್ಣಯಗಳ ಬಗ್ಗೆ ಮುಖ್ಯಮಂತ್ರಿ ಸಿದರಾಮಯ್ಯ ಅವರು ಸಂಪೂರ್ಣ ವಿವರಣೆ ನೀಡಿದ್ರು. ಈ ಮೂಲಕ ಚಾಮರಾಜನಗರ, ಮೈಸೂರಿಗೆ ರಾಜ್ಯ ಸರ್ಕಾರದಿಂದ ಭರ್ಜರಿ ಗಿಫ್ಟ್ ಸಿಕ್ಕಿದೆ.
ಇದನ್ನೂ ಓದಿ : ಕೋಟಿ ಕೋಟಿ ಮೌಲ್ಯದ ಚಿನ್ನಾಭರಣ ವಂಚನೆ ಪ್ರಕರಣ – ಶಾಸಕ ವಿನಯ್ ಕುಲಕರ್ಣಿ, ಐಶ್ವರ್ಯಾ, ಶಿಲ್ಪಾಗೌಡಗೆ ED ಬಿಗ್ ಶಾಕ್!







