ಪಹಲ್ಗಾಮ್​​ನಲ್ಲಿ ಉಗ್ರರ ಅಟ್ಟಹಾಸಕ್ಕೆ ಇಬ್ಬರು ಕನ್ನಡಿಗರು ಸೇರಿ 28 ಮಂದಿ ಸಾವು!

ಪಹಲ್ಗಾಮ್ : ಮಿನಿ ಸ್ವಿಟ್ಜರ್ಲ್ಯಾಂಡ್ ಎಂದೇ ಹೆಸರಾಗಿರುವ ಜಮ್ಮು-ಕಾಶ್ಮೀರದ ಅನಂತ್​ನಾಗ್ ಜಿಲ್ಲೆಯ ಪಹಲ್ಗಾಮ್ ನಬೈಸರನ್ ಕಣಿವೆಯಲ್ಲಿ ನಿನ್ನೆ ಟಿಆರ್​ಎಫ್ ಉಗ್ರರು ಅಟ್ಟಹಾಸ ಮೆರೆದಿದ್ದಾರೆ.

ಕಣಿವೆಗಳಿಂದ ಕೂಡಿದ ಸುಂದರ ಪ್ರವಾಸಿ ತಾಣದಲ್ಲಿ ಮರಗಳ ನಡುವಿನಿಂದ ಬಂದ ಉಗ್ರರು, ಪ್ರವಾಸಿಗರ ರಕ್ತದೋಕುಳಿ ಹರಿಸಿದ್ದಾರೆ. ಕಂಡ ಕಂಡಲ್ಲಿ ವಿಶೇಷವಾಗಿ ಪುರುಷರನ್ನೇ ಗುರಿಯಾಗಿಸಿಕೊಂಡು ಗುಂಡಿನ ದಾಳಿ ನಡೆಸಿದ್ದಾರೆ. ಪರಿಣಾಮ ಕರ್ನಾಟಕ, ಒಡಿಶಾ ಸೇರಿದಂತೆ ವಿವಿಧ ಕಡೆಗಳಿಂದ ಪ್ರವಾಸಕ್ಕೆ ತೆರಳಿದ್ದ 28ಕ್ಕೂ ಹೆಚ್ಚು ಮಂದಿ ಬಲಿಯಾಗಿದ್ದಾರೆ. ಇವರಲ್ಲಿ ಇಬ್ಬರು ವಿದೇಶಿಗರು ಸೇರಿದ್ದಾರೆ.

ಗುಂಡಿನ ದಾಳಿಯಲ್ಲಿ ಇಬ್ಬರು ಕನ್ನಡಿಗರ ಬಲಿ : ಶಿವಮೊಗ್ಗದ ರಿಯಲ್ ಎಸ್ಟೇಟ್ ಉದ್ಯಮಿಯಾಗಿದ್ದ ಮಂಜುನಾಥ್ ರಾವ್​ ಸಾವನ್ನಪ್ಪಿದ್ದಾರೆ. ಆದರೆ ಗುಂಡಿನ ದಾಳಿಯಲ್ಲಿ ಮಂಜುನಾಥ್ ಅವರ ಪತ್ನಿ ಪಲ್ಲವಿ ಮತ್ತು ಮಗ ಸುರಕ್ಷಿತವಾಗಿದ್ದಾರೆ.

ಉಗ್ರರ ಕೌರ್ಯವನ್ನು ಸುದ್ದಿವಾಹಿನಿಯೊಂದಕ್ಕೆ ಹಂಚಿಕೊಂಡಿರುವ ಮಂಜುನಾಥ್ ಪತ್ನಿ ಪಲ್ಲವಿ, ನನ್ನ ಪತಿಯ ಕೊಂದ ಉಗ್ರನ ಬಳಿ ನನ್ನ ಪತಿಯನ್ನಷ್ಟೇ ಏಕೆ ಕೊಂದೆ? ನನ್ನನ್ನೂ ನನ್ನ ಮಗನನ್ನೂ ಕೊಂದುಬಿಡು ಎಂದು ಛಿ ಮಾರಿ ಹಾಕಿದ್ದಾರೆ. ಇದಕ್ಕೆ ತಣ್ಣಗೆ ಉತ್ತರಿಸಿರುವ ಉಗ್ರ ಹೋಗಿ ಇದನ್ನು ಮೋದಿಗೆ ಹೇಳು, ನಿಮ್ಮಿಬ್ಬರನ್ನೂ ಜೀವ ಸಹಿತ ಬಿಡುತ್ತಿದ್ದೇನೆ ಎಂದು ಹೇಳಿದ್ದಾನೆ” ಎಂದು ಹೇಳಿದ್ದಾರೆ.

ಮತ್ತೋರ್ವ ಕನ್ನಡಿಗನ ಹತ್ಯೆ : ಪಹಲ್ಗಾಮ್ ನಲ್ಲಿ ನಡೆದ ಉಗ್ರರ ಗುಂಡಿನ ದಾಳಿಯಲ್ಲಿ ಮತ್ತೋರ್ವ ಕನ್ನಡಿಗನ ಹತ್ಯೆಯಾಗಿದೆ. ಬೆಂಗಳೂರಿನಲ್ಲಿ ವಾಸವಿದ್ದ ಹಾವೇರಿ ಮೂಲದ ಭರತ್ ಭೂಷಣ್ ಮೃತಪಟ್ಟಿರುವುದಾಗಿ ತಿಳಿದುಬಂದಿದೆ. ಉಗ್ರರ ಗುಂಡಿಗೆ ಬಲಿಯಾಗಿರುವ ಬೆಂಗಳೂರು ನಿವಾಸಿ ಭರತ್ ಭೂಷಣ್, ಪ್ರಕಾಶ್ ಕೋಳಿವಾಡ ತಂಗಿಯ ಗಂಡನ ಸ್ನೇಹಿತ ಎಂದು ತಿಳಿದುಬಂದಿದೆ. ಹೀಗಾಗಿ ಕೋಳಿವಾಡ ಕುಟುಂಬ ಸಹ ಭರತ್ ಭೂಷಣ್ ಮೃತ ದೇಹ ತರಿಸಲು ಸರ್ಕಾರದ ಮಟ್ಟದಲ್ಲಿ ಪ್ರಯತ್ನ ನಡೆಸುತ್ತಿದ್ದಾರೆ.

ಕಳೆದ 30 ವರ್ಷದಲ್ಲಿ ಅತ್ಯಂತ ದೊಡ್ಡ ದಾಳಿ : ಕಳೆದ ಕೆಲವು ದಿನಗಳಿಂದ ಶಾಂತಯುತವಾಗಿದೆ ಎನ್ನಲಾಗುತ್ತಿದ್ದ ಕಣಿವೆ ಪ್ರದೇಶದಲ್ಲಿ ಕಳೆದ 30 ವರ್ಷದಲ್ಲಿ ನಡೆದ ಅತ್ಯಂತ ದೊಡ್ಡ ದಾಳಿಯಾಗಿದೆ. ಇತ್ತೀಚಿನ ವರ್ಷಗಳಲ್ಲಿ ಇಂತಹ ದಾಳಿಯನ್ನು ನೋಡಿರಲಿಲ್ಲ ಎಂದು ಜಮ್ಮು-ಕಾಶ್ಮೀರ ಮುಖ್ಯಮಂತ್ರಿ ಓಮರ್ ಅಬ್ದುಲ್ಲಾ ಹೇಳಿದ್ದಾರೆ.

ಇದನ್ನೂ ಓದಿ : ಡಾ.ರಾಜ್​ಕುಮಾರ್ 96ನೇ ಹುಟ್ಟುಹಬ್ಬದ ಸಂಭ್ರಮ – ಇಂಟರ್​ ನ್ಯಾಷನಲ್ ಆರ್ಟ್ಸ್ & ಕಲ್ಚರಲ್ ಫೌಂಡೇಶನ್​​ನಿಂದ ನೃತ್ಯ ಪ್ರದರ್ಶನ!

Btv Kannada
Author: Btv Kannada

Read More

Read More